ಧಾರವಾಡದ ಉಚ್ಛ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆದು 1576 ಪ್ರಕರಣಗಳನ್ನು ಪರಿಗಣಿಸಲಾಯಿತು. 275 ಪ್ರಕರಣಗಳನ್ನು ರೂ.10,77,31,500/- ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು. ಅಪಘಾತ ಪರಿಹಾರ, ಚೆಕ್ ಅಮಾನ್ಯ, ಸಿವಿಲ್ ಪ್ರಕರಣಗಳು ಸೇರಿದಂತೆ ಹಲವು ಬಗೆಯ ಪ್ರಕರಣಗಳ ಇತ್ಯರ್ಥವಾಯಿತು.
ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ : ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ ಇಂದು (ಜು.12) ರಾಷ್ಟ್ರೀಯ ಲೋಕ ಅದಾಲತ್ನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿಗಳಾದ ಆರ್. ದೇವದಾಸ್ರವರ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.
ಇಂದಿನ ರಾಷ್ಟ್ರೀಯ ಲೋಕ್ ಅದಾಲತನಲ್ಲಿ ಗೌರವಾನ್ವಿತ ನ್ಯಾಯಮೂರ್ತಿಗಳಾದ ಆರ್. ದೇವದಾಸ್, ಪ್ರದೀಪ್ ಸಿಂಗ್ ಯೆರೂರ್, ರಾಜೇಶ್ ರೈ. ಕೆ. ಮತ್ತು ಕೆ. ವಿ. ಅರವಿಂದ್ ಹಾಗೂ ಇವರೊಂದಿಗೆ ಲೋಕ ಅದಾಲತ್ತಿನ ಸದಸ್ಯರುಗಳಾದ ಕೆ. ಎಲ್. ಪಾಟೀಲ, ಶ್ರೀ. ಆರ್. ಎಚ್. ಅಂಗಡಿ, ಶ್ರೀ. ಎಮ್. ಸಿ. ಹುಕ್ಕೇರಿ, ಮತ್ತು ಎಮ್. ಟಿ. ಬಾಂಗಿ ವಕೀಲರು ಸೇರಿ ಒಟ್ಟು 4 ಪೀಠಗಳನ್ನು ಆಯೋಜಿಸಲಾಗಿತ್ತು. ಸದರಿ ಅದಾಲತನಲ್ಲಿ ಒಟ್ಟು 1576 ಪ್ರಕರಣಗಳನ್ನು ಕೈಗೈತ್ತಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 275 ಪ್ರಕರಣಗಳನ್ನು ರೂ.10,77,31,500/- ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.
ಸದರಿ ಲೋಕ ಅದಾಲತ್ತಿನಲ್ಲಿ ಅಪಘಾತ ಪರಿಹಾರ ಪ್ರಕರಣಗಳ ಜೊತೆಗೆ ವಿಶೇಷವಾಗಿ ಚೆಕ್ಕು ಅಮಾನ್ಯ ಪ್ರಕರಣಗಳ ಮೇಲ್ಮನವಿಗಳು-05, ಸಿವಿಲ್ ಪ್ರಕರಣಗಳು-2, ರಿಟ್ ಅರ್ಜಿಗಳು-38 ಈ ರೀತಿ ಸುಮಾರು ವರ್ಷಗಳಿಂದ ಇತ್ಯರ್ಥವಾಗದ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಮೂಲಕ ಉಬಯ ಪಕ್ಷಗಾರರ ಪರಸ್ಪರ ಸಂಬಂಧಗಳನ್ನು ಉತ್ತಮವಾಗಿ, ಸೌಹಾರ್ದಯುತವಾಗಿ ಎಲ್ಲರಿಗೂ ನ್ಯಾಯ ಎಂಬ ಧ್ಯೇಯ ವಾಕ್ಯದಂತೆ ಅತ್ಯಂತ ಸರಳ ರೀತಿಯಲ್ಲಿ ನ್ಯಾಯಾಲಯದ ಅಂಗಳಕ್ಕೆ ಬಂದ ಕಕ್ಷಿದಾರರಿಗೆ ನ್ಯಾಯವು ದೊರಕುವಂತೆ ಮಾಡಿದ್ದು ಈ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಕಾಣಬಹುದಾಗಿತ್ತು ಎಂದು ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ, ಅಧೀಕ ವಿಲೇಖನಾಧಿಕಾರಿಗಳು (ನ್ಯಾಯಾಂಗ) ಮತ್ತು ಕಾರ್ಯದರ್ಶಿಗಳು ಹಾಗೂ ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ, ಧಾರವಾಡ ಪೀಠ, ಧಾರವಾಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
