ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಕಾಂಗ್ರೆಸ್ ಎಸ್‌.ಆರ್.ಪಾಟೀಲರಿಗೆ ಕೈತಪ್ಪಿದ  ಪರಿಷತ್ ಸ್ಥಾನ   ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ  ಮನವಿ ಮಾಡಿದ್ದ ಬೆಂಬಲಿಗರು ಪಾಟೀಲರಿಗೆ ನೀಡದೇ ಹೋದರೆ ಉತ್ತರ ಕರ್ನಾಟಕದಲ್ಲಿ ಕೈ ಪಕ್ಷಕ್ಕೆ  ಹಾನಿ ಎಂದ ಬೆಂಬಲಿಗರು

ಬಾಗಲಕೋಟೆ (ಮೇ.23): ರಾಜ್ಯ ರಾಜಕಾರಣದಲ್ಲಿ ಈಗ ಬಿಜೆಪಿ (BJP), ಕಾಂಗ್ರೆಸ್ (Congress), ಜೆಡಿಎಸ್ (JDS) ಸೇರಿದಂತೆ ಎಲ್ಲಿ ಕೇಳಿದರೂ ಸಾಕು ಈಗ ವಿಧಾನ ಪರಿಷತ್‌ನದ್ದೇ ಸುದ್ದಿ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಆರ್.ಪಾಟೀಲಗೆ (SR patil) ಟಿಕೆಟ್ ನೀಡುವಂತೆ ಬೆಂಬಲಿಗರು ಆಗ್ರಹಿಸಿದ್ದರು. ಆದರೆ ಲೆಕ್ಕಾಚಾರವೀಗ ತಲೆಕೆಳಗಾಗಿದೆ. ಕಾಂಗ್ರೆಸ್ ಎರಡು ಸ್ಥಾನಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಎಂ ನಾಗರಾಜು ಯಾದವ್ ಹಾಗೂ ಕೆ ಅಬ್ದುಲ್ ಜಬ್ಬಾರ್ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿ ಪ್ರಕಟಿಸಿದೆ. ಹಲವು ನಾಯಕರ ಲಾಬಿ ನಡುವೆ ಎಂ ನಾಗರಾಜು ಯಾದವ್ ಹಾಗೂ ಕೆ ಅಬ್ದುಲ್ ಜಬ್ಬಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದೀಗ ಎಲ್ಲರ ಚಿತ್ತ ಬಿಜೆಪಿಯತ್ತ ನೆಟ್ಟಿದೆ. 

Add Asianetnews Kannada as a Preferred SourcegooglePreferred

 ಹೀಗಾಗಿ ಉತ್ತರ ಕರ್ನಾಟಕದ ಹಿರಿಯ ಕಾಂಗ್ರೆಸ್ಸಿಗ ಎಸ್.ಆರ್.ಪಾಟೀಲ ಅವರಿಗೆ ಪರಿಷತ್ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂಬ ಕೂಗಿಗೆ ಮನ್ನಣೆ ಸಿಕ್ಕಿಲ್ಲ. ಉತ್ತರ ಕರ್ನಾಟಕದ ಬಾಗಲಕೋಟೆ ವಿಜಯಪುರ ಗದಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಎಸ್ ಆರ್ ಪಾಟೀಲ್ ಅವರ ಅಭಿಮಾನಿಗಳು ಶತಾಯಗತಾಯ ಎಸ್ಆರ್ ಪಾಟೀಲ್ ಅವರಿಗೆ ಈ ಬಾರಿ ಅವಕಾಶ ನೀಡಲೇಬೇಕು ಎಂದು ಆಗ್ರಹಿಸಿದ್ದರು. ಈಗ ಟಿಕೆಟ್ ಕೈ ತಪ್ಪಿದ್ದು ಮುಂದೆ ಬೆಂಬಲಿಗರ ನಡೆ ಏನು ಎಂಬುದು ಕಾದು ನೋಡಬೇಕಿದೆ.

