ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ವಿರುದ್ಧ ಮಕ್ಕಳ ದೌರ್ಜನ್ಯದ ಗಂಭೀರ ಆರೋಪ ಕೇಳಿಬಂದಿದೆ. ಪಂಚಮಸಾಲಿ ಯುವಘಟಕದ ರಾಜ್ಯಾಧ್ಯಕ್ಷ ಕಿಚಡಿ ಕೊಟ್ರೇಶ್ ಅವರು, ಮಠದ ಮಕ್ಕಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿರುವ ತಾಯಿಯೊಬ್ಬರ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ದಾವಣಗೆರೆ (ಏ.15): ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ಸುತ್ತಲಿನ ವಿವಾದ ಈಗ ಮತ್ತೊಂದು ಸ್ಫೋಟಕ ತಿರುವು ಪಡೆದುಕೊಂಡಿದೆ. ವೀರಶೈವ ಲಿಂಗಾಯತ ಪಂಚಮಸಾಲಿ ಯುವಘಟಕದ ರಾಜ್ಯಾಧ್ಯಕ್ಷ ಕಿಚಡಿ ಕೊಟ್ರೇಶ್ ಅವರು ಶ್ರೀಗಳ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದು, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ಬಿಡುಗಡೆ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಶಾರದಮ್ಮನ ವಿಡಿಯೋ ಬಾಂಬ್:

ವಿಜಯಪುರ ಮೂಲದ ಶಾರದಮ್ಮ ಎಂಬ ತಾಯಿ ಮಾತನಾಡಿರುವ ವಿಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋದಲ್ಲಿ ಶಾರದಮ್ಮ ತಮ್ಮ ಅಳಲನ್ನು ತೋಡಿಕೊಂಡಿದ್ದು, 'ನನ್ನ ಮಕ್ಕಳನ್ನು ಮಠದಲ್ಲಿ ಓದಲಿ ಎಂದು ಇಟ್ಟಿದ್ದೆ. ಆದರೆ ಏಳು ಮತ್ತು ಎಂಟನೇ ತರಗತಿಯಲ್ಲಿದ್ದ ನನ್ನ ಮಕ್ಕಳನ್ನು ಮಠದ ರೂಮ್‌ನಲ್ಲಿ ಕೂಡಿ ಹಾಕಿ ಹೊಡೆಯಲಾಗುತ್ತಿತ್ತು. ಮಕ್ಕಳ ಮೇಲೆ ಈ ರೀತಿ ದೌರ್ಜನ್ಯ ಎಸಗಿದರೆ ತಂದೆ-ತಾಯಿಗೆ ಎಷ್ಟು ನೋವಾಗುತ್ತದೆ? ವಚನಾನಂದ ಶ್ರೀಗಳು ಕೇವಲ ಶ್ರೀಮಂತರನ್ನು, ರಾಜಕಾರಣಿಗಳನ್ನು ನೋಡುವುದಲ್ಲ, ಬಡ ಮಕ್ಕಳ ಸಂಕಷ್ಟವನ್ನೂ ನೋಡಬೇಕು' ಎಂದು ಕಣ್ಣೀರಿಟ್ಟಿದ್ದಾರೆ. ಸದ್ಯ ಆ ತಾಯಿ ತನ್ನ ಮಕ್ಕಳನ್ನು ಮಠದಿಂದ ಮರಳಿ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಮಸಾಜ್‌ಗೆ ಮಕ್ಕಳ ಬಳಕೆ? ಕಿಚಡಿ ಕೊಟ್ರೇಶ್ ಆಕ್ರೋಶ:

ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಕಿಚಡಿ ಕೊಟ್ರೇಶ್, ವಚನಾನಂದ ಶ್ರೀಗಳ ವಿರುದ್ಧ ಹರಿಹಾಯ್ದರು. 'ಉಚ್ಚಾಟಿತ ವಚನಾನಂದ ಸ್ವಾಮೀಜಿ ಹೇಗೋ ಬಂದು ಮಠಕ್ಕೆ ಸೇರಿಕೊಂಡಿದ್ದಾರೆ. ಇವರು ಮಸಾಜ್ ಮಾಡಿಸಿಕೊಳ್ಳಲು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಏನಾದರೂ ಕೇಳಲು ಹೋದರೆ ಏರು ಧ್ವನಿಯಲ್ಲಿ ಮಾತನಾಡುತ್ತಾರೆ. ಇವರೊಬ್ಬ ಕ್ಯಾರೆಕ್ಟರ್ ಲೆಸ್ ಪರ್ಸನ್ (ಚಾರಿತ್ರ್ಯಹೀನ ವ್ಯಕ್ತಿ), ಇವರು ಬದಲಾಗಲು ಸಾಧ್ಯವೇ ಇಲ್ಲ' ಎಂದು ಕಿಡಿಕಾರಿದರು.

ಗೌರವಯುತವಾಗಿ ಮಠ ಬಿಟ್ಟು ತೊಲಗಿ:

ಸ್ವಾಮೀಜಿಯ ಬೆನ್ನಿಗೆ ನಿಂತಿರುವ ಭಕ್ತರಿಗೂ ಎಚ್ಚರಿಕೆ ನೀಡಿದ ಕೊಟ್ರೇಶ್, 'ಇಂತಹ ಉಚ್ಚಾಟಿತ ಸ್ವಾಮೀಜಿಯ ಬೆನ್ನಿಗೆ ನಿಲ್ಲಬೇಡಿ. ಇವರು ನಮ್ಮ ನಮ್ಮಲ್ಲೇ ಜನರನ್ನು ಎತ್ತಿಕಟ್ಟಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಈ ಹಿಂದೆ ಸಿದ್ದಲಿಂಗೇಶ್ವರ ಸ್ವಾಮೀಜಿ ಇವರನ್ನು ಮಠದಿಂದ ಉಚ್ಚಾಟನೆ ಮಾಡಿದಾಗ ಗೌರವಯುತವಾಗಿ ಹೋಗಿ ಎಂದಿದ್ದರು. ಈಗ ಏಕೆ ನೀವು ಮಠಕ್ಕೆ ಅಂಟಿಕೊಂಡು ಕುಳಿತಿದ್ದೀರಿ? ನೀವು ಯಾವುದೇ ಪಾಂಡಿತ್ಯ ಪಡೆದು ಬಂದವರಲ್ಲ, ಕೇವಲ ಶಿಫಾರಸಿನ (ರೆಕಮೆಂಡ್) ಮೇಲೆ ಬಂದವರು' ಎಂದು ವಾಗ್ದಾಳಿ ನಡೆಸಿದರು.

ಲೆಕ್ಕ ಕೊಡಿ ಚಳುವಳಿ:

ಮಠದ ಆಡಳಿತ ಮತ್ತು ಆರ್ಥಿಕ ವಿಚಾರಗಳ ಬಗ್ಗೆಯೂ ಪ್ರಶ್ನೆ ಎತ್ತಿದ ಕೊಟ್ರೇಶ್, 'ಮಠದ ಲೆಕ್ಕ ಕೊಡಿ ಚಳುವಳಿಗೆ ನಾವು ಬೆಂಬಲ ನೀಡುತ್ತೇವೆ. ಈ ಹಿಂದೆ 50 ಸ್ವಾಮೀಜಿಗಳ ತಂಡವನ್ನು ಇವರು ಕಟ್ಟಿದ್ದರು, ಆ ತಂಡ ಏಕೆ ಒಡೆಯಿತು? ಉಚ್ಚಾಟನೆ ಮಾಡಿದ ಮೇಲೂ ಮಠ ಬಿಡದೆ ಇರಲು ಕಾರಣವೇನು? ಕೂಡಲೇ ಗೌರವಯುತವಾಗಿ ಮಠ ಬಿಟ್ಟು ಹೋಗಿ' ಎಂದು ಸವಾಲು ಹಾಕಿದ್ದಾರೆ. ವಚನಾನಂದ ಶ್ರೀಗಳ ಮೇಲೆ ಕೇಳಿಬಂದಿರುವ ಈ ಮಕ್ಕಳ ದೌರ್ಜನ್ಯದ ಆರೋಪ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಒಂದು ವೇಳೆ ಈ ಆರೋಪಗಳು ಸಾಬೀತಾದಲ್ಲಿ ಸ್ವಾಮೀಜಿಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.