Asianet Suvarna News Asianet Suvarna News

ಮಲೆನಾಡಲ್ಲಿ ಮಳೆ ಕೊರತೆ: ತಾಪಮಾನದಿಂದ ಕಾಫಿ , ಕಾಳು ಮೆಣಸು ನಾಶ!

:ಮಲೆನಾಡಿನ ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸದ್ಯ  ದಿನವಿಡೀ ಮಳೆ ಸುರಿಯಬೇಕಾಗಿದ್ದ ಕಾಲವಿದು. ಆದ್ರೆ ಇದೀಗ ಬಿರು ಬೇಸಿಗೆಯಂತಹ ಸುಡುಬಿಸಿಲ ವಾತಾವರಣ ಇರುವುದಿರಿಂದ ಕಾಫಿ ಹಾಗೂ ಕಾಳು ಮೆಣಸಿನ ಫಸಲಿನ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುವ ಭೀತಿ ಎದುರಾಗಿದೆ

Lack of rain in chikkamagaluru coffee and pepper crops destroyed by temperature rav
Author
First Published Sep 1, 2023, 10:20 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು  

ಚಿಕ್ಕಮಗಳೂರು (ಸೆ.1):ಮಲೆನಾಡಿನ ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸದ್ಯ  ದಿನವಿಡೀ ಮಳೆ ಸುರಿಯಬೇಕಾಗಿದ್ದ ಕಾಲವಿದು. ಆದ್ರೆ ಇದೀಗ ಬಿರು ಬೇಸಿಗೆಯಂತಹ ಸುಡುಬಿಸಿಲ ವಾತಾವರಣ ಇರುವುದಿರಿಂದ ಕಾಫಿ ಹಾಗೂ ಕಾಳು ಮೆಣಸಿನ ಫಸಲಿನ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುವ ಭೀತಿ ಎದುರಾಗಿದೆ.ಈಗಾಗಲೇ ಕಾಫಿ ಮತ್ತು ಕಾಳುಮೆಣಸು ಬೆಳೆಗಳು ಹೀಚುಗಟ್ಟಿದ್ದು, ಮಳೆಯ ಅಭಾವದಿಂದ ಕಾಳುಗಳ ಗಾತ್ರ ಹೆಚ್ಚಾಗದೆ  ಹೀಚಿನ ಹಂತದಲ್ಲಿಯೇ ತಾಪಮಾನಕ್ಕೆ ಸಿಲುಕಿ ನಾಶವಾಗಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಫಿ ಮತ್ತು ಕಾಳು ಮೆಣಸು ಬೆಳೆಯಲ್ಲಿ ನಷ್ಟ : 

ವರ್ಷಾರಂಭದಲ್ಲಿ ಅಕಾಲಿಕ ಮಳೆಯಾದ ಕಾರಣ ಕಾಫಿಗೆ ಕೊಳೆ ರೋಗ ಕಾಣಿಸಿಕೊಂಡು ನಷ್ಟ ಸಂಭವಿಸಿತ್ತು. ಇದೀಗ ಒಣಹವೆಯಿಂದ ಅನಾವೃಷ್ಟಿ ವಾತಾವರಣ ಸೃಷ್ಟಿಯಾಗಿ ಕಾಫಿ ಬೆಳೆಯಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗುವ ಲಕ್ಷಣಗಳು ಕಂಡುಬರುತ್ತಿದೆ. ಕಳೆದ ವರ್ಷವೂ ಹೂವಿನ ಮಳೆಯ ಅನಾವೃಷ್ಟಿ ಹಾಗೂ ಹೆಚ್ಚಿದ ತಾಪಮಾನದ ಕಾರಣ ಕಾಫಿ ಮತ್ತು ಕಾಳು ಮೆಣಸು ಬೆಳೆಯಲ್ಲಿ ನಷ್ಟ ಸಂಭವಿಸಿತ್ತು. 

'ದಕ್ಷಿಣ ಕಾಶ್ಮೀರ' ಖ್ಯಾತಿಯ ಕೊಡಗಿನಲ್ಲೀಗ ಭೀಕರ ಬರ; ಬಿರುಕು ಬಿಟ್ಟ ನೆಲ!

