ಇದು ಗಡಿನಾಡ ಕನ್ನಡಿಗನ ಸಾಧನೆ. ಕೇರಳ ಪೊಲೀಸ್ ಇಲಾಖೆಗೆ ಸೇರಿ ತಮ್ಮ ಸೇವಾ ಕೌಶಲ್ಯ ಮೆರೆದು ಇದೀಗ ರಾಷ್ಟ್ರಪತಿ ಪ್ರಶಸ್ತಿ ಪಡೆದಿದ್ದಾರೆ. ಈ ಗಡಿನಾಡ ಕನ್ನಡಿಗನ ಸಾಧನೆಗೆ ಜೈ ಎನ್ನಲೇಬೇಕು. 

ಮಂಗಳೂರು (ಆ.20): ಕೇರಳದ ಮಲಬಾರ ಸ್ಪೆಷಲ್‌ ಪೊಲೀಸ್‌ ಇದರ ಸಹಾಯಕ ಕಮಾಂಡೆಂಟ್‌ ಶ್ರೀರಾಮ ತಲೆಂಗಳ ಇವರು ತಮ್ಮ ಸೇವಾ ಅವಧಿಯಲ್ಲಿ ಸಲ್ಲಿಸಿದ ವಿಶೇಷ ಕಾರ್ಯಕೌಶಲ್ಯತೆಗಾಗಿ ರಾಷ್ಟ್ರಪತಿಯವರ ವಿಶಿಷ್ಟಸೇವಾ ಪದಕ 2018ಕ್ಕೆ ಆಯ್ಕೆಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ತಲೆಂಗಳದವರು. ತಲೆಂಗಳ ಶ್ರೀ ಕೃಷ್ಣ ಭಟ್‌ ಮತ್ತು ಸುಶೀಲ ಕೃಷ್ಣ ಭಟ್‌ ದಂಪತಿಯ ಪುತ್ರರಾದ ಶ್ರೀರಾಮ, 10ನೇ ತರಗತಿಯನ್ನು ಪೈವಳಿಕೆ ಕನ್ನಡ ಹಿರಿಯ ಪ್ರೌಢ ಶಾಲೆಯಲ್ಲಿ ಹಾಗೂ ವಾಣಿಜ್ಯ ಪದವಿಯನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಮಾಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದಾರೆ. ಕಾಲೇಜು ಜೀವನದಲ್ಲಿ ಉತ್ತಮ ಕ್ರೀಡಾಳು (ವೈಟ್‌ ಲಿಫ್ಟಿಂಗ್‌) ಆಗಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು.

ಕೊಚ್ಚಿ ಹೋದ ಸೇತುವೆ ಮೂರೇ ದಿನದಲ್ಲಿ ನಿರ್ಮಾಣ

ಕೇರಳ ಪೊಲೀಸ್‌ ಇಲಾಖೆಯನ್ನು 1992ರಲ್ಲಿ ಸೇರಿದ ಶ್ರೀರಾಮ ತಲೆಂಗಳ ಅವರು, ತಿರುವನಂತಪುರದ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಒಂದು ವರ್ಷದ ತರಬೇತಿ ಪಡೆದು ಸಬ್‌ ಇನ್‌ಸ್ಪೆಕ್ಟರ್‌ರಾಗಿ ನಿಯುಕ್ತಿಗೊಂಡರು. ಕಣ್ಣೂರು, ಶಬರಿಮಲೆ, ಮಧ್ಯ ಕೇರಳ ಹಾಗೂ ತಿರುವನಂತಪುರ ಹೀಗೆ ಕೇರಳದುದ್ದಕ್ಕೂ ಹಲವಾರು ಕಡೆ ಕಾರ್ಯನಿರ್ವಹಿಸಿದ್ದಾರೆ. 2011ರಲ್ಲಿ ಕಣ್ಣೂರು ಸಹಾಯಕ ಕಮಾಂಡೆಂಟ್‌ ಹುದ್ದೆಗೆ ಪದೋನ್ನತಿ ಪಡೆದ ಇವರು 2017ರಲ್ಲಿ ಮಲಬಾರ್‌ ಸ್ಪೆಷಲ್‌ ಬ್ರಾಂಚ್‌ನ ಮಲಪ್ಪುರಂಗೆ ವರ್ಗವಾಗಿದ್ದಾರೆ.

ಮಲಬಾರ್‌ ಸ್ಪೆಷಲ್‌ ಬ್ರಾಂಚ್‌ ಎಂಬುದು ಪೊಲೀಸ್‌ ಹುದ್ದೆಗೆ ವಿಶೇಷ ತರಬೇತಿ ನೀಡುವ ಕೇಂದ್ರವಾಗಿದೆ. ಇಲ್ಲಿ ತರಬೇತು ಪಡೆದವರನ್ನು ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಳಿಸುತ್ತಾರೆ. ವಿಶೇಷ ಆವಶ್ಯಕತೆಗಳ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ಪೊಲೀಸ್‌ರನ್ನು ಪೂರೈಸುವ ಕೆಲಸವೂ ಮಲಬಾರ್‌ ಸ್ಪೆಷಲ್‌ ಬ್ರಾಂಚ್‌ ಮಾಡುತ್ತದೆ. ಪ್ರಸ್ತುತ ಈ ಕೇಂದ್ರದ ಸಹಾಯಕ ಕಮಾಂಡೆಂಟ್‌ ಜವಾಬ್ದಾರಿಯನ್ನು ಶ್ರೀರಾಮ ತಲೆಂಗಳ ಅವರು ಹೊಂದಿದ್ದಾರೆ.

ಪತ್ನಿ ಗಾಯತ್ರಿ ಶ್ರೀರಾಮ ಹಾಗೂ ಪುತ್ರ ನಂದನ ಕೃಷ್ಣ ಇವರನ್ನೊಳಗೊಂಡ ಪುಟ್ಟಸಂಸಾರ ಶ್ರೀರಾಮ ತಲೆಂಗಳ ಅವರದು. ಕೇರಳದ ಎಲಿಮಲದ ಭಾರತೀಯ ನೌಕಾ ಅಕಾಡೆಮಿಯಲ್ಲಿ ಬಿ.ಟೆಕ್‌ ಮಾಡುತ್ತಿರುವ ನಂದನ ಕೃಷ್ಣ ಅವರು ಮುಂಬರುವ ದಿನಗಳಲ್ಲಿ ಭಾರತೀಯ ನೌಕಾ ಪಡೆ ಸೇರಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