ಕಾಫಿನಾಡಿನಲ್ಲಿ ಸರಳ ಸಾಮೂಹಿಕ ವಿವಾಹ, ದಲಿತರ ಸಾಂಸ್ಕೃತಿಕ ವೈಭವದ ಅನಾವರಣ

ಮಾಜಿ ಸಚಿವ ಎಸ್.ಆರ್.ಪಾಟೀಲ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರಾಗಿದ್ದು, 25 ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿ, ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದು, ಇವುಗಳ ಮಧ್ಯೆ ಪಕ್ಷ ಕೆಲವೊಮ್ಮೆ ಅಧಿಕಾರ ನೀಡದೇ ಹೋದಾಗಲೂ ಸಹ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡಿದಂತವರು. ಅವರನ್ನು ಪರಿಷತ್ ಗೆ ಆಯ್ಕೆ ಮಾಡಬೇಕೆಂಬ ಕೂಗು ಹೆಚ್ಚಾಗಿ ಕೇಳಿ ಬರುತ್ತಿತ್ತು.

ಈ ನಿಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸ್ಪಂದಿಸಿ ಎಸ್.ಆರ್.ಪಾಟೀಲರನ್ನು ಪರಿಷತ್ ಗೆ ಆಯ್ಕೆ ಮಾಡುವಂತಹ ಕೆಲಸ ಮಾಡಬೇಕು ಎಂದು ಬಾಗಲಕೋಟೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಪೀರಪ್ಪ ಮ್ಯಾಗೇರಿ ಮತ್ತು ಕಾಂಗ್ರೆಸ್ ಮುಖಂಡ ರಾಜು ಮನ್ನಿಕೇರಿ ಆಗ್ರಹಿಸಿದ್ದರು.

Vijayapura ವಿಪತ್ತು ನಿರ್ವಹಣಾ ವಿಶೇಷ ಸಭೆ ನಡೆಸಿದ ಜಿಲ್ಲಾಧಿಕಾರಿ

ಮಾಜಿ ಪರಿಷತ್ ನ ವಿಪಕ್ಷ ನಾಯಕ ಎಸ್.ಆರ್.ಪಾಟೀಲರನ್ನು ವಿಧಾನ ಪರಿಷತ್ ಸ್ಥಾನಕ್ಕೆ ಕಳಿಸುವ ವಿಚಾರದಲ್ಲಿ ರಾಜ್ಯ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಒಗ್ಗಟ್ಟು ಉಳಿದಿಲ್ಲ ಎಂಬುದು ಇದೀಗ ಬಹಿರಂಗ ಗುಟ್ಟು.

ಈ ಮಧ್ಯೆ ಕಳೆದ ಬಾರಿ ವಿಧಾನ‌ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆದಾಗಲೂ ಎಸ್.ಆರ್.ಪಾಟೀಲ ಸೇರಿ ಇಬ್ಬರು ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗೆ ಇಳಿಸಲು ಚಿಂತನೆ ನಡೆಸಿದಾಗ ಪಾಟೀಲರು ಏಕೈಕ ಅಭ್ಯರ್ಥಿಯಾದರೆ ಮಾತ್ರ ಸ್ಪರ್ಧೆ ಮಾಡೋದಾಗಿ ಹೇಳಿ ಹಿಂದೆ ಸರಿದಿದ್ದರು. ಇನ್ನು ಇತ್ತೀಚೆಗೆ ಪಕ್ಷಾತೀತವಾಗಿ ಎಸ್.ಆರ್.ಪಾಟೀಲರು ಪಾದಯಾತ್ರೆ ನಡೆಸಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಆದ್ರೆ ಅದ್ಯಾವುದೂ ವರ್ಕ್ ಆಗಿಲ್ಲ. ಈ ಬಾರಿಯೂ ಪಾಟೀಲರನ್ನು ವಿಧಾನ ಪರಿಷತ್ ಸ್ಥಾನಕ್ಕೆ ಕಳಿಸುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಮನಸ್ಸು ಮಾಡಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.