Asianet Suvarna News Asianet Suvarna News

ಕಾರವಾರ: ಬಾನಂಗಳದಲ್ಲಿ ಹಾರಾಡಿ ಮನಸೂರೆಗೊಳಿಸಿದ ಬಾಲಂಗೋಚಿಗಳು..!

ಉತ್ತರಕನ್ನಡ ಜಿಲ್ಲೆಯ ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ನಡೆಯುತ್ತಿರುವ ಕರುನಾಡ ಕರಾವಳಿ ಉತ್ಸದ ಅಂಗವಾಗಿ ಗಾಳಿಪಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸಂಕಲ್ಪ ಕಮ್ಯೂನಿಕೇಶನ್ ಹಾಗೂ ಕರುನಾಡ ಕರಾವಳಿ ಉತ್ಸವ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈ ಸ್ಪರ್ಧೆಯಲ್ಲಿ ತರಹೇವಾರಿ ಬಣ್ಣದ ವಿವಿಧ ಗಾತ್ರದ ವಿವಿಧ ಚಿತ್ರ, ವಿನ್ಯಾಸದ ಗಾಳಿಪಟಗಳ ಸೊಬಗು ಕಡಲ ತಡಿಗೆ ಆಗಮಿಸಿದ್ದ ಪ್ರವಾಸಿಗರ ಮನಸೂರೆಗೊಳಿಸಿತು. 

Kite Competition Held at Karwar in Uttara Kannada grg
Author
First Published Feb 6, 2023, 2:30 AM IST

ಭರತ್‌ ರಾಜ್, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರಕನ್ನಡ(ಫೆ.06): ಅಲ್ಲಿ ತುಳುನಾಡಿನ ಜಾನಪದ ಕಲೆ, ಪೌರಾಣಿಕ ಕಥೆ, ಜೀವಜಂತುಗಳನ್ನು ಬಿಂಬಿಸುವ ಬಾಲಂಗೋಚಿಗಳು ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿತ್ತು. ಪುಟಾಣಿ ಮಕ್ಕಳು, ಯುವಕ-ಯುವತಿಯರು ಈ ಬಾಲಂಗೋಚಿಗಳನ್ನು ಹಿಡಿದುಕೊಂಡು ಅತ್ತಿಂದಿತ್ತ ಓಡಾಡುತ್ತಾ ಗಾಳಿಯಲ್ಲಿ ಹಾರಿಸುತ್ತಾ ಸಂಭ್ರಮಿಸುತ್ತಿದ್ದರು. ನೂರಾರು ಸಂಖ್ಯೆಯಲ್ಲಿ ಜಮಾಯಿದ್ದ ಪೋಷಕರು ಹಾಗೂ ಪ್ರವಾಸಿಗರು ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಂತೋಷ ಪಡುತ್ತಿದ್ದರು. ಅಷ್ಟಕ್ಕೂ ನಡೆಯುತ್ತಿದ್ದದ್ದಾದ್ರೂ ಏನು ಅಂತೀರಾ..? ಈ ಸ್ಟೋರಿ ನೋಡಿ....

