ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ  ಆಸ್ಪತ್ರೆಯಲ್ಲಿ ಆಪರೇಷನ್ ಮಾಡುವುದನ್ನು ಲೈವ್‌ನಲ್ಲಿ ತೋರಿಸಲಾಗಿದೆ. ಜನಜಾಗೃತಿ ನಿಟ್ಟಿನಲ್ಲಿ  ಆಪರೇಷನ್ ಲೈವ್ ತೋರಿಸಲಾಗಿದೆ. 

ಚಾಮರಾಜನಗರ (ಮಾ.24):  ರಾಜ್ಯದಲ್ಲೇ ಮೊದಲ ಬಾರಿಗೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಗರ್ಭಕೋಶ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಹೊಟ್ಟೆಕುಯ್ಯದೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯಲ್ಲಿ ಮಂಗಳವಾರ ನಡೆದಿದೆ. 

Add Asianetnews Kannada as a Preferred SourcegooglePreferred

ವಿಶೇಷವೆಂದರೆ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಶಸ್ತ್ರಚಿಕಿತ್ಸೆಯ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ಮಾಡಲಾಗಿದ್ದು, ದೇಶವಿದೇಶಗಳ ವೈದ್ಯರೂ ಸೇರಿದಂತೆ ಸುಮಾರು 200 ಮಂದಿ ವೀಕ್ಷಿಸಿ ಹಲವು ಸಂದೇಹಗಳನ್ನು ಪರಿಹರಿಸಿಕೊಂಡಿದ್ದಾರೆ.

ಹೊಟ್ಟೆ ಆಪರೇಷನ್ ಮಾಡಿ ಸ್ಟಿಚ್ ಹಾಕದೆ ಬಿಟ್ಟ ವೈದ್ಯರು, 3 ವರ್ಷದ ಕಂದ ಸಾವು

ಏನಿದು ಶಸ್ತ್ರಚಿಕಿತ್ಸೆ?

ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಈ ಶಸ್ತ್ರ ಚಿಕಿತ್ಸೆ ಮಹಿಳೆಯರಲ್ಲಿರುವ ಭೀತಿಯನ್ನು ಹೋಗಲಾಡಿಸಿದೆ. ಗರ್ಭಕೋಶದ ಗಡ್ಡೆ, ಗರ್ಭಕೋಶ ಶಸ್ತ್ರಚಿಕಿತ್ಸೆ ಬಳಿಕ ಸಡಿಲಗೊಂಡ ಚೀಲದಿಂದ ಮೂತ್ರ ಸೋರುವುದು, ಹೆರಿಗೆ ಬಳಿಕ ಕೆಮ್ಮಿದಾಗ, ನಡೆದಾಗ ಮೂತ್ರ ಸೋರುವುದು, ಯೋನಿಭಾಗ ಜರುಗಿರುವುದು ಸೇರಿದಂತೆ ಗರ್ಭಕೋಶದ ಇತರ ನ್ಯೂನತೆಗಳನ್ನು ಹೊಟ್ಟೆಕೊಯ್ಯದೆ, ಲ್ಯಾಪ್ರೋಸ್ಕೋಪಿ ವಿಧಾನ ಬಳಸದೆ ಯೋನಿ ಭಾಗದಿಂದ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಮೈಸೂರು, ಬೆಂಗಳೂರಿನ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಗಳಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಲು ಅಂದಾಜು 1ರಿಂದ .2 ಲಕ್ಷ ಖರ್ಚಾಗುತ್ತದೆ ಎಂದು ಹೇಳಲಾಗುತ್ತಿದ್ದು, ಸಂತೇಮರಹಳ್ಳಿ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಮಾಡಿರುವುದು ಸರ್ಕಾರಿ ಆಸ್ಪತ್ರೆಯ ಸೇವೆ ಬಗ್ಗೆ ಜನರಲ್ಲಿ ಹೆಮ್ಮೆ ಮೂಡಿಸಿದೆ. ಕೇಂದ್ರದ ಸ್ತ್ರೀರೋಗ ತಜ್ಞೆ ಮತ್ತು ಆಡಳಿತಾಧಿಕಾರಿ ಡಾ.ಸಿ.ಎನ್‌. ರೇಣುಕಾದೇವಿ ಈ ವಿಶೇಷ ಪ್ರಯತ್ನದ ರೂವಾರಿಯಾಗಿ ಯಶಸ್ವಿಯೂ ಆಗಿದ್ದಾರೆ. ಬೆಂಗಳೂರಿನ ಇಎಸ್‌ಐ ಆಸ್ಪತ್ರೆಯ ಪ್ರೊ.ಡಾ.ಚಂದ್ರಶೇಖರ್‌ ಮೂರ್ತಿ, ಡಾ.ಲಕ್ಷ್ಮೀ, ಡಾ.ಮಧುರ, ಡಾ.ಪ್ರದೀಪ್‌, ಡಾ.ಶ್ರೀಧರ್‌, ಡಾ.ಮಹೇಶ್‌, ಡಾ.ದೇವರಾಜು ಮತ್ತು ಇತರ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದರು.