ಸಾರಾ-ಎಚ್ಡಿಕೆ ಕೈ ಬಲಪಡಿಸಲು ಶ್ರಮ : ಗಂಭೀರವಾಗಿ ಪರಿಗಣಿಸಿದ JDS
ಜೆಡಿಎಸ್ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಅಧಿಕಾರವನ್ನು ಪಡೆಯುವ ಸಲುವಾಗಿ ಸಾಕಷ್ಟು ಪ್ರಯತ್ನ ನಡೆಸಿದೆ. ಇದೇ ವೇಳೆ ಶಾಸಕ ಸಾ ರಾ ಮಹೇಶ್ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಕರೆ ನೀಡಿದ್ದಾರೆ.
ಕೆ.ಆರ್. ನಗರ (ಮಾ.10): ಮಾ. 16 ರಂದು ನಡೆಯುವ ಮೈಮುಲ್ ನಿರ್ದೇಶಕ ಸ್ಥಾನದ ಚುನಾವಣೆಗೆ ಜೆಡಿಎಸ್ ಬೆಂಬಲಿತರಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಗೆಲುವಿಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿಯಬೇಕು ಎಂದು ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಪಕ್ಷದ ಮುಖಂಡರು ಮತ್ತು ತಾಲೂಕಿನ ಮೈಮುಲ್ ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, ಹುಣಸೂರು ಉಪ-ವಿಭಾಗದ 8 ನಿರ್ದೇಶಕ ಸ್ಥಾನಗಳಿಗೆ 7 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ ಎಂದರು.
ಈ ಚುನಾವಣೆಯನ್ನು ಪಕ್ಷ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಮೈಮುಲ್ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಶಾಸಕ ಸಾ.ರಾ. ಮಹೇಶ್ ಅವರ ಕೈ ಬಲಪಡಿಸಬೇಕೆಂದು ಅವರು ಕೋರಿದರು.
ದಳಪತಿಗಳಿಗೆ ಬಿಗ್ ಶಾಕ್: ಜೆಡಿಎಸ್ ಅಭ್ಯರ್ಥಿಯಾಗಬೇಕಿದ್ದ ನಾಯಕ ಕಾಂಗ್ರೆಸ್ ಸೇರ್ಪಡೆ ...
ಮೈಸೂರು ವಿಭಾಗದ 7 ಮತ್ತು ಹುಣಸೂರು ಉಪ-ವಿಭಾಗದ 8 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಹುಣಸೂರು ಭಾಗದಲ್ಲಿ 618 ಮಂದಿ ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದು, ಕೆ.ಆರ್. ನಗರ ತಾಲೂಕಿನ 142, ಎಚ್.ಡಿ. ಕೋಟೆ ತಾಲೂಕಿನಲ್ಲಿ 130, ಹುಣಸೂರು ತಾಲೂಕಿನ 180 ಮತ್ತು ಪಿರಿಯಾಪಟ್ಟಣ ತಾಲೂಕಿನಲ್ಲಿ 166 ಮಂದಿ ಮತದಾರರಿದ್ದಾರೆಂದು ಅವರು ಮಾಹಿತಿ ನೀಡಿದರು.
ಕೆ.ಆರ್. ನಗರ ತಾಲೂಕಿನಿಂದ ಭವಾನಿ ರೇವಣ್ಣ ಅವರ ಸಹೋದರ ಎಸ್.ಕೆ. ಮಧುಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಕೆ. ಗೋವಿಂದೇಗೌಡ ಅವರ ಪತ್ನಿ ರಾಣಿ, ಹುಣಸೂರು ತಾಲೂಕಿನಿಂದ ರುದ್ರೇಗೌಡ, ಪಿರಿಯಾಪಟ್ಟಣ ತಾಲೂಕಿನಿಂದ ಬಿ.ಎ. ಪ್ರಕಾಶ್, ಶಿವಣ್ಣ, ಪುಷ್ಪಲತಾ ಮತ್ತು ಎಚ್.ಡಿ. ಕೋಟೆ ತಾಲೂಕಿನಿಂದ ಬಸವಣ್ಣ ಅವರು ಜೆಡಿಎಸ್ ಬೆಂಬಲದಿಂದ ಕಣದಲ್ಲಿದ್ದಾರೆಂದು ಅವರು ತಿಳಿಸಿದರು.
ಮೈಮುಲ್ ನಿರ್ದೇಶಕ ಸ್ಥಾನದ ಅಭ್ಯರ್ಥಿ ಎಸ್.ಕೆ. ಮಧುಚಂದ್ರ, ರಾಣಿಗೋವಿಂದೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಕುಮಾರ್ ಮಾತನಾಡಿದರು.
ತಾಪಂ ಮಾಜಿ ಅಧ್ಯಕ್ಷ ಎಂ.ಎಚ್. ಸ್ವಾಮಿ, ಲಿಂಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಕೆ. ಗೋವಿಂದೇಗೌಡ, ಮಾಜಿ ನಿರ್ದೇಶಕ ನಂಜುಂಡಸ್ವಾಮಿ, ಹೊಸಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಹೇಶ್, ಜೆಡಿಎಸ್ ಮುಖಂಡರಾದ ಗಣೇಶ್, ವಸಂತ್ಕುಮಾರ್, ಎಚ್.ಎಂ. ಅಶೋಕ್, ವಿಷ್ಣು ಇದ್ದರು.