*  ನ್ಯಾಯಾಲಯದ ಆದೇಶದ ಮೇರೆಗೆ 4 ಬಸ್‌ ಜಪ್ತಿ*  ಮೃತ ಪಟ್ಟವ್ಯಕ್ತಿ ಕುಟುಂಬಕ್ಕೆ ಪರಿಹಾರ ನೀಡದ ಕೆಎಸ್‌ಆರ್‌ಟಿಸಿ*  ಮತ್ತೆ ಕೋರ್ಟ್‌ ಮೆಟ್ಟಿಲೇರಿದ ಮೃತ ಸಂಜೀವ್‌ ಪಾಟೀಲ್‌ ಪತ್ನಿ 

ದಾವಣಗೆರೆ(ಜೂ.21):  ಅಪಘಾತದಲ್ಲಿ ಮೃತ ಪಟ್ಟವ್ಯಕ್ತಿ ಕುಟುಂಬಕ್ಕೆ ಪರಿಹಾರ ನೀಡದ ಕೆಎಸ್ಸಾರ್ಟಿಸಿ ಸಂಸ್ಥೆಯ ಹಾವೇರಿ ವಿಭಾಗದ 4 ಬಸ್ಸುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ದಾವಣಗೆರೆಯಲ್ಲಿ ಜಪ್ತಿ ಮಾಡಲಾಗಿದೆ.

Add Asianetnews Kannada as a Preferred SourcegooglePreferred

ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ಮಂತಗಿ ಗ್ರಾಮದ ಸಾಫ್ಟ್‌ವೇರ್‌ ಎಂಜಿನಿಯರ್‌ ಸಂಜೀವ್‌ ಪಾಟೀಲ್‌ಗೆ (39) ತುಮಕೂರು ಜಾಸ್‌ ಟೋಲ್‌ ಬಳಿ 2013ರ ನವೆಂಬರ್‌ 6ರಂದು ಹಾವೇರಿ ಡಿಪೋಗೆ ಸೇರಿದ ಕೆಎಸ್ಸಾರ್ಟಿಸಿ ಬಸ್‌ ಡಿಕ್ಕಿ ಹೊಡೆದು ಮೃತಪಟ್ಟಿದ್ದರು. 

ಸಿಎಂ ಬಂದೋಬಸ್ತ್‌ನಲ್ಲಿದ್ದ PSIಗೆ ಹೃದಯಾಘಾತ, SP ಪ್ರಜ್ಞೆಯಿಂದ ಉಳಿಯಿತು ಜೀವ

ಈ ಪ್ರಕರಣದ ವಿಚಾರಣೆ ನಡೆಸಿದ್ದ ದಾವಣಗೆರೆ 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದ 2017ರಲ್ಲಿ 2 ಕೋಟಿ 82 ಲಕ್ಷ 42 ಸಾವಿರದ 885 ರು.ಗಳ ಪರಿಹಾರವನ್ನು ಮೃತನ ಕುಟುಂಬಕ್ಕೆ ನೀಡುವಂತೆ ಆದೇಶಿಸಿತ್ತು. ಆಗ ಕೆಎಸ್ಸಾರ್ಟಿಸಿ ಸಂಸ್ಥೆಯು ಅಲ್ಪ ಪರಿಹಾರ ನೀಡಿ, ಮತ್ತೆ ಮುಂದೆ ಪರಿಹಾರ ನೀಡುವುದಾಗಿ ಹೇಳಿ ಅಂದು ಜಪ್ತಿಯಾಗಿದ್ದ ಬಸ್ಸುಗಳನ್ನು ಕೊಂಡೊಯ್ದಿತ್ತು. ಆದರೆ ಉಳಿದ ಪರಿಹಾರದ ಹಣ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಜೀವ್‌ ಪಾಟೀಲ್‌ ಪತ್ನಿ ಮತ್ತೆ ಕೋರ್ಟ್‌ ಮೆಟ್ಟಿಲೇರಿದ್ದರಿಂದ ನ್ಯಾಯಾಲಯದ ಆದೇಶದಂತೆ 4 ಬಸ್‌ಗಳನ್ನು ಜಪ್ತಿ ಮಾಡಲಾಗಿದೆ.