ಮಳೆ, ಪ್ರವಾಹ ಹಿನ್ನೆಲೆ, ಜಿಲ್ಲಾ ವಿಪತ್ತು ನಿರ್ವಹಣಾ ವಿಶೇಷ ಸಭೆ ಜಿಲ್ಲಾಧಿಕಾರಿಗಳು, ಜಿಪಂ CEO ಜಂಟಿ ಸಭೆ ಪ್ರಾಣ-ಆಸ್ತಿಹಾನಿ ಪರಿಹಾರಕ್ಕೆ 24 ಗಂಟೆಯೊಳಗೆ ಕ್ರಮಕ್ಕೆ ಸೂಚನೆ

ವಿಜಯಪುರ (ಮೇ 23): ಈಗಾಗಲೇ ಮುಂಗಾರು ಮಳೆಗಳು ಆರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ ಪೂರ್ವ ಮುಂಗಾರು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

Add Asianetnews Kannada as a Preferred SourcegooglePreferred

ಜಿ.ಪಂ ಸಭಾಂಗಣದಲ್ಲಿ ನಡೆದ ವಿಶೇಷ ಸಭೆ: ಕುಡಿಯುವ ನೀರಿನ ಸಮಸ್ಯೆ ಮತ್ತು ಪೂರ್ವ ಮುಂಗಾರು ಪರಿಸ್ಥಿತಿ ಎದುರಿಸುವ ಕುರಿತು ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಖ್ಯವಾಗಿ ಮುಖ್ಯಮಂತ್ರಿಗಳ ಆಶಾಭಾವನೆಯಂತೆ ಜಿಲ್ಲೆಯಲ್ಲಿ ಪ್ರವಾಹ ಆಗದ ಹಾಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಭೀಮಾ, ಕೃಷ್ಣಾ, ಡೋಣಿ ಪ್ರವಾಹದ ಮುನ್ನೆಚ್ಚರಿಕೆ ಬಗ್ಗೆ ಚರ್ಚೆ: ತೀವ್ರ ಮಳೆಯಾಗಿ ಮಹಾರಾಷ್ಟ್ರದಿಂದ ನೀರು ಹರಿಬಿಟ್ಟಲ್ಲಿ ಭೀಮಾ, ಕೃಷ್ಣಾ ಮತ್ತು ಡೋಣಿ ನಂದಿ ತುಂಬಿದಾಗಲು ಜಿಲ್ಲೆಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕಂದಾಯ, ಹೆಸ್ಕಾಂ, ಲೋಕೋಪಯೋಗಿ, ಪಂಚಾಯತ್ ರಾಜ್ಯ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಸೇರಿದಂತೆ ಇನ್ನೀತರ ಮಹತ್ವದ ಇಲಾಖೆಗಳ ಅಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

INTERNATIONAL YOGA DAYಗೆ ಮೋದಿ ಆಗಮನ, ಮೈಸೂರಿನಲ್ಲಿ ಭರ್ಜರಿ ಸಿದ್ಧತೆ

ಮಳೆಯಿಂದಾಗಿ ಜನ-ಜಾನುವಾರುಗಳ ಜೀವ ಹಾನಿಯಾದಲ್ಲಿ 24 ಗಂಟೆಯೊಳಗೆ ಪರಿಹಾರಕ್ಕಾಗಿ‌‌ ಮುಂದಿನ ಕ್ರಮ ಜರುಗಿಸಬೇಕು. ಮನೆಹಾನಿ ಪರಿಹಾರದ ಕ್ರಮಕ್ಕೂ ಸಹ 24 ಗಂಟೆಯೊಳಗೆ ಸಮೀಕ್ಷೆ ನಡೆಸಲು ಮುಂದಾಗಬೇಕು. ಬೆಳೆಹಾನಿ ಸಂಭವಿಸಿದಲ್ಲಿ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಬೇಕು ಎಂದ ಜಿಲ್ಲಾಧಿಕಾರಿಗಳು, ಇದುವರೆಗಿನ ಜೀವ ಹಾಗು ಆಸ್ತಿಹಾನಿ ಮತ್ತು ಬೆಳೆಹಾನಿಗೆ ಪರಿಹಾರ ಕೊಡುವ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಹಳ್ಳಿಗಳಿಗೆ ಭೇಟಿ ಮಾಡಿ ಎಂದ ಡಿಸಿ: ಗ್ರಾಮ ಸಹಾಯಕರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರೊಂದಿಗೆ ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಪ್ರವಾಹ ಸಂಭವನೀಯ ಹಳ್ಳಿಗಳಿಗೆ ಭೇಟಿ ನೀಡಬೇಕು. ಕಾಳಜಿ ಕೇಂದ್ರ ತೆರೆಯಲು ಯೋಜಿಸಬೇಕು. ಗ್ರಾಮಸ್ಥರೊಂದಿಗೆ ಒಳ್ಳೆಯ ಸಂಬಂಧ ಹೊಂದಬೇಕು. ನದಿಪಾತ್ರದ ಜನರಿಗೆ, ಇಂತಲ್ಲಿ ಪ್ರವಾಹ ಬರುತ್ತದೆ ಎಂದು ತಿಳಿ ಹೇಳಬೇಕು ಎಂದು ಸಲಹೆ ಮಾಡಿದರು.

