ಮಂಡ್ಯದಲ್ಲಿ ಕನ್ನಡ ಮಾತಾಡದ ಅಧಿಕಾರಿಗೆ ರೈತನ ತರಾಟೆ ಬ್ಯಾಂಕ್‌ ಮ್ಯಾನೇಜರ್‌ಗೆ ತರಾಟೆ ತೆಗೆದುಕೊಂಡ ರೈತ  ಮರಾಠಿ ಮಾತಾಡೆಂದ ಬ್ಯಾಂಕ್‌ ಮ್ಯಾನೇಜರ್‌ಗೆ ಕನ್ನಡ ಕಲಿ ಎಂದ ರೈತ  

 ಮಂಡ್ಯ (ಮೇ.17) : ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪ್ರಾದೇಶಕ ಭಾಷೆ ಅರಿಯದ ಸಿಬ್ಬಂದಿ, ಅಧಿಕಾರಿಗಳ ನೇಮಕದಿಂದಾಗಿ ರಾಜ್ಯದ ಗ್ರಾಮೀಣ ಪ್ರದೇಶದ ಜನರಿಗೆ ಸಮಸ್ಯೆಯಾಗುತ್ತಿದೆ ಎಂಬ ದೂರು ಆಗಾಗ ಕೇಳಿಬರುತ್ತಿದ್ದು, ಇದೀಗ ಮಂಡ್ಯದಲ್ಲಿ ಇಂಗ್ಲಿಷ್‌ ಇಲ್ಲಾ ಮರಾಠಿ ಮಾತನಾಡುವಂತೆ ಉದ್ಧಟತನ ಪ್ರದರ್ಶಿಸಿದ ಅಸಿಸ್ಟೆಂಟ್‌ ಮ್ಯಾನೇಜರ್‌ಗೆ ರೈತನೊಬ್ಬ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ತಾಲೂಕಿನ ಕೆರಗೋಡು ಗ್ರಾಮದಲ್ಲಿರುವ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯಲ್ಲಿ ಸೋಮಶೇಖರ್‌ ಎಂಬ ರೈತರೊಬ್ಬರು ಪ್ರಧಾನಮಂತ್ರಿ ಕಿಸಾನ್‌ ಯೋಜನೆಯ ಹಣ ಪಡೆಯಲು ತೆರಳಿದ್ದರು. ಬ್ಯಾಂಕಿನ ವ್ಯವಹಾರಕ್ಕಾಗಿ ಅಸಿಸ್ಟೆಂಟ್‌ ಮ್ಯಾನೇಜರ್‌ ಜೊತೆ ರೈತ ಸಂವಹನ ನಡೆಸಿದಾಗ ಆತನಿಗೆ ಕನ್ನಡ ಬರುತ್ತಿರಲಿಲ್ಲ. ಅದಕ್ಕಾಗಿ ಇಂಗ್ಲಿಷ್‌ ಅಥವಾ ಮರಾಠಿಯಲ್ಲಿ ಮಾತನಾಡುವಂತೆ ಹೇಳಿದರು. ಇದರಿಂದ ಆಕ್ರೋಶಗೊಂಡ ರೈತ ಸೋಮಶೇಖರ್‌ ‘ನಾನೇಕೆ ಮರಾಠಿಯಲ್ಲಿ ಮಾತನಾಡಲಿ? ನೀನು ಕನ್ನಡ ನೆಲಕ್ಕೆ ಬಂದಿದ್ದೀಯಾ. ಕನ್ನಡ ಮಾತನಾಡುವುದನ್ನು ಮೊದಲು ನೀನು ಕಲಿತುಕೋ. ಕನ್ನಡ ಗೊತ್ತಿಲ್ಲದಿದ್ದರೆ ನಾನೇ ಹೇಳಿಕೊಡುತ್ತೇನೆ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಕಷ್ಟದ ಮಧ್ಯೆ ರೈತರನ್ನು ಕಾಡುತ್ತಿರುವ ಬ್ಯಾಂಕ್‌: ಸಂಬಂಧಪಟ್ಟವರು ಕಣ್ತೆರೆದು ನೋಡಿ ...

ರೈತ ಬ್ಯಾಂಕ್‌ ಅಧಿಕಾರಿಯನ್ನು ತರಾಟೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ. ಮರಾಠಿ ಮಾತನಾಡುವಂತೆ ಉದ್ಧಟತನ ಬ್ಯಾಂಕ್‌ ಸಿಬ್ಬಂದಿಯನ್ನು ವಜಾ ಮಾಡುವಂತೆ ಕನ್ನಡಪರ ಸಂಘಟನೆಗಳು ಆಗ್ರಹಪಡಿಸಿವೆ.