ಬೆಂಗಳೂರಿನ ನಿವೃತ್ತ ಶಿಕ್ಷಕಿಯೊಬ್ಬರನ್ನು ಸಿಬಿಐ ಅಧಿಕಾರಿಗಳೆಂದು ನಂಬಿಸಿ, ಮನಿ ಲ್ಯಾಂಡರಿಂಗ್ ಕೇಸ್ನಲ್ಲಿ ಸಿಲುಕಿಸುವ ಬೆದರಿಕೆ ಹಾಕಿ 'ಡಿಜಿಟಲ್ ಅರೆಸ್ಟ್' ಮಾಡಲಾಗಿದೆ. ಸೈಬರ್ ವಂಚಕರು ತಿಂಗಳುಗಟ್ಟಲೆ ಅವರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಬರೋಬ್ಬರಿ 24 ಕೋಟಿ ರೂಪಾಯಿ ದೋಚಿದ್ದಾರೆ.
ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಮೇ 24): ಇದು ಕರ್ನಾಟಕದ ಅತಿದೊಡ್ಡ ಡಿಜಿಟಲ್ ಅರೆಸ್ಟ್ ಕೇಸ್. ಸಿಬಿಐ ಹೆಸರಿನಲ್ಲಿ ಕರೆ ಮಾಡಿದ್ದ ಸೈಬರ್ ಖದೀಮರು, ವೃದ್ದೆಯನ್ನ ಮನಿ ಲ್ಯಾಂಡರಿಂಗ್ ಕೇಸ್ ನಲ್ಲಿ ಅರೆಸ್ಟ್ ಮಾಡೋದಾಗಿ ಬೆದರಿಸಿದ್ರು. ಇಷ್ಟಕ್ಕೆ ಸುಮ್ಮನಾಗದ ಸೈಬರ್ ಕಿರಾತಕರು ವೃದ್ದೆಯಿಂದ ದೋಚಿದ್ದು ಬರೋಬ್ಬರಿ 24 ಕೋಟಿ ಹಣವನ್ನ...!
ಸೈಬರ್ ವಂಚನೆ ಹೆಸರಿನಲ್ಲಿ ಜನರನ್ನು ಬೆದರಿಸಿ ಹಣ ದೋಚುತ್ತಿದ್ದ ಸೈಬರ್ ಖದೀಮರ ಮತ್ತೊಂದು ಭಯಾನಕ ಮುಖ ಬಯಲಾಗಿದೆ. ನಗರದ ವೃದ್ದೆಯೊಬ್ಬರನ್ನು ಮನಿ ಲ್ಯಾಂಡರಿಂಗ್ ಕೇಸ್ ಹೆಸರಿನಲ್ಲಿ ತಿಂಗಳಗಟ್ಟಲೆ ಡಿಜಿಟಲ್ ಅರೆಸ್ಟ್ ಮಾಡಿ ಬರೋಬ್ಬರಿ 24 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ. ಬೆಂಗಳೂರಿನ ಶಿವಾಜಿನಗರ ನಿವಾಸಿ ಲಕ್ಷ್ಮೀ ರಾಮಮೂರ್ತಿ ಈ ಹಿಂದೆ ದುಬೈನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ ನಿವೃತ್ತಿಯಾಗಿದ್ದರು.
