ಪ್ರಾದೇಶಿಕ ಆಯುಕ್ತರು - ಸಾ.ರಾ.ನಡುವೆ ಒಳ ಒಪ್ಪಂದ : ಸ್ಫೋಟಕ ಹೇಳಿಕೆ
- ಪ್ರಾದೇಶಿಕ ಆಯುಕ್ತರು ಹಾಗೂ ಶಾಸಕ ಸಾ.ರಾ. ಮಹೇಶ್ ಅವರ ನಡುವೆ ಒಳ ಒಪ್ಪಂದ
- ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆರೋಪ
- ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ದೊಡ್ಡ ಹೈಡ್ರಾಮಾ
ಮೈಸೂರು (ಜೂ.12): ಮೈಸೂರು ಭೂ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು ಹಾಗೂ ಶಾಸಕ ಸಾ.ರಾ. ಮಹೇಶ್ ಅವರ ನಡುವೆ ಒಳ ಒಪ್ಪಂದ ಆಗಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ದೊಡ್ಡ ಹೈಡ್ರಾಮಾ ನಡೆದಿದೆ. ಶಾಸಕರು ಧರಣಿ ಕೂತಂತೆ, ಪ್ರಾದೇಶಿಕ ಆಯುಕ್ತರು ಬಂದಂತೆ, ಇವರು ಮನವಿ ಕೊಟ್ಟಂತೆ ಹೈಡ್ರಾಮಾ ನಡೆಯಿತು. ಇದನ್ನೆಲ್ಲ ನೋಡಿದರೆ ಕಳಂಕಿತರನ್ನು ರಕ್ಷಿಸುವ ಕೆಲಸ ಇನ್ನೂ ನಡೆಯುತ್ತಿದೆ ಎಂದು ದೂರಿದರು.
ಸಿದ್ದರಾಮಯ್ಯ ಸೋಲು, ಮೈತ್ರಿ ಸರ್ಕಾರ ಪತನದ ಬಗ್ಗೆ ವಿಶ್ವನಾಥ್ ಸ್ಫೋಟಕ ಹೇಳಿಕೆ
ನಾವು ಕೂಡ ಧರಣಿ, ಚಳವಳಿ ಮಾಡಿದ್ದೇವೆ. ಆಗ ಯಾವುದೇ ಅಧಿಕಾರಿಗೆ ನಾವು ಮನವಿ ಕೊಟ್ಟಾಗ ಅವರು ಮನವಿ ಸ್ವೀಕರಿಸಿ, ಎಲ್ಲವನ್ನೂ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆಂದು ಹೇಳುತ್ತಿದ್ದರಷ್ಟೆ. ಆದರೆ, ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಆಗಿದ್ದೇ ಬೇರೆ. ಇಲ್ಲಿ ಸಮಯವನ್ನೇ ಕೊಟ್ಟುಬಿಟ್ಟರು, ಸಮಿತಿಯನ್ನು ಸ್ಥಳದಲ್ಲೇ ರಚಿಸಿಬಿಟ್ಟರು. ಪ್ರಾದೇಶಿಕ ಆಯುಕ್ತರ ಆಡಳಿತದ ವೇಗಕ್ಕೆ ಜಿಲ್ಲೆಯೇ ಬೆಚ್ಚಿಬಿದ್ದಿದೆ. ಆಯುಕ್ತರು ತುಂಬಾ ವೇಗದಲ್ಲಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಭೂಹಗರಣ ತನಿಖೆಗೆ ಸಿಂಧೂರಿ ನೇಮಿಸಿ: ವಿಶ್ವನಾಥ್ ...
ಈ ಎಲ್ಲಾ ನಾಟಕಗಳನ್ನು ನೋಡುತ್ತಿದ್ದರೆ, ಪ್ರಕರಣವನ್ನು ಹಳ್ಳ ಹಿಡಿಸಿ ಹಿಂದೆ ಇದ್ದ ಜಿಲ್ಲಾಧಿಕಾರಿ ಹೇಳಿದ್ದೆಲ್ಲ ಸುಳ್ಳು, ನಾವು ಹೇಳಿದ್ದೇ ಸತ್ಯ ಎಂಬುದನ್ನು ಬಿಂಬಿಸಲು ಹೀಗೆ ಮಾಡುತ್ತಿದ್ದಾರೆ. ಪ್ರಾದೇಶಿಕ ಆಯುಕ್ತರು ಹಾಗೂ ಕಳಂಕಿತರ ನಡುವೆ ಒಪ್ಪಂದ ಆದಂತೆ ಕಾಣುತ್ತಿದೆ. ಎಲ್ಲವನ್ನೂ ಹಿಂದೆಯೇ ಚರ್ಚಿಸಿ ತೀರ್ಮಾನ ಕೈಗೊಂಡಂತಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಅವರೇನು ವರದಿ ಕೊಡಬಹುದು ಎಂಬುದು ಗೊತ್ತಾಗುತ್ತಿದೆ. ಈಗಾಗಲೇ ವರದಿ ತಯಾರಾಗಿದ್ದು, ಸೋಮವಾರ ಕೊಡುತ್ತಾರೆ. ಪ್ರಾದೇಶಿಕ ಆಯುಕ್ತರು ನೀಡುವ ವರದಿಗೆ ಯಾವುದೇ ಬೆಲೆ ಇಲ್ಲ ಎಂದು ಅವರು ತಿಳಿಸಿದರು.
ನೀವು ನಿಮ್ಮ ಭವನವನ್ನು ಎಷ್ಟುಎಕರೆಯಲ್ಲಿ ಕಟ್ಟಿದ್ದೀರಿ? ನಿಮಗೆ ಮಂಜೂರಾಗಿದ್ದೆಷ್ಟು? ಎಂಡಿಎ ಭೂಮಿ ಎಷ್ಟುಒತ್ತುವರಿಯಾಗಿದೆ ಎಂದು ಕೇಳಿದ್ದಾರೆ. ಆದರೆ, ನೀವು ಎಲ್ಲವನ್ನೂ ಬಿಟ್ಟು ರಾಜಕಾಲುವೆ ಬಗ್ಗೆ ಮಾತನಾಡುತ್ತಿದ್ದೀರಿ. ಹಿಂದೆ ಇದ್ದ ಡಿಸಿಯಿಂದ ಆದೇಶದಲ್ಲಿ ಎಲ್ಲಿಯೂ ರಾಜಕಾಲುವೆ ಬಗ್ಗೆ ಪ್ರಸ್ತಾಪ ಇಲ್ಲವೇ ಇಲ್ಲ. ನೀವು ಅದನ್ನು ಬಿಟ್ಟು ಬರೀ ರಾಜಕಾಲುವೆ ಬಗ್ಗೆ ಮಾತನಾಡುತ್ತಿದ್ದೀರಿ. ರಾಜಕಾರಣಿಗಳೇ ಭೂ ಮಾಫಿಯಾ ಕಳ್ಳರು ಇನ್ಯಾರು ಬರುತ್ತಾರೆಯೇ ಇಲ್ಲಿಗೆ? ಪ್ರಕರಣವನ್ನು ಮುಚ್ಚಿಹಾಕಿ, ಡಿಸಿ ವಿರುದ್ಧ ಸಾರ್ವಜನಿಕರು ಮಾತನಾಡುವಂತೆ ಮಾಡುತ್ತಾರೆ. ನಂತರ ನೆಲಗಳ್ಳರು, ಭೂಗಳ್ಳರ ಬಗ್ಗೆ ಯಾರೂ ಮಾತನಾಡದಂತ ವಾತಾವರಣ ಸೃಷ್ಟಿಸುತ್ತಾರೆ ಎಂದು ಅವರು ಆರೋಪಿಸಿದರು.
ರೋಹಿಣಿ ಸಿಂಧೂರಿ ಅವರು ನೀಡಿದ 4 ಆದೇಶದ ಬಗ್ಗೆಯೂ ಸೂಕ್ತ, ಸಮಗ್ರ ಪರಿಶೀಲನೆ ಆಗಬೇಕು. 98ನೇ ಸರ್ವೆ ನಂಬರ್ ಎಂಡಿಎಗೆ ಸೇರಿದ್ದು, ಎಂಡಿಎ ಆಯುಕ್ತರು, ಅಧ್ಯಕ್ಷರು ಏನು ಮಾಡುತ್ತಿದ್ದೀರಿ? ಅಮೂಲಾಗ್ರ ವಿಚಾರಣೆ ಆಗಬೇಕು. ಇಷ್ಟೆಅಲ್ಲ, ಮೈಸೂರು ನಗರದಲ್ಲಿ ಬೇಕಾದಷ್ಟುಆಗಿದೆ ಎಲ್ಲವೂ ಸಂಪೂರ್ಣ ತನಿಖೆ ಆಗಲಿ. ನಗರಾಭಿವೃದ್ಧಿ ಸಚಿವರು, ಕಂದಾಯ ಸಚಿವರು ಕೂಡ ಮಾತಾಡುತ್ತಿಲ್ಲ, ಕಳಂಕಿತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಬಂದು ಒಳ ಒಪ್ಪಂದ ಮಾಡಿಕೊಂಡರು ಎಂದು ಅವರು ದೂರಿದರು.
ಮೈಸೂರಿನಲ್ಲಿ ನಡೆದಿರುವ ಭೂ ಹಗರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರ ನಡೆದಿದೆ. ಈ ಭೂ ಹಗರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.