ತಹಶೀಲ್ದಾರ್ ಗಳು ಅಲರ್ಟ್ ಆಗಿರುವಂತೆ ಸೂಚನೆ: ಮಳೆ ಮತ್ತು ಪ್ರವಾಹ ಎದುರಾದಾಗ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಪಿಡಿಓಗಳು ಹೆಚ್ಚಿನ ಕಾಳಜಿ ವಹಿಸಬೇಕು. ಮುಖ್ಯವಾಗಿ ಆಯಾ ತಾಲೂಕಿನ ತಹಶೀಲ್ದಾರ್ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

UDUPI MANGO MELA ದೇವಾಲಯಗಳ ನಗರಿಯಲ್ಲಿ ಮಾವಿನ ದರ್ಬಾರು

ಹೆಸ್ಕಾಂ ಅಧಿಕಾರಿಗಳಿಗು ಎಚ್ಚರಿಕೆ ವಹಿಸಿ: ತೀವ್ರ ಮಳೆಯಾಗುತ್ತಿದ್ದಂತೆ ಕೆಲವಡೆ ವಿದ್ಯುತ್ ತಂತಿಗಳು ಕೆಳಗಡೆ ಜೋತಾಡುವ ಸ್ಥಿತಿ ಇರುತ್ತದೆ. ಮಳೆಯಾದಾಗ ಹಾಳಾದರೆ ಕೂಡಲೇ ಬೇರೊಂದನ್ನು ಜೋಡಿಸಲು ವಿದ್ಯುತ್ ಟ್ರಾನ್ಸಪರ್ಮರಗಳ ಲಭ್ಯತೆಯ ಇರಬೇಕೆಂದು ಹೇಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ನೀರಿನ ಪರೀಕ್ಷೆ ನಡೆಯಲಿ: ಮಳೆಗಾಲದಲ್ಲಿ ನೀರು ಕಲುಷಿತವಾಗುವುದು ಸಹಜ. ನೀರಿನ ಪರೀಕ್ಷೆ ನಿಯಮಿತ ನಡೆಸಬೇಕು. ಪಾಗಿಂಗ್ ಮಾಡಿಸಬೇಕು. ಲಾರ್ವಾ ಸಮೀಕ್ಷೆ ಕೈಗೊಳ್ಳಬೇಕು. ಔಷಧಿಯ ಲಭ್ಯತೆ ಇರಬೇಕು. ಮಳೆಯಿಂದಾಗಿ ಸಾವಗೀಡಾಗುವ ಪ್ರಾಣಿಗಳ ಮೃತದೇಹ ಕೊಳೆಯದಂತೆ, ತುರ್ತು ವಿಲೇವಾರಿಗೆ ಗಮನ ಹರಿಸಬೇಕು ಎಂದು ನಗರಸಭೆ, ಆರೋಗ್ಯ ಇಲಾಖೆ, ಪಶು ಸಂಗೋಪನೆ, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ನಗರಸಭೆ ಅಧಿಕಾರಿಗಳಿಗೆ ಸೂಚನೆ: ಮಳೆಗಾಲದ ವೇಳೆಯಲ್ಲಿ ನೀರು ಸರಾಗವಾಗಿ ಹರಿಯಲು ನಗರದ ಎಲ್ಲಾ ಕಡೆಗಿನ ಗಟಾರುಗಳನ್ನು ಶುಚಿಯಾಗಿರಿಸಬೇಕು.ಚರಂಡಿಯಿಂದ ಕಸ ತೆಗೆದಕೂಡಲೇ ಅದರ ವಿಲೇವಾರಿಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು, ನಗರಸಭೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಹಾಯವಾಣಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿ: