ಜೂ. 22, 23ರಂದು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ: ಡಿಸಿ ನಕುಲ್‌| ಅನ್ಯರಾಜ್ಯಗಳ ವಲಸೆ ಕಾರ್ಮಿಕರಿಗೆ ಇದು ಅಂತಿಮ ಅವಕಾಶವಾಗಿದ್ದು, ಗಮನಹರಿಸಬೇಕು| ಬಳ್ಳಾರಿಯಿಂದ ಬಸ್‌ ಮೂಲಕ ಆಹಾರ ಕಿಟ್‌ ಸೇರಿದಂತೆ ಅಗತ್ಯ ವಸ್ತುಗಳ ಸಮೇತ ಬೆಂಗಳೂರಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಅವರವರ ರಾಜ್ಯಕ್ಕೆ ಕಳುಹಿಸುವುದಕ್ಕೆ ವ್ಯವಸ್ಥೆ|

ಬಳ್ಳಾರಿ(ಜೂ.22): ಜಿಲ್ಲೆಯಲ್ಲಿರುವ ಅನ್ಯ ರಾಜ್ಯಗಳ ವಲಸೆ ಕಾರ್ಮಿಕರು ಅವರವರ ಸ್ವರಾಜ್ಯಕ್ಕೆ ತೆರಳಬೇಕಿದ್ದಲ್ಲಿ ಇದೇ ಜೂ. 22 ಮತ್ತು 23 ರಂದು ಮಧ್ಯಾಹ್ನ 2ರಿಂದ ಬಳ್ಳಾರಿಯ ಎನ್‌ಇಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಡೆಯುವ ವೈದ್ಯಕೀಯ ತಪಾಸಣೆ ಶಿಬಿರದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಸರ್ಕಾರದ ನೇತೃತ್ವದಲ್ಲಿ ಅನ್ಯ ರಾಜ್ಯಗಳಿಗೆ ವಲಸೆ ಕಾರ್ಮಿಕರನ್ನು ಕರೆದುಕೊಂಡು ಹೋಗುವ ಶ್ರಮಿಕ್‌ ರೈಲು ಓಡಾಟ ಇದೇ ಜೂ. 24ರಂದು ಕೊನೆಯದ್ದಾಗಲಿದೆ. ಆದ್ದರಿಂದ ಜಿಲ್ಲೆಯಲ್ಲಿರುವ ಅನ್ಯ ರಾಜ್ಯಗಳ ವಲಸೆ ಕಾರ್ಮಿಕರು ತಮ್ಮ ರಾಜ್ಯಕ್ಕೆ ತೆರಳಲು ಇಚ್ಚಿಸಿದಲ್ಲಿ ಜೂ. 22, 23ರಂದು ಬಸ್‌ ನಿಲ್ದಾಣದಲ್ಲಿ ನಡೆಯುವ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ವೈದ್ಯಕೀಯ ತಪಾಸಣಾ ಪ್ರಮಾಣಪತ್ರ ಹಾಗೂ ಇನ್ನಿತರ ದಾಖಲೆಗಳನ್ನು ಪಡೆದುಕೊಳ್ಳಬೇಕು ಎಂದು ವಿವರಿಸಿದ್ದಾರೆ.

ಕೂಡ್ಲಿಗಿ: ಕ್ಷುಲ್ಲಕ ಕಾರಣಕ್ಕೆ ಎರಡು ಊರುಗಳ ಮಧ್ಯೆ ಮಾರಾಮಾರಿ

ಇಲ್ಲಿ ತಪಾಸಣೆ ಮಾಡಿದ ನಂತರ ಯಾರು ಯಾವ ರಾಜ್ಯಕ್ಕೆ ಕಳುಹಿಸಬೇಕು ಎಂಬುದನ್ನು ಪಟ್ಟಿಮಾಡಿ ಅವರನ್ನು ಬಳ್ಳಾರಿಯಿಂದ ಬಸ್‌ ಮೂಲಕ ಆಹಾರ ಕಿಟ್‌ ಸೇರಿದಂತೆ ಅಗತ್ಯ ವಸ್ತುಗಳ ಸಮೇತ ಬೆಂಗಳೂರಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಅವರವರ ರಾಜ್ಯಕ್ಕೆ ಕಳುಹಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಅನ್ಯರಾಜ್ಯಗಳ ವಲಸೆ ಕಾರ್ಮಿಕರಿಗೆ ಇದು ಅಂತಿಮ ಅವಕಾಶವಾಗಿದ್ದು, ಗಮನಹರಿಸಬೇಕು ಎಂದು ತಿಳಿಸಿರುವ ಜಿಲ್ಲಾಧಿಕಾರಿಗಳು ನಂತರ ತೆರಳಲು ಇಚ್ಚಿಸಿದಲ್ಲಿ ಅದು ಅವರವರ ಸ್ವಂತ ಜವಾಬ್ದಾರಿಯಾಗಿರುತ್ತದೆ. ಜಿಲ್ಲಾಡಳಿತದ ಜವಾಬ್ದಾರಿಯಾಗಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.