ಕಳೆದ ಹತ್ತು ವರ್ಷಗಳಿಂದ ತನ್ನನ್ನು ರಕ್ಷಿಸುತ್ತಿದ್ದವನು ಇಂದು ಇದ್ದಕ್ಕಿದ್ದಂತೆ ಪ್ರಾಣಬಿಟ್ಟಿದ್ದಾನೆಂದು, ಅಂಗರಕ್ಷನ ನೆನೆದು ಮಾಜಿ ಶಾಸಕ ಅಪ್ಪಚ್ಚು ರಂಜನ್‌ ಬಿಕ್ಕಳಿಸಿ ಬಿಕ್ಕಳಿಸಿ ಅತ್ತು ಕಣ್ಣೀರಿಟ್ಟರು.

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಆ.06): ಕಳೆದ ಹತ್ತು ವರ್ಷಗಳಿಂದ ತನ್ನನ್ನು ರಕ್ಷಿಸುತ್ತಿದ್ದವನು ಇಂದು ಇದ್ದಕ್ಕಿದ್ದಂತೆ ಪ್ರಾಣಬಿಟ್ಟ ಅಂಗರಕ್ಷನ ನೆನೆದು ಮಾಜಿ ಶಾಸಕ ಕಣ್ಣೀರಿಟ್ಟರು. ಬಿಕ್ಕಳಿಸಿ ಬಿಕ್ಕಳಿಸಿ ಅತ್ತು ಕಣ್ಣೀರಿಟ್ಟರು. ಉಮ್ಮಳಿಸಿ ಬಂದ ಅವರ ದುಃಖವನ್ನು ಕಂಡು ಅಕ್ಕಪಕ್ಕದಲ್ಲಿದ್ದ ಅವರ ಕಾರ್ಯಕರ್ತರು, ಬೆಂಗಲಿಗರ ಕಣ್ಣಾಲಿಗಳು ತೇವಗೊಂಡವು. ಅಪ್ಪಚ್ಚು ರಂಜನ್ ಅವರ ಬಳಿಗೆ ಬಂದು ಬೆನ್ನು ಸವರಿ ಸಮಾಧಾನ ಮಾಡಿಕೊಳ್ಳಿ ಸರ್ ಎಂದು ಸಮಾಧಾನ ಹೇಳಿದರು.

Add Asianetnews Kannada as a Preferred SourcegooglePreferred

ಹೌದು ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ಅಂಗರಕ್ಷಕ ಡಿ.ಆರ್ ಪೊಲೀಸ್ ಆಗಿದ್ದ ಲೋಕೇಶ್ ಭಾನುವಾರ ಮರದಿಂದ ಬಿದ್ದು ದಾರಣವಾಗಿ ಸಾವನ್ನಪ್ಪಿದ್ದರು. ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಕಾನ್ಬೈಲು ಗ್ರಾಮದ ತಮ್ಮದೇ ತೋಟದಲ್ಲಿ ಲೋಕೇಶ್ ಅವರ ಸಹೋದರ ಮರ ಕಪಾತಿಂಗ್ ಮಾಡಲು ಹೋಗಿದ್ದ ಸಂದರ್ಭ ಮರದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಮಡಿಕೇರಿಯಲ್ಲಿ ಇರುವ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಲೋಕೇಶ್ ಅವರ ಮೃತದೇಹವಿರುವ ವಿಷಯ ತಿಳಿದು ಒಡನೆಯೇ ಅಲ್ಲಿಗೆ ಬಂದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಲೋಕೇಶ್ ಮೃತದೇಹವನ್ನು ಕಂಡು ಕಣ್ಣೀರಿಟ್ಟರು.

