3 ಗುಂಪಿನಿಂದಾಗಿ ಬಿಜೆಪಿಯಲ್ಲಿ ಭಿನ್ನಮತ: ಸತೀಶ್‌ ಜಾರಕಿಹೊಳಿ| ರಾಜಕೀಯದಲ್ಲಿ ಯಾರು ಯಾರನ್ನು ಬೇಕಾದರೂ ಭೇಟಿ ಆಗಬಹುದು| ಉಮೇಶ್‌ ಕತ್ತಿಯವರ ಧೈರ್ಯದ ಮೇಲೆ ಬಂಡಾಯದ ತೀವ್ರತೆ ನಿರ್ಧಾರ| ಮಧ್ಯಂತರ ಚುನಾವಣೆ ಬಂಡಾಯದ ಕುಸ್ತಿಯ ಮೇಲೆ ನಿರ್ಧಾರ|  ನಿಜವಾದ ಕುಸ್ತಿ ಆದರೆ ಮಾತ್ರ ನಾಯಕತ್ವ ಬದಲಾವಣೆ, ಮಧ್ಯಂತರ ಚುನಾವಣೆ|

ಬೆಳಗಾವಿ(ಮೇ.31): ಬಿಜೆಪಿಯಲ್ಲಿ ಮೂರು ಗುಂಪುಗಳಿವೆ. ಜನತಾ ಪರಿವಾರದಿಂದ ಬಂದವರ ಒಂದು ಗುಂಪು, ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರ ಒಂದು ಗುಂಪು ಹಾಗೂ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿರುವವರ ಒಂದು ಗುಂಪು. ಈ ಮೂರು ಗುಂಪಿನಿಂದಾಗಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದೆ. ವಲಸಿಗರಿಂದಾಗಿ ಮೂಲ ಬಿಜೆಪಿಯವರಿಗೆ ಅನ್ಯಾಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಗೆ ಉಮೇಶ್‌ ಕತ್ತಿ ಯತ್ನಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಯಾರು ಯಾರನ್ನು ಬೇಕಾದರೂ ಭೇಟಿ ಆಗಬಹುದು. ಉಮೇಶ್‌ ಕತ್ತಿಯವರ ಧೈರ್ಯದ ಮೇಲೆ ಬಂಡಾಯದ ತೀವ್ರತೆ ನಿರ್ಧಾರ ಆಗಲಿದೆ. ಇನ್ನು ಮಧ್ಯಂತರ ಚುನಾವಣೆ ಬಂಡಾಯದ ಕುಸ್ತಿಯ ಮೇಲೆ ನಿರ್ಧಾರವಾಗಲಿದ್ದು, ಇದೀಗ ಕುಸ್ತಿ ಆರಂಭವಾಗಿದೆ. ಕೇವಲ ಸಡ್ಡು ಹೊಡೆದು ಹೊರಗೆ ನಿಂತು ಬಾಳಿಕಾಯಿ ತಗೊಂಡು ವಾಪಸ್‌ ಬಂದರೆ ಏನೂ ಪ್ರಯೋಜನವಿಲ್ಲ. ನಿಜವಾದ ಕುಸ್ತಿ ಆದರೆ ಮಾತ್ರ ನಾಯಕತ್ವ ಬದಲಾವಣೆ, ಮಧ್ಯಂತರ ಚುನಾವಣೆ ಆಗಲಿದೆ ಎಂದರು.

ರಾಜಾಹುಲಿ ಬೇಟೆಗೆ ಬಿಜೆಪಿ ತ್ರಿಮೂರ್ತಿಗಳ ಸೈಲೆಂಟ್ ಸ್ಕೆಚ್..!

ಸಚಿವ ರಮೇಶ್‌ ಜಾರಕಿಹೊಳಿ ಇನ್ನೂ 5 ಜನ ಕಾಂಗ್ರೆಸ್‌ ಶಾಸಕರ ರಾಜೀನಾಮೆ ಕೊಡಿಸುವೆ ಎಂದಿರುವ ಕುರಿತು ಪ್ರತಿಕ್ರಿಯಿಸಿದ ಸತೀಶ್‌, ಗೊಂದಲ ಮಾಡುವುದು ರಮೇಶ್‌ ಜಾರಕಿಹೊಳಿ ಬಂಡವಾಳ. ಕಾಂಗ್ರೆಸ್‌ ಪಕ್ಷದಿಂದ ಯಾರೊಬ್ಬರೂ ಬಿಜೆಪಿಗೆ ಹೋಗುವುದಿಲ್ಲ. ಅದೇ ರೀತಿ ಬಿಜೆಪಿ ಶಾಸಕರನ್ನು ಸೆಳೆಯುವಷ್ಟುದೊಡ್ಡ ಪ್ರಮಾಣದ ಬ್ಯಾಂಕ್‌ ಬ್ಯಾಲೆನ್ಸ್‌ ನಮ್ಮಲ್ಲಿ ಇಲ್ಲ ಎಂದರು.