ಜನತೆಗೆ ಅನುಕೂಲವಾಗುವಂತೆ ಸಹಾಯವಾಣಿ ಸಂಖ್ಯೆಗಳನ್ನು ಮಾಧ್ಯಮಗಳ ಮೂಲಕ ಪ್ರಚುರಪಡಿಸಬೇಕು. ಸಹಾಯವಾಣಿಗೆ ಬರುವ ದೂರುಗಳು ಕಡ್ಡಾಯ ದಾಖಲಾಗಬೇಕು. ಪರಿಹಾರಕ್ಕೆ ದೂರನ್ನು ಯಾರಿಗೆ ವರ್ಗಾಯಿಸಲಾಗಿದೆ ಎಂಬುದರ ವಿವರ ನಮೂದಾಗಬೇಕು. ಜನರ ನೋವಿಗೆ ಪ್ರಾಮಾಣಿಕ ಸ್ಪಂದನೆ ನೀಡಬೇಕು ಎಂದು ಸಲಹೆ ಮಾಡಿದರು. ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಡಿಜಾಸ್ಟರ್ ಮ್ಯಾನೇಜ್ಮೆಂಟ್ ಪ್ಲಾನ್ ಸರಿಯಾಗಿ ಅನುಷ್ಠಾನವಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಮನ್ವಯದಿಂದ ಕೆಲಸ ಮಾಡಿ:ಮಳೆ, ಪ್ರವಾಹ ಸಂದರ್ಭದಲ್ಲಿ ಏನೇ ತೊಂದರೆಯಾದಲ್ಲಿ ಕೂಡಲೇ ಘಟನಾ ಸ್ಥಳಕ್ಕೆ ಹೋಗಬೇಕು. ಜೀವ ಆಸ್ತಿಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಮಳೆಯಿಂದಾಗಿ ಗಿಡ-ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ವಿದ್ಯುತ್ ಕಡಿತ, ನೀರಿನ ತೊಂದರೆಯಂತಹ ಸಮಸ್ಯೆಗಳು ಕೂಡಲೇ ಪರಿಹಾರವಾಗಲು ಕಂದಾಯ, ಹೆಸ್ಕಾಂ, ಅರಣ್ಯ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಯಂತಹ ಮಹತ್ವದ ಇಲಾಖೆಗಳ ಸಮನ್ವಯ ಮುಖ್ಯ ಎಂದು ಇದೆ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ ಅಧಿಕಾರಿಗಳಿಗೆ ಸಲಹೆ ಮಾಡಿದರು.

15 ದಿನಗಳ ಗಡುವು :ಮಳೆ ಮತ್ತು ಪ್ರವಾಹ ಎದುರಾದ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ಹಳ್ಳಿಯ ಜನತೆ ತೊಂದರೆಗೀಡಾಗಬಾರದು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಪ್ರತಿಯೊಂದು ಹಳ್ಳಿಗಳ ಪೂರ್ಣ ಶುಚಿತ್ವಕ್ಕೆ, ಗಟಾರು ಸ್ವಚ್ಛತೆ, ಸುಗಮ ನೀರು ಸರಬರಾಜಿಗೆ ಕ್ರಮ ವಹಿಸಬೇಕು ಎಂದು ಸಿಇಓ ಅವರು ಇದೆ ವೇಳೆ ಸಭೆಯ ಮೂಲಕ ಎಲ್ಲ ಪಿಡಿಓಗಳಿಗೆ 15 ದಿನಗಳ ಗಡುವು ವಿಧಿಸಿದರು.