ಬೆಂಗಳೂರಿನ ಚಂದ್ರಾ ಲೇಔಟ್ ವ್ಯಾಪ್ತಿಯಲ್ಲಿ, ಫಿರ್ದೋಸ್ ಭಾನು ಎಂಬ ವಿವಾಹಿತ ಮಹಿಳೆಯನ್ನು ಪ್ರೀತಿ ನಿರಾಕರಿಸಿದ ಕಾರಣಕ್ಕೆ ಅಫೀಸ್ ಎಂಬಾತ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಈ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಆರೋಪಿ ಮಹಿಳೆಯನ್ನು ಹಿಂಬಾಲಿಸಿ ಈ ಕೃತ್ಯ ಎಸಗಿದ್ದು, ಸದ್ಯ ಪರಾರಿಯಾಗಿದ್ದಾನೆ.
ಬೆಂಗಳೂರು ನಗರದ ಚಂದ್ರಾ ಲೇಔಟ್ ವ್ಯಾಪ್ತಿಯ ಗಂಗೊಂಡನಹಳ್ಳಿಯಲ್ಲಿ ಭೀಕರ ಹತ್ಯೆ ಪ್ರಕರಣ ನಡೆದಿದೆ. ಫಿರ್ದೋಸ್ ಭಾನು ಎಂಬ ವಿವಾಹಿತ ಮಹಿಳೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಧ್ಯಾಹ್ನ ವೇಳೆ ನಡೆದಿದೆ. ಮಾಹಿತಿಯ ಪ್ರಕಾರ, ಫಿರ್ದೋಸ್ ಭಾನು ಅವರ ಹೊಟ್ಟೆ, ತೊಡೆ ಹಾಗೂ ಕೈ ಭಾಗಗಳಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆಗೆ ಪರಿಚಿತನಾದ ವ್ಯಕ್ತಿಯೇ ಈ ಕೃತ್ಯ ಎಸಗಿದ್ದಾನೆ.
ಆರೋಪಿಯನ್ನು ಅಫೀಸ್ ಎಂದು ಗುರುತಿಸಲಾಗಿದ್ದು, ಆತ ಸ್ಥಳೀಯವಾಗಿ ಆಟೋ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದನು. ಕಳೆದ ಕೆಲ ತಿಂಗಳಿನಿಂದ ಫಿರ್ದೋಸ್ ಹಿಂದೆ ಬಿದ್ದಿದ್ದ ಆತ ಬಿದ್ದಿದ್ದ, ತನ್ನನ್ನು ಪ್ರೀತಿ ಮಾಡು ಎಂದು ಒತ್ತಾಯಿಸುತ್ತಿದ್ದನೆಂದು ತಿಳಿದುಬಂದಿದೆ. ಆದರೆ, ಫಿರ್ದೋಸ್ ಈ ವಿಚಾರವನ್ನು ನಿರಾಕರಿಸಿ, ಆತನನ್ನು ದೂರವಿರಿಸಲು ಪ್ರಯತ್ನಿಸುತ್ತಿದ್ದಳು. ಈ ವಿಷಯ ಹಿಂದೆಯೇ ಚಂದ್ರಾ ಲೇಔಟ್ ಪೊಲೀಸ್ ಠಾಣೆವರೆಗೂ ಹೋಗಿತ್ತು. ಈ ಬಗ್ಗೆ ಫಿರ್ದೋಸ್ ದೂರು ನೀಡಿದ್ದಳು. ಪೊಲೀಸರು ಆರೋಪಿಯನ್ನು ಕರೆಸಿ ಎಚ್ಚರಿಕೆ ನೀಡಿ ಇನ್ನು ಮುಂದೆ ಮಹಿಳೆಯನ್ನು ಕಿರುಕುಳ ನೀಡುವುದಿಲ್ಲ ಎಂದು ಆತ ಮುಚ್ಚಳಿಕೆ ಬರೆದು ಕೊಟ್ಟಿದ್ದನಂತೆ.
ಮತ್ತೆ ಮತ್ತೆ ಹಿಂದೆ ಬಿದ್ದ ಕೊಲೆಗಾರ
ಆದರೆ ಅಫೀಸ್ ಮತ್ತೆ ಅದೇ ಚಾಳಿ ಮುಂದುವರೆಸಿದ್ದಾನೆ, ಫಿರ್ದೋಸ್ ಅವರ ಹಿಂದೆ ಸುತ್ತುತ್ತಾ ಮಾತನಾಡುವಂತೆ ಒತ್ತಾಯಿಸುತ್ತಿದ್ದನು. ಆದರೆ, ಫಿರ್ದೋಸ್ ಆತನನ್ನು ಸಂಪೂರ್ಣವಾಗಿ ದೂರವಿಡಲು ಯತ್ನಿಸುತ್ತಿದ್ದಳ. ಇಬ್ಬರೂ ಬೇರೆ ಬೇರೆ ಪ್ರದೇಶಗಳಲ್ಲಿ ವಾಸವಾಗಿದ್ದರೂ, ಫಿರ್ದೋಸ್ ಎಲ್ಲಿಗೆ ಹೋಗುತ್ತಾಳೆ ಎಂಬುದನ್ನು ಆರೋಪಿ ಗಮನಿಸುತ್ತಿದ್ದನಂತೆ.
ಘಟನೆ ನಡೆದ ದಿನ ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ, ಫಿರ್ದೋಸ್ ಗಂಗೊಂಡನಹಳ್ಳಿ ಮಸೀದಿ ಸಮೀಪದ ಮನೆ ಕೆಲಸದಲ್ಲಿದ್ದಾಗ, ಆರೋಪಿ ಅವಳನ್ನು ಹಿಂಬಾಲಿಸಿಕೊಂಡು ಬಂದಿದ್ದನು. ಈ ವೇಳೆ ಇಬ್ಬರ ನಡುವೆ ವಾಗ್ವಾದ ಉಂಟಾಗಿ, ಕೋಪೋದ್ರಿಕ್ತನಾದ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮವಾಗಿ ಫಿರ್ದೋಸ್ ಭಾನು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಮೂರು ಮಕ್ಕಳ ತಾಯಿ
ಅವ್ನು ಗ್ಯಾರೇಜ್ ನಲ್ಲಿ ಕೆಲಸ ಮಾಡ್ತಿದ್ದ. ಮಾತಾಡು ಮಾತಾಡು ಅಂತಾ ಹಿಂದೆ ಬಿದ್ದಿದ್ದ. ಮನೇಲಿ ಹೇಳ್ತೀನಿ ಅಂತಾ ಹೆದರಿಸ್ತಿದ್ದ. ಈಕೆ ಆತನ ಅವೈಡ್ ಮಾಡಿದ್ಲು. ಈಕೆಗೆ ಮದುವೆ ಆಗಿ ಮೂರು ಮಕ್ಕಳು ಇದೆ. ಇವನಿಗೆ ಮದುವೆ ಆಗಿರಲಿಲ್ಲ. ಆದ್ರೂ ಮಾತಾಡು ಮಾತಾಡು ಅಂತಾ ಹಿಂದೆ ಬಿದ್ದಿದ್ದ. ಮಾತಾಡಿಲ್ಲಾ ಅಂತಾ ಇವತ್ತು ಈ ತರ ಮಾಡಿದ್ದಾನೆ ಎಂದು ಮೃತಳ ಅಕ್ಕ ಸಲ್ಮಾ ಹೇಳಿಕೆ ನೀಡಿದ್ದಾರೆ.


