ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಬಂದ ಮಹಿಳೆಯನ್ನು ರಾತ್ರಿಯಿಡೀ ದಾಖಲಿಸಿಕೊಳ್ಳದೆ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆ. ಬೆನ್ನುಮೂಳೆ ಗಾಯ ಮತ್ತು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದ ರೋಗಿಯು ಸುಮಾರು 11 ಗಂಟೆಗಳ ಕಾಲ ಸ್ಟ್ರೆಚರ್ ಮೇಲೆಯೇ ನರಳಾಟ ಅನುಭವಿಸಿದ್ದಾರೆ.

ಕೊಪ್ಪಳ (ಮಾ.5): ಕೊಪ್ಪಳ ಜಿಲ್ಲಾ ಕೇಂದ್ರದ ಸರ್ಕಾರಿ ಆಸ್ಪತ್ರೆ ಸೇರಿದಂತೆ ರಾಜ್ಯಾದ್ಯಂತ ವೈದ್ಯರ ನಿರ್ಲಕ್ಷ್ಯದ ಪರಾಕಾಷ್ಠೆ ಮುಂದುವರಿದಿದೆ. ತುರ್ತು ಚಿಕಿತ್ಸೆಗಾಗಿ ಬಂದ ರೋಗಿಯೊಬ್ಬರನ್ನು ರಾತ್ರಿಯಿಡೀ ಅಡ್ಮಿಟ್ ಮಾಡಿಕೊಳ್ಳದೆ, ಬೇಜವಾಬ್ದಾರಿಯಿಂದ ವರ್ತಿಸಿದ ಘಟನೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಮಾನವೀಯತೆ ಮರೆತರಾ ವೈದ್ಯರು?

ಈ ಘಟನೆ ನೋಡಿದಾಗಗ ಕೊಪ್ಪಳ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದ ನಿವಾಸಿ ಹುಲಿಗೇಮ್ಮ ಎಂಬುವವರು ವೈದ್ಯರ ಈ ನಿರ್ಲಕ್ಷ್ಯಕ್ಕೊಳಗಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ನರಳುತ್ತಿರುವ ದುರ್ದೈವಿ. ಕಳೆದ ಕೆಲವು ದಿನಗಳ ಹಿಂದೆ ಬಿದ್ದು ಬೆನ್ನುಮೂಳೆಗೆ ಗಾಯ ಮಾಡಿಕೊಂಡಿದ್ದ ಇವರು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ಗ್ರಾಮಕ್ಕೆ ಮರಳಿದ್ದರು.

ರಾತ್ರಿಯಿಡೀ ಸ್ಟ್ರೆಚರ್ ಮೇಲೆಯೇ ನರಳಾಟ

ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ಹುಲಿಗೇಮ್ಮ ಅವರಿಗೆ ದಿಢೀರ್ ಬಿಪಿ (ರಕ್ತದೊತ್ತಡ) ಕಡಿಮೆಯಾದ ಕಾರಣ, ಆತಂಕಗೊಂಡ ಸಂಬಂಧಿಕರು ತಕ್ಷಣವೇ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಆದರೆ, ಆಸ್ಪತ್ರೆಗೆ ಬಂದ ಸಿಬ್ಬಂದಿ ರೋಗಿಯನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ಪರಿಣಾಮವಾಗಿ, ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ರಾತ್ರಿ 11 ಗಂಟೆಯಿಂದ ಗುರುವಾರ ಮುಂಜಾನೆಯವರೆಗೆ ಆಸ್ಪತ್ರೆಯ ಕಾರಿಡಾರ್‌ನಲ್ಲಿ ಸ್ಟ್ರೆಚರ್ ಮೇಲೆಯೇ ಮಲಗಿ ನರಳುವಂತಾಯಿತು.

11 ಗಂಟೆಗಳ ಬಳಿಕ ಎಚ್ಚೆತ್ತ ಸಿಬ್ಬಂದಿ

ಸಂಬಂಧಿಕರು ಚಿಕಿತ್ಸೆ ಅಡ್ಮಿಟ್ ಮಾಡಿಕೊಂಡು ರೋಗಿಗೆ ತಕ್ಷಣದ ಚಿಕಿತ್ಸೆ ನೀಡುವಂತೆ ಎಷ್ಟೇ ಬೇಡಿಕೊಂಡರೂ ಕ್ಯಾರೇ ಎನ್ನದ ವೈದ್ಯಕೀಯ ಸಿಬ್ಬಂದಿ, ರಾತ್ರಿಯಿಡೀ ಯಾವುದೇ ಚಿಕಿತ್ಸೆ ನೀಡದೆ ಕಾಲಹರಣ ಮಾಡಿದ್ದಾರೆ. ಇಂದು (ಗುರುವಾರ) ಮುಂಜಾನೆ 10 ಗಂಟೆಯ ಸುಮಾರಿಗೆ, ಅಂದರೆ ಸರಿಸುಮಾರು 11 ಗಂಟೆಗಳ ವಿಳಂಬದ ನಂತರ ಮಹಿಳೆಯನ್ನು ಎಮರ್ಜೆನ್ಸಿ ವಾರ್ಡ್‌ಗೆ ದಾಖಲಿಸಿಕೊಳ್ಳಲಾಗಿದೆ. ವೈದ್ಯರ ಈ ಹಠಮಾರಿ ಧೋರಣೆ ಮತ್ತು ಕರ್ತವ್ಯ ಲೋಪದ ವಿರುದ್ಧ ರೋಗಿಯ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾರ್ವಜನಿಕರ ಆಕ್ರೋಶ

ಜಿಲ್ಲಾಸ್ಪತ್ರೆಗೆ ಬಡವರೇ ಹೆಚ್ಚಾಗಿ ಚಿಕಿತ್ಸೆಗೆ ಬರುತ್ತಾರೆ. ಅಂತಹವರಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಆಸ್ಪತ್ರೆ ಇದ್ದೇನು ಪ್ರಯೋಜನ? ಬಿದ್ದ ಬೆನ್ನುಮೂಳೆಯ ಗಾಯದ ನೋವಿನ ಜೊತೆಗೆ ಬಿಪಿ ಲೋ ಆಗಿದ್ದ ಮಹಿಳೆಯನ್ನು ಇಡೀ ರಾತ್ರಿ ಹೊರಗೇ ಇರಿಸಿದ್ದು ಅಮಾನವೀಯ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಂತೆ ದರ್ಬಾರು ನಡೆಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.