ಹೌದು, ಉತ್ತರಕನ್ನಡ ಜಿಲ್ಲೆಯ ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ನಡೆಯುತ್ತಿರುವ ಕರುನಾಡ ಕರಾವಳಿ ಉತ್ಸದ ಅಂಗವಾಗಿ ಗಾಳಿಪಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸಂಕಲ್ಪ ಕಮ್ಯೂನಿಕೇಶನ್ ಹಾಗೂ ಕರುನಾಡ ಕರಾವಳಿ ಉತ್ಸವ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈ ಸ್ಪರ್ಧೆಯಲ್ಲಿ ತರಹೇವಾರಿ ಬಣ್ಣದ ವಿವಿಧ ಗಾತ್ರದ ವಿವಿಧ ಚಿತ್ರ, ವಿನ್ಯಾಸದ ಗಾಳಿಪಟಗಳ ಸೊಬಗು ಕಡಲ ತಡಿಗೆ ಆಗಮಿಸಿದ್ದ ಪ್ರವಾಸಿಗರ ಮನಸೂರೆಗೊಳಿಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಟೀಂ ಮಂಗಳೂರಿನ ದಿನೇಶ್ ಹೊಳ್ಳ ನೇತೃತ್ವದ ನುರಿತ ತಂಡ ಗಾಳಿಪಟಗಳನ್ನು ಹಾರಿಸಿ, ಸ್ಥಳೀಯರನ್ನು ಹುರಿದುಂಬಿಸಿದರು. ಜೆಲ್ಲಿಫಿಶ್, ಜೆಟ್, ಬಾವಲಿ, ಪೌರಾಣಿಕ ಕಥೆಯ ಗರುಡ, ತ್ರಿವರ್ಣ ಧ್ವಜ, ಕಥಕ್ಕಳ್ಳಿ ಯಕ್ಷಗಾನ, ಉದ್ದ ಬಾಲದ ಗಾಳಿಪಟ, ಬಣ್ಣದ ಚಿಟ್ಟೆ ಸೇರಿದಂತೆ 20ಕ್ಕೂ ಹೆಚ್ಚು ಬಾಲಂಗೋಚಿಗಳು ಬಾನಂಗಳದಲ್ಲಿ ಬಾನಾಡಿಗಳಂತೆ ಹಾರಾಡಿದವು. ಜನರು ತ್ಯಾಜ್ಯಗಳನ್ನು ಕಡಲಿಗೆ ಸೇರಿಸದಂತೆ ತಿಳಿ ಹೇಳುವ ಉದ್ದೇಶದಿಂದ ಕಡಲ ಒಡಲು ನಮ್ಮದು ಮುಂತಾದ ಸಂದೇಶಗಳನ್ನು ಹೊಂದಿರುವ ಗಾಳಿಪಟ ಕೂಡಾ ಬಾನಲ್ಲಿ ಹಾರಾಡುತ್ತಿತ್ತು.

ಉತ್ತರಕನ್ನಡದಲ್ಲಿ ಜೈಲಿನಿಂದ ಪರಾರಿಯಾದ ಕೈದಿ ಬಂಧನ, ಮೈಸೂರಿನಲ್ಲಿ ಪೆರೋಲ್‌ ಮೇಲೆ ತೆರಳಿದ ಕೈದಿ ಭೂಗತ!

ಈ ಗಾಳಿಪಟ ಸ್ಪರ್ಧೆಯಲ್ಲಿ ಯುವಕರು, ಯುವತಿಯರು, ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 30 ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದಿರುವ ಟೀಂ ಮಂಗಳೂರು ಹಾಗೂ ಸ್ಪರ್ಧಾಳುಗಳು ಹಾರಿಸಿದ ಗಾಳಿಪಟಗಳನ್ನು ಕಂಡ ಸ್ಥಳೀಯರು ಹಾಗೂ ಪ್ರವಾಸಿಗರು ಸಂತೋಷಪಟ್ಟರು. ಈ ವೇಳೆ ಅತೀ ಹೆಚ್ಚು ಹೊತ್ತು ಆಕಾಶದಲ್ಲಿ ಹಾರಾಡಿದ, ಜಾಗೃತಿ ಮೂಡಿಸುವಂಥ ಗಾಳಿಪಟಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಹಿಂದೆ ಮಕ್ಕಳು, ಬಾಲಕರು ಹಾರಾಡಿಸುತ್ತಿದ್ದ ಗಾಳಿಪಟ ಇಂದು ಸ್ಪರ್ಧೆಯ ರೂಪದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದು, ಮಂಗಳೂರಿನ ತಂಡವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಕಾರವಾರದಲ್ಲಿ ನಡೆಯುತ್ತಿರುವ ಕರುನಾಡ ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಲಾದ ಗಾಳಿಪಟ ಸ್ಪರ್ಧೆಯಲ್ಲಿ ಹಲವರು ಭಾಗವಹಿಸಿ ಸಂತೋಷಪಟ್ಟರು. ಬಾನಲ್ಲಿ ಬಾಲಂಗೋಚಿಗಳನ್ನು ಹಾರಿಸುವ ಮೂಲಕ ಜನರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಂತೂ ಸತ್ಯ.

Follow Us:
Download App:
  • android
  • ios