ಕೋಲಾರ : ಬೆಂಗಳೂರಿಗೆ ತೆರಳುವ ಬಸ್ ಮಾರ್ಗ ಬದಲಾವಣೆಗೆ ಆಗ್ರಹ
ಬೆಂಗಳೂರಿಗೆ ಸಂಚರಿಸುವ ಸಾರಿಗೆ ಬಸ್ ಮಾರ್ಗವನ್ನು ಬದಲಾವಣೆ ಮಾಡಬೇಕು ಎಂದು ಕೋಲಾರ ನೀರಾವರಿ ಹೋರಾಟ ಸಮಿತಿ ಆಗ್ರಹಿಸಿದೆ. ಮಾರ್ಗ ಬದಲಾವಣೆಯಿಂದ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
ಕೋಲಾರ [ಆ.26]: ನಗರದಿಂದ ಬೆಂಗಳೂರಿಗೆ ಸಂಚರಿಸುವ ಸಾರಿಗೆ ಬಸ್ ಮಾರ್ಗವನ್ನು ಡೂಂಲೈಟ್ ವೃತ್ತ, ಬಂಗಾರಪೇಟೆ ವೃತ್ತವಾಗಿ ಸಂಚರಿಸುವಂತೆ ಬದಲಾವಣೆ ಮಾಡಬೇಕೆಂದು ನೀರಾವರಿ ಹೋರಾಟ ಸಮಿತಿ ಸಂಚಾಲಕ ಕುರುಬಪೇಟೆ ವೆಂಕಟೇಶ್ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರದಿಂದ ಬೆಂಗಳೂರಿಗೆ ತೆರಳುವ ಸಾರಿಗೆ ಬಸ್ ಕ್ಲಾಕ್ಟವರ್ ಮೂಲಕ ಸಂಚರಿಸುತ್ತಿದೆ. ಇದರಿಂದ ಗಾಂಧಿನಗರ, ಕುರುಬರಪೇಟೆ, ಗೌರಿಪೇಟೆ, ಕನಕನಪಾಳ್ಯ, ಅಂಬೇಡ್ಕರ್ ನಗರ, ಜಯನಗರ, ಗಲ್ಪೇಟೆ, ಪಾಲಸಂದ್ರ, ಪಿಸಿ ಬಡಾವಣೆ, ಕಠಾರಿಪಾಳ್ಯ, ಡೂಂಲೈಟ್ ವೃತ್ತ, ಆರ್ಟಿಒ ಕಚೇರಿ ಸುತ್ತಮುತ್ತಲ ನಿವಾಸಿಗಳಿಗೆ ಅನಾನುಕೂಲವಾಗಿದೆ ಎಂದರು.
ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಗರದ ಎಲ್ಲ ಭಾಗದ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಬಸ್ ಕ್ಲಾಟ್ ಕಟವರ್. ಡೂಂಲೈಟ್ ವೃತ್ತ, ಬಂಗಾರಪೇಟೆ ವೃತ್ತ ಮಾರ್ಗವಾಗಿ ಆರ್ಟಿಒ ಕಚೇರಿ ಮುಂಭಾಗದಿಂದ ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ಮೇಲೆ ಸಂಚರಿಸಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಿತಿ ಸಂಚಾಲಕ ಹೊಳಲಿ ಪ್ರಕಾಶ್, ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮುಶಿವಣ್ಣ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಜಿ. ನಾರಾಯಣಸ್ವಾಮಿ, ವೆಂಕಟಕೃಷ್ಣ, ಚೇತನ್ಬಾಬು, ಮಂಜುನಾಥ್ ಇತರರು ಹಾಜರಿದ್ದರು.