ಬೇಸಿಗೆಯಲ್ಲಿ ತಾಪಮಾನ ಹೆಚ್ಚಳವಾಗಿದ್ದ ಪರಿಣಾಮವಾಗಿ, ಮಳೆಗಾಲದಲ್ಲಿ ಕಾಫಿಯು ಗೊಂಚಲು ಸಮೇತವಾಗಿ ಕೊಳೆತುಅಪಾರ ಪ್ರಮಾಣದಲ್ಲಿ ನೆಲಕ್ಕುದುರಿತ್ತು. ಈ ವರ್ಷ ಮುಂಗಾರಿನಲ್ಲೇ ಮಳೆಯ ಪ್ರಮಾಣ ಸಂಪೂರ್ಣವಾಗಿ ಕುಸಿದು ಒಣಹವೆ ಮುಂದುವರೆದಿದೆ.ಬೇಸಿಗೆ ದಿನಗಳಂತೆ ಗರಿಷ್ಟ ಉಷ್ಣಾಂಶ ಕಂಡು ಬರಲಾರಂಭಿಸಿದೆ. ಇದರಿಂದ ಕಾಫಿ, ಕಾಳುಮೆಣಸು, ಅಡಿಕೆ ಮತ್ತು ಭತ್ತದ ಬೆಳೆಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಲಿದೆ ಎಂದು ಬೆಳೆಗಾರರು ರೈತರು ಅಳಲು ತೋಡಿಕೊಳ್ಳಲಾರಂಭಿಸಿದ್ದಾರೆ. 

ವರ್ಷದ ಅನಾವೃಷ್ಟಿಯು ಮುತ್ತಷ್ಟು ಸಂಕಷ್ಟ : 

ಕಳೆದ 3-4 ವರ್ಷಗಳಿಂದ ನಿರಂತರವಾದ ಅತಿವೃಷ್ಟಿಯಿಂದ ಕಂಗಾಲಾಗಿದ್ದ ಕಾಫಿ ಬೆಳೆಗಾರರಿಗೆ ಈ ಸಾಲಿನಲ್ಲಿ ಉಂಟಾಗಿರುವ ಅನಾವೃಷ್ಟಿಯು ಇನ್ನಷ್ಟು ಸಂಕಷ್ಟವನ್ನು ತಂದೊಡ್ಡಿದೆ. ಮುಂಗಾರು ಮತ್ತು ಹಿಂಗಾರು ಮಳೆಗಳು ದುರ್ಬಲಗೊಂಡ ಪರಿಣಾಮ ಕಾಫಿ, ಕಾಳುಮೆಣಸು, ಅಡಿಕೆ, ಏಲಕ್ಕಿ ಮತ್ತು ಭತ್ತದ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಜೈರಾಂ ತಿಳಿಸಿದ್ದಾರೆ.

ಕಾಫಿ ಮಂಡಳಿ ಮತ್ತು ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಗಳು ಕೂಡಲೆ ಕಾರ್ಯಪ್ರವೃತ್ತಗೊಂಡು ಅನಾವೃಷ್ಟಿಯಿಂದ ಕಾಫಿ, ಕಾಳುಮೆಣಸು, ಅಡಿಕೆ ಹಾಗೂ ಭತ್ತದ ಬೆಳೆಗಳಲ್ಲಿ ಉಂಟಾಗಿರುವ ನಷ್ಟದ ಬಗ್ಗೆ ಜಂಟಿ ಸಮೀಕ್ಷೆ ನೆಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಉಂಟಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಈ ಮೂಲಕ ಒತ್ತಾಯಿಸಿದ್ದಾರೆ. 

 

ಚಿಕ್ಕಮಗಳೂರು: ಮಲೆನಾಡಿನ ಈ ಗ್ರಾಮಗಳಿಗೆ ವಿದ್ಯುತ್ ಇಲ್ಲ, ನೆಟ್ವರ್ಕ್ ಕೇಳಲೇಬೇಡಿ!

ಅಲ್ಲದೆ ಕಾಳುಮೆಣಸು, ಅಡಿಕೆ ಹಾಗೂ ಭತ್ತದ ಬೆಳೆಗಳಿಗೆ ಬೆಳೆಗಳಿಗೆ ವಿಮೆಯ ಪ್ರೀಮಿಯಂ ಹಣವನ್ನು ಕಟ್ಟಲಾಗಿದ್ದು, ಬೆಳೆಹಾನಿ ವಿವರವನ್ನು ಸಂಬಂಧಪಟ್ಟ ವಿಮಾ ಕಂಪನಿಗಳಿಗೆ ನೀಡಿ ವಿಮೆಯ ಹಣವನ್ನು ಬೆಳೆಗಾರರಿಗೆ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

Follow Us:
Download App:
  • android
  • ios