ವೃದ್ದೆಗೆ ವಿಡಿಯೋ ಕರೆ
ಬೆಂಗಳೂರು ಮತ್ತು ಮುಂಬೈನಲ್ಲಿ ಇದ್ದ ಆಸ್ತಿಗಳನ್ನು ಮಾರಾಟ ಮಾಡಿ ಅಮೇರಿಕಾದಲ್ಲಿರುವ ಮಕ್ಕಳ ಜೊತೆ ನೆಲೆಸಲು ಪ್ಲಾನ್ ಮಾಡಿದ್ದರು. ಆದರೆ ಇದೇ ಹಣದ ಮೇಲೆ ಕಣ್ಣು ಹಾಕಿದ ಸೈಬರ್ ಖದೀಮರು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವೃದ್ದೆಗೆ ವಿಡಿಯೋ ಕರೆ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಮಾಡಿದ್ದೀರ. ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಅಕೌಂಟ್ ಮನಿ ಲ್ಯಾಂಡರಿಂಗ್ಗೆ ಬಳಕೆಯಾಗಿದೆ. ನೀವು ಯಾರ ಜೊತೆಯೂಮಾತನಾಡಬಾರದು. ಎಲ್ಲಾ ಹಣವನ್ನು ವೆರಿಫಿಕೇಶನ್ಗೆ ಕಳುಹಿಸಿ ಎಂದು ಆರ್.ಟಿ.ಜಿ.ಎಸ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಕಳೆದ ಜನವರಿಯಿಂದ ಮೇ ತಿಂಗಳವರೆಗೆ ನಿರಂತರವಾಗಿ ವೃದ್ದೆಯನ್ನು ಬೆದರಿಸಿದ್ದ ವಂಚಕರು. ಹಂತ ಹಂತವಾಗಿ ಬರೋಬ್ಬರಿ 24 ಕೋಟಿ ರೂಪಾಯಿ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. 22 ಬ್ಯಾಂಕ್ ಖಾತೆಗಳಿಗೆ ಹಣ ಟ್ರಾನ್ಸ್ಫರ್ ಆಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇಷ್ಟಾದರೂ ತೃಪ್ತಿಯಾಗದ ಖದೀಮರು ಮತ್ತಷ್ಟು ಹಣಕ್ಕಾಗಿ ಒತ್ತಡ ಹಾಕಿದ್ದಾರೆ.
1 ಕೆಜಿ 300 ಗ್ರಾಂ ಚಿನ್ನಾಭರಣವನ್ನು ಅಡಮಾನ
ಹೀಗಾಗಿ ಮನೆಯಲ್ಲಿದ್ದ ಸುಮಾರು 1 ಕೆಜಿ 300 ಗ್ರಾಂ ಚಿನ್ನಾಭರಣವನ್ನು ಅಡಮಾನ ಇಡಲು ಕಂಟೋನ್ಮೆಂಟ್ ಬ್ರಾಂಚ್ ಐಸಿಐಸಿಐ ಬ್ಯಾಂಕ್ಗೆ ವೃದ್ದೆ ಲಕ್ಷ್ಮಿ ಬಂದಿದ್ದರು. ಇಷ್ಟೊಂದು ಪ್ರಮಾಣದ ಚಿನ್ನಾಭರಣ ಗಮನಿಸಿದ ಬ್ಯಾಂಕ್ ಮ್ಯಾನೇಜರ್ಗೆ ಅನುಮಾನ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ಗೆ ದೌಡಾಯಿಸಿದ ಸಿಸಿಬಿ ಸೈಬರ್ ಕ್ರೈಂ ಪೊಲೀಸರು. ವೃದ್ದೆಯನ್ನು ವಿಚಾರಣೆ ನಡೆಸಿದ್ದಾರೆ.ಮೊದಲಿಗೆ ಏನನ್ನೂ ಹೇಳದ ವೃದ್ದೆ..ನಂತರ ತಾವು ಡಿಜಿಟಲ್ ಅರೆಸ್ಟ್ಗೆ ಒಳಗಾಗಿದ್ದಾಗಿ ಬಾಯ್ಬಿಟ್ಟಿದ್ದಾರೆ.
ತಕ್ಷಣ ಕೇಸ್ ದಾಖಲಿಸಿಕೊಂಡ ಸಿಸಿಬಿ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ಸಂಬಂಧ ದೆಹಲಿ, ಅಲಹಾಬಾದ್ ಮೂಲಕ ಗೌರವ್ ಕುಮಾರ್, ಓಂ ಪ್ರಕಾಶ್ ರಾಜ್ಪೂತ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಈವರೆಗೆ ಸುಮಾರು 3 ಕೋಟಿ ಹಣ ಇರುವ ಬ್ಯಾಂಕ್ ಅಕೌಂಟ್ಗಳನ್ನು ಫ್ರೀಜ್ ಮಾಡಿ ತನಿಖೆ ಮುಂದುವರೆಸಲಾಗಿದೆ.


