ನಾಯಿ ಸಾಕುವುದು ಎಂದರೆ ಕೆಲವರಿಗೆ ಫ್ಯಾಷನ್ ಆದರೆ ಇನ್ನು ಕೆಲವರು ತಮ್ಮ ರಕ್ಷಣೆಗಾಗಿ ಅಂತ ನಾಯಿ ಸಾಕುತ್ತಾರೆ. ಆದರೆ ಅವುಗಳನ್ನು ಸರಿಯಾಗಿ ಕಟ್ಟಿ ಸಾಕುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಕೆಲವು ನಾಯಿಗಳು ಜನರ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡುತ್ತವೆ.

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

Add Asianetnews Kannada as a Preferred SourcegooglePreferred

ಕೊಡಗು (ಆ.18): ನಾಯಿ ಸಾಕುವುದು ಎಂದರೆ ಕೆಲವರಿಗೆ ಫ್ಯಾಷನ್ ಆದರೆ ಇನ್ನು ಕೆಲವರು ತಮ್ಮ ರಕ್ಷಣೆಗಾಗಿ ಅಂತ ನಾಯಿ ಸಾಕುತ್ತಾರೆ. ಆದರೆ ಅವುಗಳನ್ನು ಸರಿಯಾಗಿ ಕಟ್ಟಿ ಸಾಕುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಕೆಲವು ನಾಯಿಗಳು ಜನರ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡುತ್ತವೆ. ಅಂತಹದ್ದೇ ಪ್ರಕರಣ ಕೊಡಗಿನಲ್ಲಿ ನಡೆದಿದ್ದು ಈಗ ಕೊಡಗು ಜಿಲ್ಲಾ ಪೊಲೀಸ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಇನ್ನು ಮುಂದೆ ಕೊಡಗಿನಲ್ಲಿ ನಾಯಿ ಕಚ್ಚಿದರೆ ನಾಯಿ ಮಾಲೀಕರಿಗೆ ಜೈಲು ಶಿಕ್ಷೆ ಖಚಿತ ಎಂದು ಕೊಡಗು ಎಸ್ಪಿ ರಾಮರಾಜನ್ ಆದೇಶ ಹೊರಡಿಸಿದ್ದಾರೆ. 

ಹೌದು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಪಾರಾಣೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಭವ್ಯ ಅವರ ಮೇಲೆ ಅಲ್ಲಿ ಮಾಚಯ್ಯ ಎಂಬುವರ ರಾಟ್ ವಿಲರ್ ತಳಿಯ ನಾಯಿ ಮಾರಣಾಂತಿಕವಾಗಿ ಕಚ್ಚಿ ಗಾಯಗೊಳಿಸಿದೆ. ಭವ್ಯ ಅವರು ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದು ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭವ್ಯವರ ಎಡ ತೋಳು ಕುತ್ತಿಗೆ ಸೇರಿದಂತೆ ದೇಹದ ಇತರೆ ಭಾಗಗಳಿಗೆ ತೀವ್ರವಾಗಿ ಕಚ್ಚಿ ಗಾಯಗೊಳಿಸಿದೆ. ಭವ್ಯ ಅವರು ಮಾಚಯ್ಯ ಅವರ ಮನೆಯಲ್ಲಿರುವ ಬಾಣಂತಿ ಮತ್ತು ಮಗುವಿನ ಆರೋಗ್ಯ ವಿಚಾರಣೆಗೆ ಹೋಗಿದ್ದರು. 

ರಾತ್ರೋರಾತ್ರಿ ಬಾಲಕಿಯರ ಹಾಸ್ಟೆಲ್​ಗೆ ನುಗ್ಗಿದ ಯುವಕ: ಆರೋಪಿಯ ಬಂಧನ

ಆರೋಗ್ಯ ವಿಚಾರಿಸಿ ವಾಪಸ್ ಆಗುವಾಗ ನಾಯಿ ದಾಳಿ ಮಾಡಿದೆ. ನಾಯಿ ದಾಳಿಯಿಂದ ಭವ್ಯ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಸದ್ಯ ನಾಯಿ ಮಾಲೀಕರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಗೆ ಭವ್ಯ ಅವರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಭವ್ಯ ಅವರು ತಾಯಿ ಮಗುವಿನ ಆರೋಗ್ಯ ವಿಚಾರಿ ವಾಪಸ್ ಆಗುವ ವೇಳೆ ನಾಯಿ ದಾಳಿ ಮಾಡಿತು. ಕೂಡಲೇ ಮಾಚಯ್ಯ ಅವರು ಬಂದು ನಾಯಿ ಬಿಡಿಸಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಬಳಿಕ ಅವರ ಮಗ ಬಂದು ಬಿಡಿಸಿದರು. ಇಂತಹ ಘಟನೆಗೆ ಯಾರಿಗೂ ಆಗಬಾರದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೊಡಗು ಪೊಲೀಸ್ ಇನ್ನು ಮುಂದೆ ಕೊಡಗಿನಲ್ಲಿ ಸಾಕು ನಾಯಿಗಳಿಂದ ಜನರ ಮೇಲೆ ದಾಳಿಯಾದರೆ ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆ ಆದರೆ ಐಪಿಸಿ ಸೆಕ್ಷನ್ 289 ಅನ್ವಯ ಪ್ರಕರಣ ದಾಖಲಿಸಿ ಆರು ತಿಂಗಳು ಜೈಲುವಾಸಕ್ಕೆ ಕಳುಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡರೆ ಆರು ತಿಂಗಳಿಂದ 1 ವರ್ಷದವರೆಗೆ ಜೈಲು ವಾಸ, ಮಾರಣಾಂತಿಕವಾಗಿ ದಾಳಿಯಾದರೆ 10 ವರ್ಷದವರೆಗೆ ಜೈಲು ವಾಸ ಇದೆ. 

ಮಾಟ ಮಂತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಸೋಲಾಗಿದೆ: ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ

ಅಂತಹ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಅವರು ಭವ್ಯ ಅವರು ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಜೊತೆಗೆ ನರರೋಗ ತಜ್ನರಿಂದ ವರದಿ ಪಡೆಯಲಾಗಿದೆ. ಯಾವುದೇ ತೊಂದರೆ ಇಲ್ಲ ಎಂದು ವರದಿ ನೀಡಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ನಾಯಿ ಮಾಲೀಕರ ವಿರುದ್ಧ ಭವ್ಯ ಅವರು ಪೊಲೀಸ್ ದೂರು ನೀಡಿದ್ದಾರೆ ಎಂದಿದ್ದಾರೆ.