ಬೆಂಗಳೂರಿನಲ್ಲಿ 21000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ರಸ್ತೆ
21,091 ಕೋಟಿ ಅಂದಾಜು ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು ಫೆರಿಫೆರಲ್ ರಸ್ತೆ ನಿರ್ಮಾಣ
ರಾಜ್ಯ ಸರ್ಕಾರದಿಮದ ರಸ್ತೆ ನಿರ್ಮಾಣಕ್ಕೆ ಅನುಮೋದನೆ
ಬೆಂಗಳೂರು (ಜ.19): ಪೆರಿಫೆರಲ್ ಹೊರವರ್ತುಲ ರಸ್ತೆಯನ್ನು 21,091 ಕೋಟಿ ಅಂದಾಜು ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) ನಿರ್ಮಿಸಲು ಅನುಮೋದನೆ ದೊರೆತಿದೆ. ಕಾಲಮಿತಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲು ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸೋಮವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆರಿಫೆರಲ್ ರಿಂಗ್ ರಸ್ತೆ(ಪಿಆರ್ಆರ್)ಗೆ ಆರ್ಥಿಕ ನೆರವು ನೀಡಲು ಇಸ್ರೇಲ್ ಮೂಲದ ಎಂಎಝಡ್ ಕಂಪನಿ ಮುಂದೆ ಬಂದಿದೆ. ಶೀಘ್ರವೇ ಯೋಜನೆ ಅನುಷ್ಠಾನಕ್ಕೆ ಅಗತ್ಯ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬೆಂಗ್ಳೂರು ಸಬರ್ಬನ್ ರೈಲು ಯೋಜನೆ: ಮಾರ್ಗ ನಿರ್ಮಾಣ ಅಂತಿಮ
ಬಿಡಿಎ ವಿವಿಧ ಬಡಾವಣೆಗಳ ನಿರ್ಮಾಣಕ್ಕೆ ರೈತರಿಂದ ಪಡೆದ ಜಮೀನಿಗೆ ಬದಲಾಗಿ ಶೇ.40 ರಷ್ಟುಅಭಿವೃದ್ಧಿ ಹೊಂದಿದ ಜಮೀನು ಅವರಿಗೆ ನೀಡುವಂತೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಇನ್ನು ಮುಂದೆ ತಡ ಮಾಡಿದರೆ ರೈತರು ಬಯಸುವ ಕಡೆಯಲ್ಲೇ ಈ ನಿವೇಶನಗಳನ್ನು ನೀಡಲಾಗುವುದು. ಜತೆಗೆ ಪ್ರಗತಿಯಲ್ಲಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಿ, ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ನಿರ್ದೇಶನ. ಈಗಾಗಲೇ ನಿರ್ಮಿಸಲಾಗಿರುವ ಸಾವಿರಾರು ಫ್ಲಾಟ್ಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದು ಖಾಲಿ ನಿವೇಶನಗಳು, ವಸತಿ ಯೋಜನೆಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಮಾತೃ ಇಲಾಖೆಗೆ ಎಂಜಿನಿಯರ್ಗಳು!
ಪ್ರಾಧಿಕಾರದಲ್ಲಿ ಸುಮಾರು 24 ಮಂದಿ ಎಂಜಿನಿಯರುಗಳು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕಾರ್ಯಭಾರವನ್ನು ಪರಿಶೀಲಿಸಿ, ಅಗತ್ಯವಿಲ್ಲದಿದ್ದರೆ ಅವರ ಸೇವೆಯನ್ನು ಮಾತೃ ಇಲಾಖೆಗೆ ಹಿಂದಿರುಗಿಸಲಾಗುವುದು. ಅದೇ ರೀತಿ ಪ್ರಸ್ತುತ ಬಿಡಿಎನಲ್ಲಿ 196 ಮಂದಿ ವಕೀಲರು ಇದ್ದು, ಹೆಚ್ಚಿನ ಕಾರ್ಯಭಾರ ಇಲ್ಲದ ವಕೀಲರನ್ನು ಪ್ಯಾನೆಲ…ನಿಂದ ಕೈಬಿಡಲು ಸೂಚನೆ ನೀಡಲಾಗಿದೆ. ಅನಗತ್ಯವಾಗಿ ಇಷ್ಟುಜನರ ಅಗತ್ಯವಿಲ್ಲ. ಈ ಬಗ್ಗೆ ಅಡ್ವೋಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಸರ್ಕಾರ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಆಯುಕ್ತ ಡಾ ಮಹದೇವ ಸೇರಿದಂತೆ ಇತರರು ಇದ್ದರು.