ಹೊಳಲ್ಕೆರೆ ಶಾಸಕ ಚಂದ್ರಪ್ಪನ ಹೆಸರು ಬರೆದಿಟ್ಟು ಗ್ರಾ.ಪಂ. ಅಧಿಕಾರಿ ಆತ್ಮಹತ್ಯೆ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವಾಗಲೂ ಬಿಕ್ಕಿ ಬಿಕ್ಕಿ ಅತ್ತ ಅಪ್ಪಚ್ಚು ರಂಜನ್, ಹೆಚ್ಚು ಮಾತನಾಡಲು ಸಾಧ್ಯವಾಗದೆ ಗದ್ಗದಿತರಾಗಿ ಪಕ್ಕಕ್ಕೆ ಸರಿದು ನಿಂತರು. ಸಾವರಿಸಿಕೊಂಡು ಮಾತನಾಡಿದ ಅವರು ಕಳೆದ 10 ವರ್ಷಗಳಿಂದ ನನ್ನ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದ. ಕೇವಲ ಅಂಗರಕ್ಷಕನಾಗಿ ಅಷ್ಟೇ ಅಲ್ಲ, ನನ್ನ ವೈಯಕ್ತಿಕ ಕಾರ್ಯದರ್ಶಿ ಎನ್ನುವ ರೀತಿ ಕೆಲಸ ಮಾಡುತ್ತಿದ್ದನು. ಅದರಲ್ಲೂ 2018 ರಲ್ಲಿ ಭೂಕುಸಿತವಾದಗಲಂತು ಎಲ್ಲಿ ಭೂಕುಸಿತವಾಗಿದ್ದರೂ ಲೋಕೇಶ್ ಮೊದಲು ಮುನ್ನುಗ್ಗುತ್ತಿದ್ದನು. ನಾನು ಸುರಕ್ಷಿತವಾಗಿ ಹೋದ ಬಳಿಕ ನೀವು ಬನ್ನಿ ಎಂದು ಹೇಳುತ್ತಿದ್ದನು. ನನ್ನ ಬಗ್ಗೆ ಅಷ್ಟೊಂದು ಕೇರ್ ಮಾಡುತ್ತಿದ್ದನು. ಇಷ್ಟೆಲ್ಲಾ ಆಪ್ತನಾಗಿದ್ದ ಅಂಗರಕ್ಷಕ ಲೋಕೇಶ್‌ ಮರ ಕಪಾತಿಂಗ್ ಮಾಡಲು ಹೋಗಿ, ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾನೆ ಎಂದು ಭಾವುಕವಾಗಿ ನುಡಿದರು.

ಇನ್ನು ಮೃತ ತನ್ನ ಅಣ್ಣನನ್ನು ನೆನೆದು ತಮ್ಮ ಮನು ಕೂಡ ಕಣ್ಣೀರಿಟ್ಟರು. ಮರ ಕಪಾತಿ ಮಾಡಲು ಹೊರಟಾಗ ಇಂದು ಕಪಾತಿಂಗ್ ಮಾಡುವುದು ಬೇಡ ಎಂದು ಅಮ್ಮ ಕೂಡ ಹೇಳಿದ್ದರು. ಆದರೂ ತೋಟದಲ್ಲಿ ಕೆಲಸ ಮಾಡಲು ಹೋಗಿದ್ದೆವು. ನಾನು ಅವನೊಂದಿಗೆ ಸ್ಥಳದಲ್ಲಿಯೇ ಇದ್ದೆ. ಮರದ ತುದಿಯಲ್ಲಿ ಇರುವಾಗ ಲೋ ಬಿಪಿಯಂತಾಗಿ ತಲೆ ಸುತ್ತುತ್ತಿದೆ, ಸಕ್ಕರೆ ಇದ್ದರೆ ಕೊಡು ಎಂದು ಕೇಳಿದ. ನಾನು ಕೂಡಲೇ ಸಕ್ಕರೆ ತರೋಣ ಎಂದು ಮನೆಯೊಳಕ್ಕೆ ಓಡಿದೆ. ವಾಪಸ್ ಬರುವಷ್ಟರಲ್ಲಿ ಕೆಳಗೆ ಬಿದ್ದೇ ಬಿಟ್ಟ. ಮೇಲಿನಿಂದ ಬಿದ್ದ ರಭಸಕ್ಕೆ ಒಂದು ಕಾಲು ಮತ್ತು ಒಂದು ಕೈ ಮುರಿದಿದೆ. ತನ್ನ ಸಹೋದರನ ಸ್ಥಿತಿ ಹೀಗಾಯಿತ್ತಲ್ಲಾ ಎಂದು ದುಃಖತಪ್ತರಾದರು. 

Bengaluru: ವಿಜಯನಗರ ಸಂಚಾರಿ ಪೊಲೀಸ್ ಹೃದಯಾಘಾತಕ್ಕೆ ಬಲಿ: ಇಲ್ಲಿದೆ ನೋವಿನ ನುಡಿ..

ಇನ್ನು ಅವರ ತಾಯಿಯಂತು ತನ್ನ ಮಗನನ್ನು ನೆನೆದು ಗೋಳಿಟ್ಟರು. ಅವರ ದುಃಖದ ಕಟ್ಟೆಯೊಡೆದು ಮುಗಿಲುಮುಟ್ಟಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ವಿರಾಜಪೇಟೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಕೂಡ ಲೋಕೇಶ್ ಅವರ ಸಾವಿಗೆ ಸಂತಾಪ ಸೂಚಿಸಿದರು. ಇನ್ನು ಕೊಡಗು ಎಸ್.ಪಿ. ಕೆ. ರಾಮರಾಜನ್, ಮಡಿಕೇರಿ ಡಿವೈಎಸ್ಪಿ ಸೇರಿದಂತೆ ಲೋಕೇಶ್ ಅವರ ಅಪಾರ ಸಂಖ್ಯೆ ಸಹೋದ್ಯೋಗಿಗಳು ಬಂತು ನೋಡಿ ಬೇಸರ ವ್ಯಕ್ತಪಡಿಸಿದರು.