ಜಲಸಂಪನ್ಮೂಲ ಮೂಲವಾಗಿದ್ದ ಕೆರೆಯನ್ನು ಕ್ರಿಡಾಂಗಣವಾಗಿ ಪರಿವರ್ತಿಸಲಾಯಿತು. ಆದರೆ ಈಗ ಬಿರುಸಾದ ಮಳೆ ಸುರಿದ ಬೆನ್ನಲ್ಲೇ ಕೆರೆ ತನ್ನ ಸ್ಥಾನವನ್ನು ತುಂಬಿಕೊಂಡಿದೆ. ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ ಸಂಪೂರ್ಣ ಮುಳುಗಡೆಯಾಗಿ ಮತ್ತೆ ಕೆರೆಯಾಗಿ ಪರಿವರ್ತನೆಯಾಗಿದೆ.

ಶಿವಮೊಗ್ಗ(ಆ.11): ಕೆರೆಗಳನ್ನು ಕೆರೆಗಳಾಗಿಯೇ ಉಳಿಸಬೇಕು. ಇಲ್ಲದಿದ್ದರೆ ಪ್ರಕೃತಿಯೇ ಮನುಷ್ಯನ ತಪ್ಪನ್ನು ತಿದ್ದುತ್ತದೆ ಎಂಬುದಕ್ಕೆ ಶಿವಮೊಗ್ಗದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ ಸಾಕ್ಷಿಯಾಗಿದೆ.

ನಗರ ಹೊರವಲಯದಲ್ಲಿರುವ ನವುಲೆಯ ಕೆರೆಯನ್ನು ಜನರ ವಿರೋಧದ ನಡುವೆಯೂ ಮುಚ್ಚಿ ಕ್ರೀಡಾಂಗಣ ನಿರ್ಮಿಸಲಾಗಿತ್ತು. ಇದೀಗ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕ್ರೀಡಾಂಗಣ ಕೆರೆಯಾಗಿ ಮನುಷ್ಯನ ತಪ್ಪನ್ನು ಬೊಟ್ಟು ಮಾಡಿ ತೋರಿಸಿದಂತಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಗರದಲ್ಲಿ ಇದೇ ರೀತಿ ಬಹಳಷ್ಟು ಕೆರೆಗಳನ್ನು ಮುಚ್ಚಿ ಬಡಾವಣೆ, ಕ್ಲಬ್‌ಗಳನ್ನು ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಕೆರೆಗಳು ತಗ್ಗು ಪ್ರದೇಶದಲ್ಲಿ ಇರುವುದರಿಂದ ಮಳೆಗಾಲದಲ್ಲಿ ಮಳೆಯ ಪ್ರಮಾಣ ಹೆಚ್ಚಾದಾಗ ಈ ರೀತಿ ಜಲಾವೃತವಾಗುತ್ತವೆ. ಅದರಂತೆ ನಗರದಲ್ಲಿ ಕೆರೆಗಳನ್ನು ಮುಚ್ಚಿ ನಿರ್ಮಿಸಿರುವ ಕಟ್ಟಡ, ಬಡಾವಣೆ, ಕ್ಲಬ್‌ಗಳೆಲ್ಲವೂ ಜಲಾವೃತಗೊಂಡಿವೆ.

45 ವರ್ಷದ ನಂತರ ಮಹಾಮಳೆಗೆ ಮುಳುಗಿದ ಉಪ್ಪಿನಂಗಡಿ