Guarantee Schemes: ಗ್ಯಾರಂಟಿ ಯೋಜನೆಯ ಕಾರ್ಯಕ್ರಮಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ. ಪರಿಷ್ಕರಣೆಯ ನಂತರ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಸವಲತ್ತುಗಳು ಸಿಗಲಿವೆ ಎಂದು ಎಚ್.ಎಂ.ರೇವಣ್ಣ ಹೇಳಿದರು.
ಹೊಸದುರ್ಗ (ಜೂ.17): ಗ್ಯಾರಂಟಿ ಯೋಜನೆಯ ಕಾರ್ಯಕ್ರಮಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ. ಪರಿಷ್ಕರಣೆಯ ನಂತರ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಸವಲತ್ತುಗಳು ಸಿಗಲಿವೆ ಎಂದು ಗ್ಯಾರಂಟಿ ಯೋಜನೆಯ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
ಪಟ್ಟಣದ ಗ್ಯಾರಂಟಿ ಯೋಜನೆ ಸಮಿತಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜದ ಪ್ರತಿಯೊಬ್ಬ ಕಟ್ಟ ಕಡೆಯ ಫಲಾನುಭವಿಗಳಿಗೂ ತಲುಪಬೇಕು ಈ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎನ್ನುವುದು ಈ ಯೋಜನೆಯ ಉದ್ದೇಶ ಆದರೆ ಕಳೆದ ಡಿಸೆಂಬರ್ನಲ್ಲಿ ನಡೆದ ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಭೆಯಲ್ಲಿ ಸುಮಾರು 79 ಸಾವಿರ ಕೋಟಿ ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗದೆ ಬ್ಯಾಂಕುಗಳಲ್ಲಿಯೇ ಉಳಿದ ಹಿನ್ನಲೆಯಲ್ಲಿ ಸರ್ಕಾರ ಪರಿಷ್ಕರಣೆಗೆ ಮುಂದಾಗಿದೆ ಎಂದರು.
ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಹಾಸ್ಯ ಮಾಡುತ್ತಿದ್ದ ಬಿಜೆಪಿ ಇತ್ತೀಚಿಗೆ ನಡೆದ ಹಲವು ರಾಜ್ಯಗಳ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದೆ. ಹಾಗಾದರೆ ಆ ರಾಜ್ಯಗಳು ದೀವಾಳಿಯಾಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯವನರು ಈ ಯೋಜನೆಗೆ ಬೇಕಾಗುವ ಅನುದಾನವನ್ನು ಕಾಯ್ದಿರಿಸಿಯೇ ಅನುಷ್ಠಾನ ತಂದಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಸರ್ಕಾರವಾಗಲಿ ರಾಜ್ಯವಾಗಲೀ ದಿವಾಳಿಯಾಗಿಲ್ಲ. ಈ ಕಾರ್ಯಕ್ರಮಗಳಿಂದ ಆರ್ಥಿಕವಾಗಿ ಹಿಂದುಳಿದವರು, ಬಡವರು ನಿರ್ಗತಿಕರು ಸಬಲರಾಗಲು ಸಾಧ್ಯವಾಗಿದೆ ಎಂದರು.
ಖಾತೆಗೆ ಹಾಕಲಾಗುವುದು
ಗೃಹಲಕ್ಷ್ಮಿ ಹಾಗೂ ಗೃಹ ಜ್ಯೋತಿಯ ಹಣ ನಮ್ಮ ರಾಜ್ಯದ ಜನರಿಗೆ ಸಿಗಬೇಕು ಎನ್ನುವುದು ಇಂದಿನ ಮುಖ್ಯಮಂತ್ರಿಗಳ ಉದ್ದೇಶ ಈ ಹಿನ್ನಲೆಯಲ್ಲಿ ಅತಿ ಶೀಘ್ರದಲ್ಲಿಯೇ ಪರಿಷ್ಕರಣೆ ಮಾಡಿ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಲಾಗುವುದು ಎಂದರು. ವಿರೋಧ ಪಕ್ಷದ ನಾಯಕರು ಈ ಕಮಿಟಿ ಯಾಕೇ ಬೇಕು ಎಂದು ಪ್ರಶ್ನಿಸಿದ್ದಾರೆ, ಈ ಕಾರ್ಯಕ್ರಮವನ್ನು ಕಂಡು ಹಿಡಿದವರೇ ನಾವು ರಾಜ್ಯದಲ್ಲಿ 4ಸಾವಿರ ಈ ಕಮಿಟಿಯ ಪಡೆ ಇದೆ. ಅಲ್ಲದೆ 5 ಇಲಾಖೆಗಳ ಅಧಿಕಾರಿಗಳ ಸಂಪರ್ಕದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇದಲ್ಲದೆ ಶೀಘ್ರವಾಗಿ ನೋಂದಣಿಗೆ ಅನುಕೂಲವಾಗಲೆಂದು ಆ್ಯಪ್ ವೊಂದನ್ನು ಸೃಷ್ಟಿಸಲಾಗುತ್ತಿದೆ ಎಂದರು.


