Asianet Suvarna News Asianet Suvarna News

ಕೂಡ್ಲಿಗಿ: ಕ್ಷುಲ್ಲಕ ಕಾರಣಕ್ಕೆ ಎರಡು ಊರುಗಳ ಮಧ್ಯೆ ಮಾರಾಮಾರಿ

ಐವರಿಗೆ ಗಂಭೀರ ಗಾಯ| 55ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ| ಎರಡು ಗ್ರಾಮಗಳ ಜನರಿಂದ ದೂರು, ಪ್ರತಿದೂರು ದಾಖಲು| ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗೋವಿಂದಗಿರಿ ಗ್ರಾಮದಲ್ಲಿ ನಡೆದ ಘಟನೆ|

Clash Between Two Villages in Kudligi in Ballari District
Author
Bengaluru, First Published Jun 22, 2020, 8:42 AM IST

ಕೂಡ್ಲಿಗಿ(ಜೂ.22): ತಾಲೂಕಿನ ಗೋವಿಂದಗಿರಿಯಲ್ಲಿ ಶನಿವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಎರಡು ಗ್ರಾಮಗಳ ನಡುವೆ ಮಾರಾಮಾರಿ ಸಂಭವಿಸಿದ್ದು, 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಇವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.

ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಗೋವಿಂದಗಿರಿ ಗೊಲ್ಲರಹಟ್ಟಿ ಹಾಗೂ ಗೋವಿಂದಗಿರಿ ತಾಂಡಾ ಎರಡು ಅವಳಿ ಗ್ರಾಮಗಳಿದ್ದು ಎರಡು ಗ್ರಾಮಗಳು ಕೂಡಿಕೊಂಡಿವೆ. ಗೋವಿಂದಗಿರಿ ಗೊಲ್ಲರಹಟ್ಟಿಯ ಯುವಕ ಚಕ್ಕಡಿಯನ್ನು ಓಡಿಸುತ್ತಿದ್ದಾಗ ಗೋವಿಂದಗಿರಿ ತಾಂಡಾದ ಬಾಲಕನಿಗೆ ಚಕ್ಕಡಿ ತಾಗಿದೆ. ಹೀಗಾ​ಗಿ ಗೊಲ್ಲರಹಟ್ಟಿಯ ಚಕ್ಕಡಿ ಓಡಿಸುತ್ತಿದ್ದ ಯುವಕನಿಗೆ ತಾಂಡಾದ ಯುವಕನೊಬ್ಬ ಹೊಡೆದಿದ್ದಾನೆ. 

ಬಳ್ಳಾರಿ ಜಿಲ್ಲೆಯಲ್ಲಿ ಹೊಸ 14 ಕೊರೋನಾ ಪಾಸಿಟಿವ್‌ ಕೇಸ್‌

ಈ ಪ್ರಕರಣ ಶನಿವಾರ ಕೂಡ್ಲಿಗಿ ಪೊಲೀಸ್‌ ಠಾಣೆಗೆ ಬಂದಿತ್ತು. ಆಗ ಎರಡು ಗ್ರಾಮಗಳ ಹಿರಿಯರ ಮಧ್ಯಸ್ಥಿಕೆಯಲ್ಲಿ ದೂರು ನೀಡುವುದು ಬೇಡ ಎಂದು ನಿರ್ಧ​ರಿ​ಸಿದ್ದರು. ಆದರೆ, ಶನಿವಾರ ಮಧ್ಯಾಹ್ನದ ನಂತರ ಪುನಃ ಎರಡು ಗ್ರಾಮಗಳ ಜನತೆಯ ನ​ಡು​ವೆ ಮಾತಿಗೆ ಮಾತು ಬೆಳೆ​ದು ಹೊಡೆದಾಟ ಶುರುವಾಗಿದ್ದು, 5 ಜನರು ಗಂಭೀರವಾಗಿ ಗಾಯಗೊಂಡಿದ್ದಾ​ರೆ. ಗಾಯಗೊಂಡಿದ್ದ 10 ಜನರನ್ನು ತಕ್ಷಣವೇ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಗಂಭೀರ ಗಾಯಗಳಾಗಿರುವ 5 ಜನರನ್ನು ಬಳ್ಳಾರಿ ವಿಮ್ಸ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಎರಡು ಗ್ರಾಮಗಳ ಜನರಿಂದ ದೂರು, ಪ್ರತಿದೂರು ದಾಖಲಾಗಿದೆ. 55ಕ್ಕೂ ಹೆಚ್ಚು ಜನರ ವಿರುದ್ದ ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಶನಿವಾರ ರಾತ್ರಿ ಪ್ರಕರಣ ದಾಖಲಾಗಿದೆ. ಎರ​ಡೂ ಗ್ರಾಮಗಳ ಹಿರಿಯರಿಗೆ ಈ ಪ್ರಕರಣದಿಂದ ಬೇಸರವಾಗಿದ್ದು, ಹಿರಿಯರು ಮನವೊಲಿಸಲು ಪ್ರಯತ್ನಿಸಿದ್ದಾರೆ.
 

Follow Us:
Download App:
  • android
  • ios