ಮಸೀದಿಗಳಿಂದ ಶಬ್ದ ಮಾಲಿನ್ಯ: ನೋಟಿಸ್ ಜಾರಿ
ಪಿ.ರಾಕೇಶ್ ಮತ್ತು ಅಯ್ಯಪ್ಪ ದಾಸ್ ಸೇರಿ 32 ಥಣಿಸಂದ್ರದ ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ| ಏ.15ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್| ಶಬ್ದ ಮಾಲಿನ್ಯ ಉಂಟಾಗಿ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅರ್ಜಿಯಲ್ಲಿ ನಮೂದು|
ಬೆಂಗಳೂರು(ಮಾ.15): ನಗರದ ಥಣಿಸಂದ್ರದಲ್ಲಿ 16 ಮಸೀದಿಗಳಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್ಪಿಸಿಬಿ) ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಪಿ.ರಾಕೇಶ್ ಮತ್ತು ಅಯ್ಯಪ್ಪ ದಾಸ್ ಸೇರಿ 32 ಥಣಿಸಂದ್ರದ ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಆದೇಶ ಮಾಡಿತು. ಜತೆಗೆ, ನಗರ ಪೊಲೀಸ್ ಆಯುಕ್ತರಿಗೂ ನೋಟಿಸ್ ಜಾರಿ ಮಾಡಿ ಏ.15ಕ್ಕೆ ವಿಚಾರಣೆ ಮುಂದೂಡಿತು.
ನಿಖಾಹ್ ಆದ್ರೂ ಪತಿ ದೂರ: ನ್ಯಾಯಕ್ಕಾಗಿ ಮಸೀದಿ ಮೊರೆ ಹೋದ ಮತಾಂತರಿತ ಪತ್ನಿ
ನಗರದ ಥಣಿಸಂದ್ರ, ರಾಚೇನಹಳ್ಳಿ, ನಾಗವಾರ, ಎಚ್ಆರ್ಬಿಆರ್ ಲೇಔಟ್ ಮತ್ತು ಸಿಂತನ್ ನಗರದಲ್ಲಿ 16 ಮಸೀದಿಗಳು ಇವೆ. ಅಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಧ್ವನಿವರ್ಧಕ ಬಳಸಿ ಪ್ರಾರ್ಥನೆ ಮಾಡಲಾಗುತ್ತಿದೆ. ಧ್ವನಿವರ್ಧಕಗಳಿಂದ ನಿಗದಿತ ಡೆಸಿಬಲ್ಗಿಂತ ಹೆಚ್ಚಿನ ಶಬ್ದ ಹೊರಸೂಸುತ್ತಿದೆ. ಇದರಿಂದ ಮಸೀದಿ ಸುತ್ತಮುತ್ತ ಶಬ್ದ ಮಾಲಿನ್ಯ ಉಂಟಾಗಿ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.