Asianet Suvarna News Asianet Suvarna News

ಭಾಗಮಂಡಲದಲ್ಲಿ ಕುಡಿಯುವ ನೀರಿಗೆ ಅಡ್ಡಿಪಡಿಸಿದ ಅರಣ್ಯ ಇಲಾಖೆ ವಿರುದ್ಧ, ಸಿಡಿದೆದ್ದ ಗ್ರಾಮ ಪಂಚಾಯಿತಿಗಳು!

ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಶುರುವಾಗಿದೆ. ಭಾಗಮಂಡಲ ಪಂಚಾಯಿತಿ ಅವರು ನೀರಿಗಾಗಿ ಜಾಕ್ವೆಲ್‌ ನಿರ್ಮಿಸಿದ್ದು, ವಲಯ ಅರಣ್ಯ ಅಧಿಕಾರಿಗಳು  ಕುಡಿಯುವ ನೀರಿಗೆ ಅಳವಡಿಸಲಾಗಿದ್ದ ಪೈಪ್‌ ತೆಗೆದಿದ್ದು ಈಗ ಗಲಾಟೆಗೆ ಕಾರಣವಾಗಿದೆ.

kodagu drinking water crisis forest department and grama panchayath fight for  water in Bhagamandala gow
Author
First Published Feb 22, 2024, 5:32 PM IST

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಫೆ.22): ಕೊಡಗು ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಶುರುವಾಗಿದೆ. ಕುಡಿಯುವ ನೀರಿಗೆ ಇಂತಹ ದೊಡ್ಡ ಸಮಸ್ಯೆ ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಎದುರಾಗಿದೆ. ಕುಡಿಯುವ ನೀರು ಪೂರೈಸುವುದಕ್ಕಾಗಿ ಭಾಗಮಂಡಲ ಗ್ರಾಮ ಪಂಚಾಯಿತಿ ಸದ್ಯ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 73/1 ರಲ್ಲಿ ಜಾಕ್ವೆಲ್ ನಿರ್ಮಿಸಿ ಕುಡಿಯುವ ನೀರು ಪೂರೈಸುವುದಕ್ಕೆ ಮುಂದಾಗಿದೆ.

ಆದರೆ ಅರಣ್ಯ ಇಲಾಖೆ ಇದು ಅರಣ್ಯ ಜಾಗದಲ್ಲಿ ಅನಧಿಕೃತವಾಗಿ ಜಾಕ್ವೆಲ್ ನಿರ್ಮಿಸಲಾಗಿದೆ ಎಂದು ಕುಡಿಯುವ ನೀರು ಪೂರೈಸುವುದಕ್ಕೆ ಜೋಡಿಸಲಾಗಿದ್ದ ನೀರಿನ ಪೈಪು, ಮೋಟರ್ ಮತ್ತು ಮೋಟರ್ ಸ್ಟಾರ್ಟ್ ಸ್ವಿಚ್ಚ್ಗಳನ್ನು ಎತ್ತಿಕೊಂಡಿದೆ. ಹೌದು ಭಾಗಮಂಡಲ ವಲಯ ಅರಣ್ಯ ಅಧಿಕಾರಿ ಅವರು ಕುಡಿಯುವ ನೀರಿಗೂ ಅಡ್ಡಿ ಪಡಿಸುತ್ತಿದ್ದಾರೆ ಎಂದು ಪಂಚಾಯಿತಿ ಗಂಭೀರ ಆರೋಪ ಮಾಡಿದೆ.

ಬಿಟ್ಟಿ ಭಾಗ್ಯಗಳಿಗೆ ಸರಕಾರದ ಬಳಿ ಹಣವಿದೆ, ನರೇಗಾ ಕಾರ್ಮಿಕರ ವೇತನ ನೀಡಲು ನಯಾಪೈಸೆ ಇಲ್ಲ!

ಭಾಗಮಂಡಲದಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗಿರುವುದರಿಂದ ನೈಸರ್ಗಿಕವಾಗಿ ನೀರಿನ ಒರತೆ ಇರುವ ಜಾಗಕ್ಕೆ ಜಾಕ್ವೆಲ್ ನಿರ್ಮಿಸಿ ನೀರು ಪೂರೈಕೆ ಮಾಡಲು ಪಂಚಾಯಿತಿ ಹೊರಟಿತ್ತು. ಎರಡು ತಿಂಗಳಿನಿಂದ ಸರ್ವೆ ನಂಬರ್ 73/1 ರ ನಿಡ್ಡೆಮಲೆ ಕುಟುಂಬ ಮತ್ತು ಇತರೆ ಕುಟುಂಬಗಳ ಜಂಟಿ ಖಾತೆಯಲ್ಲಿರುವ ಜಾಗದಲ್ಲಿ ಜಾಕ್ ವೆಲ್ ಮಾಡಿರುವುದಾಗಿ ಪಂಚಾಯಿತಿ ಹೇಳುತ್ತಿದೆ. ಆದರೆ ದೇವರಕಾಡು ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಮತ್ತು ನೀರಿನ ಪೈಪ್‌ಲೈನ್ ಎಳೆದಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲವನ್ನು ಎತ್ತಿಕೊಂಡು ಹೋಗಿದ್ದಾರೆ.

