ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಆಗಸ್ಟ್ 15 ರಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಲ್ಲಿಕೋಟೆಗೆ ಹೊಸ ಫ್ಲೈಬಸ್ ಸೇವೆಯನ್ನು ಆರಂಭಿಸುತ್ತಿದೆ. ಈ ಬಸ್ ದಕ್ಷಿಣ ಕೊಡಗಿನ ಗೋಣಿಕೊಪ್ಪಲು, ಪೊನ್ನಂಪೇಟೆ, ಮತ್ತು ಕುಟ್ಟ ಮಾರ್ಗವಾಗಿ ಸಂಚರಿಸಲಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಿದೆ.
ಪೊನ್ನಂಪೇಟೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನೂತನವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇರಳದ ಕಲ್ಲಿಕೋಟೆಗೆ ಫ್ಲೈ ಬಸ್ ಸೇವೆ ಆರಂಭಿಸಲಿದ್ದು, ಇದು ದಕ್ಷಿಣ ಕೊಡಗಿನ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಆ. 15ರಿಂದ ಈ ನೂತನ ಬಸ್ ಸೇವೆ ಪ್ರಾರಂಭವಾಗಲಿದೆ.
ಬಸ್ ಸಮಯ ಈ ರೀತಿಯಾಗಿದೆ
ರಾತ್ರಿ 10.40 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಈ ಬಸ್ಸು ಮೈಸೂರು, ಹುಣಸೂರು ಮಾರ್ಗವಾಗಿ ಬೆಳಗಿನ ಜಾವ 4:15 ಗಂಟೆಗೆ ಗೋಣಿಕೊಪ್ಪಲು, 4:20 ಗಂಟೆಗೆ ಪೊನ್ನಂಪೇಟೆ ಮತ್ತು 4:50 ಗಂಟೆಗೆ ಕುಟ್ಟ ತಲುಪಲಿದೆ. ನಂತರ ಮಾನಂದವಾಡಿ- ಕಲ್ಪೆಟ್ಟ ಮಾರ್ಗವಾಗಿ ಬೆಳಗ್ಗೆ 7:15 ಗಂಟೆಗೆ ಕಲ್ಲಿಕೋಟೆ ತಲುಪಲಿದೆ.
ಅದೇ ರೀತಿ ರಾತ್ರಿ 7:30 ಗಂಟೆಗೆ ಕಲ್ಲಿಕೋಟೆಯಿಂದ ಹೊರಡುವ ಈ ಬಸ್ಸು, ಕಲ್ಪೆಟ್ಟ-ಮಾನದವಾಡಿ ಮಾರ್ಗವಾಗಿ ರಾತ್ರಿ 10:15 ಗಂಟೆಗೆ ಕುಟ್ಟ ತಲುಪಲಿದೆ. ಅಲ್ಲಿಂದ ರಾತ್ರಿ 10:45ಕ್ಕೆ ಪೊನ್ನಂಪೇಟೆಯಿಂದ, 10:50ಕ್ಕೆ ಗೋಣಿಕೊಪ್ಪದಿಂದ ಹೊರಡುವ ಬಸ್ಸು ಹುಣಸೂರು-ಮೈಸೂರು ಮಾರ್ಗದಲ್ಲಿ ಸಂಚರಿಸಿ ಬೆಳಗಿನ ಜಾವ 4:15 ಗಂಟೆಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.
ದಕ್ಷಿಣ ಕೊಡಗಿನ ಜನರ ಬಹುದಿನಗಳ ಬೇಡಿಕೆ
ದಕ್ಷಿಣ ಕೊಡಗಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಸ್ ಸೌಲಭ್ಯ ಒದಗಿಸಲು ಸಾಕಷ್ಟು ಬಾರಿ ಸಂಬಂಧಿಸಿದವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಇದೀಗ ನೂತನ ಈ ಫ್ಲೈ ಬಸ್ ಸೇವೆಯಿಂದಾಗಿ ದಕ್ಷಿಣ ಕೊಡಗಿನ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಇನ್ನು ದ. ಕೊಡಗಿನ ವಿಮಾನ ಯಾತ್ರಿಗಳು ಗೋಣಿಕೊಪ್ಪಲು, ಪೊನ್ನಂಪೇಟೆ, ಕುಟ್ಟ ಭಾಗಗಳಿಂದ ನೇರವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಬಹುದಾಗಿದೆ.


