ಕುಸಿತವಾಯ್ತು ಮದ್ಯ ಮಾರಾಟ : ಕಾರಣ ಕೊರೋನಾ!
ಕೊರೋನಾ ಸಂದರ್ಭದಲ್ಲಿ ಮದ್ಯ ಮಾರಾಟ ಪ್ರಮಾಣದಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಹಾಗಾದ್ರೆ ಹಾಗಾದ್ರೆ ಕುಡುಕರೆಲ್ಲಾ ಕುಡಿತ ಬಿಟ್ರಾ..?
ಮಂಡ್ಯ(ಆ.19): ಏಪ್ರಿಲ್ನಿಂದ ಈವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ. ಕೊರೋನಾ ಸೋಂಕು ನಿಯಂತ್ರಿಸಲು ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಮದ್ಯದಂಗಡಿಗಳ ವ್ಯಾಪಾರ ವಹಿವಾಟಿನಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಜಿಲ್ಲಾ ಅಬಕಾರಿ ಅಧಿಕಾರಿ ಬಿ.ಶಿವಪ್ರಕಾಶ್ ಹೇಳಿದರು.
ನಾಲ್ಕು ತಿಂಗಳ ಅವಧಿಯಲ್ಲಿ ಜಿಲ್ಲೆಯೊಳಗೆ 4,80,681 ಸ್ವದೇಶಿ ಮದ್ಯ, 1,00,534 ಪೆಟ್ಟಿಗೆ ಬಿಯರ್ ಎತ್ತುವಳಿಯಾಗಿದೆ. ಕಳೆದ ಸಾಲಿಗೆ ಇದೇ ಅವಧಿಯಲ್ಲಿ 6,34,069 ರಟ್ಟಿನ ಪೆಟ್ಟಿಗೆ ಮದ್ಯ, 2,22,456 ರಟ್ಟಿನ ಪೆಟ್ಟಿಗೆಗಳಷ್ಟುಬಿಯರ್ ಬಳಕೆಯಾಗಿತ್ತು. ಇದರೊಂದಿಗೆ ಶೇ.24.19 (1,53,388 ರೆಟ್ಟಿನ ಪೆಟ್ಟಿಗೆ) ಮದ್ಯ ಹಾಗೂ ಶೇ. 54.81ರಷ್ಟು1,21,919 ರಟ್ಟಿನ ಪೆಟ್ಟಿಗೆ ಬೀಯರ್ ಬಳಕೆ ಕಡಿಮೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಇಲ್ಲಿಯ ಜನರಿಗೆ ಐದು ತಿಂಗಳ ನಂತರ ಮದ್ಯದಂಗಡಿ ಓಪನ್ ಭಾಗ್ಯ!.
ಕೋವಿಡ್ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾಡಿದ್ದ ವೇಳೆ ಮದ್ಯ ದಾಸ್ತಾನು ಮತ್ತು ಅಂಗಡಿ ತೆರೆದ ಸಮಯದಲ್ಲಿ ದಾಸ್ತಾನಿನಲ್ಲಿ ವ್ಯತ್ಯಾಸವಾಗಿರುವ ಜಿಲ್ಲೆಯ 10 ಅಂಗಡಿಗಳನ್ನು ಸೀಜ್ ಮಾಡಲಾಗಿದ್ದು, ಅಂತಹ ಅಂಗಡಿಗಳಿಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ದಂಡ ವಿಧಿಸಿದ ಬಳಿಕ ತೆರೆಯಲು ಅನುಮತಿ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಳ್ಳಭಟ್ಟಿತಯಾರಿಕೆ ಬಂದ್:
ಈ ಹಿಂದೆ ಕೆ.ಆರ್.ಪೇಟೆಯ ಜಾಗನಕೆರೆ ಬೆಟ್ಟದ ತಪ್ಪಲು, ಸಾರಂಗಿ, ಮಳವಳ್ಳಿ ತಾಲೂಕಿನ ಹೊಸದೊಡ್ಡಿ, ದಾಳನಕಟ್ಟೆಮತ್ತು ಮುತ್ತತ್ತಿ ಅರಣ್ಯ ಪ್ರದೇಶ ಹಾಗೂ ಮುತ್ತತ್ತಿಯ ಹರಿಜನ ಕಾಲೋನಿಯಲ್ಲಿ ಕಳ್ಳಭಟ್ಟಿ, ನಕಲಿ ಮದ್ಯ, ಸೇಂದಿ ತಯಾರಿಕಾ ಘಟಕಗಳು ಇದ್ದವು. ಈ ಎಲ್ಲ ಗ್ರಾಮಗಳಲ್ಲೂ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಸೇಂದಿ, ಕಳ್ಳಭಟ್ಟಿತಯಾರಿಸುತ್ತಿದ್ದವರೆಲ್ಲರೂ ಅಕ್ರಮಗಳನ್ನು ಬಿಟ್ಟು ರೇಷ್ಮೆ, ತೋಟ, ಹಿಪ್ಪನೇರಳೆ, ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಮದ್ಯಪ್ರಿಯರಿಗಾಗಿ ಹಿಪ್ ಬಾರ್ ತೆರೆದ ಫ್ಲಿಪ್ ಕಾರ್ಟ್.. ಆನ್ಲೈನ್ನಲ್ಲೇ ಎಣ್ಣೆ!
ಕಬ್ಬಿನ ಗದ್ದೆಗಳು, ಹಿಪ್ಪನೇರಳೆ, ತೋಟಗಳ ನಡುವೆ ಗಾಂಜಾ ಗಿಡಗಳನ್ನು ಬೆಳೆಯುತ್ತಿರುವ ಬಗ್ಗೆಯೂ ಪರಿಶೀಲನೆ ನಡೆಸಿದ್ದು, ಯಾವುದೇ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿಲ್ಲ. ಒಂದು ವೇಳೆ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದಲ್ಲಿ ಅಬಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಕಳ್ಳಭಟ್ಟಿ, ವಿಷಪೂರಿತ ಮದ್ಯ, ಕಲಬೆರಕೆ ಸೇಂದಿ ತಯಾರಿಕೆ, ಸಂಗ್ರಹ ಮತ್ತು ಮಾರಾಟ ನಡೆಯದಂತೆ ತೀವ್ರ ನಿಗಾ ಹಿಸಲಾಗಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಇಂತಹ ಚಟುವಟಿಕೆ ನಡೆಯುತ್ತಿಲ್ಲ
- ಬಿ. ಶಿವಪ್ರಸಾದ್, ಜಿಲ್ಲಾ ಅಬಕಾರಿ ಅಧಿಕಾರಿ