ಅಕ್ಷರ ನಾಶವಿಲ್ಲದ್ದು. ಇದರ ಹಿಂದೆ ಹೋದವರು ಬೆಳೆದಿದ್ದಾರೆ. ಸ್ವಾರ್ಥ ಚಿಂತನೆಯನ್ನು ಬದಿಗಿಟ್ಟು ಬರೆದ ಅಕ್ಷರ ಶಾಶ್ವತವಾಗುತ್ತದೆ. ಈ ಬಗ್ಗೆ ಭಾರತೀಯ ತತ್ವಶಾಸ್ತ್ರದಲ್ಲಿ ಬಹುದೊಡ್ಡ ಪರಂಪರೆಯೇ ಇದೆ. ಅನೇಕ ಚಿಂತಕರು, ಲೇಖಕರು ಮತ್ತು ದಾರ್ಶನಿಕರಿಗೆ ಜನ್ಮ ನೀಡಿದ ನೆಲ ಎಂದು ಚಿಂತಕಿ ವೀಣಾ ಬನ್ನಂಜೆ ಹೇಳಿದ್ದಾರೆ. 

ಉಡುಪಿ (ನ.26): ಅಕ್ಷರ ನಾಶವಿಲ್ಲದ್ದು. ಇದರ ಹಿಂದೆ ಹೋದವರು ಬೆಳೆದಿದ್ದಾರೆ. ಸ್ವಾರ್ಥ ಚಿಂತನೆಯನ್ನು ಬದಿಗಿಟ್ಟು ಬರೆದ ಅಕ್ಷರ ಶಾಶ್ವತವಾಗುತ್ತದೆ. ಈ ಬಗ್ಗೆ ಭಾರತೀಯ ತತ್ವಶಾಸ್ತ್ರದಲ್ಲಿ ಬಹುದೊಡ್ಡ ಪರಂಪರೆಯೇ ಇದೆ. ಅನೇಕ ಚಿಂತಕರು, ಲೇಖಕರು ಮತ್ತು ದಾರ್ಶನಿಕರಿಗೆ ಜನ್ಮ ನೀಡಿದ ನೆಲ ಎಂದು ಚಿಂತಕಿ ವೀಣಾ ಬನ್ನಂಜೆ ಹೇಳಿದ್ದಾರೆ. ಆಧ್ಯಾತ್ಮಿಕವಾಗಿ ಉಡುಪಿ ವಿಶ್ವದಲ್ಲೇ ಗುರುತಿಸಲ್ಪಟ್ಟಿದೆ. ತತ್ವಜ್ಞಾನಿಗಳನ್ನು ಹೊರಗಿಟ್ಟು ಸಾಹಿತ್ಯ ಬೆಳೆಯುವುದು ಅಸಾಧ್ಯ ಎಂದು ಸಾಹಿತಿ, ಚಿಂತಕಿ ವೀಣಾ ಬನ್ನಂಜೆ ಅಭಿಪ್ರಾಯ ವ್ಯಕ್ತಪಡಿಸಿದರು. 

Add Asianetnews Kannada as a Preferred SourcegooglePreferred

ಅವರು ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಮತ್ತು ತಾಲೂಕು ಘಟಕ ಆಶ್ರಯದಲ್ಲಿ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆದ ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಜ್ಞಾನ ಪರಂಪರೆಯಲ್ಲಿ ಅವಿದ್ಯೆ ಮತ್ತು ವಿದ್ಯೆ ಎಂಬ 2 ವಿಧಗಳಿವೆ. ಇಂದಿನ ಎಲ್ಲಾ ಸಾಹಿತ್ಯಗಳು ಅವಿದ್ಯೆ. ಆತ್ಮಶೋಧನೆಗೆ ಒಳಪಡಿಸುವುದು ವಿದ್ಯೆ. ಅವಿದ್ಯೆ ಬೌಧ್ಧಿಕ ಬಡತನ ಹಾಗೂ ಅಹಂಕಾರದ ಪ್ರತಿಫಲ. ಇದು ಅಂತಿಮವಾಗಬಾರದು. ಆಧುನಿಕ ಸಾಹಿತ್ಯಗಳು ಆತ್ಮಶೋಧನೆಗೆ ಕನ್ನಡಿಯಾಗಬೇಕು ಎಂದರು. 

ಮಂಗಳೂರು ಸ್ಫೋಟ ಪ್ರಕರಣ: ಸಮಾಜವನ್ನು ದುರ್ಬಲಗೊಳಿಸಲು ಬಿಡುವುದಿಲ್ಲ: ಸಚಿವ ಸುನಿಲ್ ಕುಮಾರ್

ಬಹುಭಾಷಾ ವಿದ್ವಾಂಸ ಡಾ ಎನ್. ತಿರುಮಲೇಶ್ವರ ಭಟ್ ಸರ್ವಾಧ್ಯಕ್ಷತೆ ವಹಿಸಿದ್ದರು. ಉಡುಪಿ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಹಾಗೂ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಸಮ್ಮೇಳನಾಧ್ಯಕ್ಷರ ಪುಸ್ತಕ ಅನಾವರಣಗೊಳಿಸಿದರು. ಭಾಷಾ ವಿಜ್ಞಾನಿ ನಾಡೋಜ ಡಾ. ಕೆ. ಪಿ. ರಾವ್ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಪುಸ್ತಕ ಮಳಿಗೆ ಹಾಗೂ ಶಾಸಕ ರಘುಪತಿ ಭಟ್ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು. 

Udupi: ಯಕ್ಷ ಶಿಕ್ಷಣ ವಿದ್ಯಾರ್ಥಿಗಳಿಂದ ವೈಭವದ ಯಕ್ಷೋತ್ಸವ

ಅಂಬಲಪಾಡಿ ದೇವಳ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್, ಹೆಬ್ರಿ ಕಸಾಪ ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಕಾಪು ಕಸಾಪ ಅಧ್ಯಕ್ಷ ಪುಂಡಳೀಕ ಮರಾಠೆ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಹಿಳಾ ಆಯೋಗ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ವಳಕಾಡು ಸಂಯುಕ್ತ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಕುಮಾರಿ,ಕಸಾಪ ಉಡುಪಿ ತಾಲೂಕು ಗೌರವ ಕಾರ‌್ಯದರ್ಶಿ ರಂಜಿನಿ ವಸಂತ್, ಕೋಶಾಧಿಕಾರಿ ರಾಜೇಶ್ ಭಟ್ ಪಣಿಪಾಡಿ, ಸಂಘಟನಾ ಕಾರ‌್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಸ್ವಾಗತಿಸಿ, ಗೌರವ ಕಾರ‌್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು. ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ ನಿರೂಪಿಸಿದರು.