ದೇವರ ಕಾಡು ಅರಣ್ಯ ಪ್ರದೇಶದಲ್ಲಿ ಕೇವಲ 30 ಅಡಿ ಉದ್ದ ಮಾತ್ರ ವಿದ್ಯುತ್ ಮತ್ತು ನೀರಿನ ಪೈಪ್‌ಲೈನ್ ಎಳೆದಿದ್ದೇವೆ. ಉಳಿದಂತೆ ಜಾಕ್ ವೆಲ್ ಅನ್ನು ಖಾಸಗಿ ಜಾಗದಲ್ಲೇ ಮಾಡಿದ್ದೇವೆ.  ಆದರೂ ಇದು ಅರಣ್ಯ ಜಾಗವೆಂದು ಅರಣ್ಯ ಇಲಾಖೆ ನೀರಿನ ಪೈಪ್ ಮತ್ತು ಮೋಟರ್ ಸ್ವಿಚ್ ಎತ್ತಿಕೊಂಡು ಹೋಗಿದೆ.

ಕಲಬುರಗಿಯಲ್ಲಿ ಅಪ್ರಾಪ್ತರ ಲವ್, ಪ್ರೀತಿ ನಿರಾಕರಿಸಿದ್ದಕ್ಕೆ 10ನೇ ತರಗತಿ ಬಾಲಕಿ ಕತ್ತು ಕೊಯ್ದ 9ನೇ ಕ್ಲಾಸ್‌ ಹುಡುಗ!

ಸದ್ಯ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಿಸುತ್ತಿರುವ ಭಾಗಮಂಡಲ ಗ್ರಾಮ ಪಂಚಾಯಿತಿ ಸುಮಾರು 300 ಮನೆಗಳಿಗೆ ಟ್ಯಾಂಕರ್ ಗಳ ಮೂಲಕ ಮೂರು ದಿನಗಳಿಗೆ ಒಮ್ಮೆ ಕುಡಿಯುವ ನೀರು ಪೂರೈಸುತ್ತಿದೆ. ಈ ಹಿಂದೆ ಜಲಜೀವನ್ ಮಿಷನ್ ಅಡಿಯಲ್ಲಿ ಕೊಳವೆ ಬಾವಿ ಕೊರೆಯಲಾಗಿತ್ತು. ಆದರೆ ಮಳೆ ಕೊರತೆಯಿಂದ ಅಂತರ್ಜಲ ಕುಸಿತವಾಗಿ ಆ ಕೊಳವೆ ಬಾವಿಯಲ್ಲಿ ನೀರು ಸಂಪೂರ್ಣ ಬತ್ತಿಹೋಗಿದೆ.

ಹೀಗಾಗಿ ನೈಸರ್ಗಿಕ ನೀರಿನ ಒರತೆಗೆ ಜಾಕ್ ವೆಲ್ ಮಾಡಿ ಗ್ರಾಮ ಪಂಚಾಯಿತಿ ಗ್ರಾಮಕ್ಕೆ ನೀರು ಪೂರೈಸಲು ಮುಂದಾಗಿತ್ತು. ಕುಡಿಯುವ ನೀರಿಗೂ ಅರಣ್ಯ ಇಲಾಖೆ ಅಧಿಕಾರಿಗಳು ಈ ರೀತಿ ಅಡ್ಡಿ ಪಡಿಸುತ್ತಿರುವುದಕ್ಕೆ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಅರಣ್ಯ ಪ್ರದೇಶವೆಂದು ದಿಶಾ ಆ್ಯಪ್ ಮತ್ತು ನಕಾಶೆಯಲ್ಲಿ ತೋರಿಸುತ್ತಿದೆ ಹೀಗಾಗಿ ಕ್ರಮ ಕೈಗೊಂಡಿದ್ದೇವೆ ಎಂದು ಇಲಾಖೆಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಏನೇ ಆಗಲಿ ಕುಡಿಯುವ ನೀರು ಮತ್ತು ವಿದ್ಯುತ್ಗೆ ಯಾವುದೇ ಅಡ್ಡಿ ಪಡಿಸಬಾರದು ಎಂದು ಸುಪ್ರೀಂ ಕೋರ್ಟೇ ಹೇಳಿರುವಾಗ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ತೀವ್ರ ಬರಗಾಲದ ಸಂದರ್ಭದಲ್ಲೂ ಈ ರೀತಿ ತೊಂದರೆ ನೀಡುತ್ತಿರುವುದು ನಿಜಕ್ಕೂ ಅಕ್ಷಮ್ಯ. 

Follow Us:
Download App:
  • android
  • ios