Asianet Suvarna News Asianet Suvarna News

ಕಾವೇರಿಯ ತವರೂರು ಕೊಡಗು, ಕುಶಾಲನಗರದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ!

ಕನ್ನಡ ನಾಡಿನ ಜೀವನದಿ ಕಾವೇರಿ ನದಿ ಹುಟ್ಟಿ ಹರಿಯುವ ಕೊಡಗು ಜಿಲ್ಲೆಯ ಜನರೇ ಕುಡಿಯುವ ನೀರಿಗಾಗಿ ಹಾಹಾಕಾರ ಅನುಭವಿಸುತ್ತಿದ್ದಾರೆ.

Kannada Nadina Jeevanadi Kaveri hometown Kodagu people faced drinking water Problem sat
Author
First Published Mar 3, 2024, 7:21 PM IST

ವರದಿ : ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.3):
ಕರ್ನಾಟದ ರಾಜಧಾನಿ ಬೆಂಗಳೂರು ಹಾಗೂ ತಮಿಳುನಾಡಿಗೆ ನೀರು ಪೂರೈಸುವ ಕನ್ನಡ ನಾಡಿನ ಜೀವನದಿ ಕಾವೇರಿಯ ತವರು ಕೊಡಗು ಜಿಲ್ಲೆಯಲ್ಲಿಯೇ ಜನರು ಕುಡಿಯುವ ನೀರಿಗಾಗಿ ಹಾಹಾಕಾರ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಭೋರ್ಗರೆದು ಧುಮ್ಮಿಕ್ಕಿ ಹರಿಯುವ ಕಾವೇರಿಯ ಕೊಳ್ಳದ ಜನರು ಮೂರು ದಿನಕ್ಕೊಮ್ಮೆ ನೀರು ಕುಡಿಯುವಂತಾಗಿದೆ.

ಹೌದು, ಈ ಗ್ರಾಮಕ್ಕೆ ಹೊಂದಿಕೊಂಡಂತೆ ಜೀವನದಿ ಕಾವೇರಿ ಹರಿಯುತ್ತಾಳೆ. ಗ್ರಾಮದ ಮತ್ತೊಂದು ಮಗ್ಗುಲಲ್ಲಿ ಹಾರಂಗಿ ಹರಿಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜಸ್ಟ್ 6 ಕಿಲೋಮೀಟರ್ ದೂರದ ವ್ಯಾಪ್ತಿಯಲ್ಲಿ 8.5 ಟಿಎಂಸಿ ಸಾಮರ್ಥ್ಯದ ಹಾರಂಗಿ ಜಲಾಶಯವೇ ಇದೆ. ಆದರೂ ಗ್ರಾಮಕ್ಕೆ ಕುಡಿಯುವ ನೀರಿನ ಹಾಹಾಕಾರ ಆರಂಭವಾಗಿದೆ. ಇದು ಕಾವೇರಿ ತವರು ಜಿಲ್ಲೆ ಕೊಡಗಿನ ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆಯ ಒಂದನೇ ವಿಭಾಗಕ್ಕೆ ಎದುರಾಗಿರುವ ಜಲಕ್ಷಾಮ. ಕೊಡಗು ಜಿಲ್ಲೆಯಲ್ಲಿ 6 ತಿಂಗಳ ಕಾಲ ಮಳೆ ಸುರಿಯುತ್ತದೆ ಎನ್ನುವುದು ಒಂದೆಡೆಯಾದರೆ ಹಲವು ನದಿಗಳು ಹುಟ್ಟಿ ಹರಿಯುತ್ತವೆ. ಆದರೂ ಈ ಬಾರಿ ಈಗಾಗಲೇ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. 

ಜೋಗಿಮಟ್ಟಿ ಅರಣ್ಯಧಾಮದಲ್ಲಿ ನೀರಿಗಾಗಿ ವನ್ಯಜೀವಿಗಳ ಹಾಹಾಕಾರ; ನೀರಿಗಾಗಿ ನಾಡಿಗೆ ಆಗಮನ!

ಇತ್ತೀಚೆಗಷ್ಟೇ ಕುಶಾಲನಗರ ಪುರಸಭೆಗೆ ಸೇರ್ಪಡೆಯಾಗಿರುವ ಮುಳ್ಳುಗೋಗೆ ಗ್ರಾಮ ಪಂಚಾಯಿತಿಯ ಒಂದನೇ ವಿಭಾಗದಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಎದುರಾಗಿದೆ. ಇದುವರೆಗೆ ಮುಳ್ಳುಸೋಗೆ ಗ್ರಾಮಕ್ಕೆ ನಿತ್ಯ ಕಾವೇರಿ ನದಿಯಿಂದ ನೀರು ಪೂರೈಕೆ ಮಾಡಲಾಗುತಿತ್ತು. ಆದರೀಗ ಕಾವೇರಿ ನದಿಯಲ್ಲಿ ನೀರಿನ ತೀವ್ರ ಕೊರತೆ ಆಗಿರುವುದರಿಂದ ಗ್ರಾಮಕ್ಕೆ ಬೇರೆಡೆಯಿಂದ ಪ್ರತಿ 3 ದಿನಗಳಿಗೆ ಒಮ್ಮೆ ನೀರು ಪೂರೈಸಲಾಗುತ್ತಿದೆ. ಇದರಿಂದ ನಿತ್ಯ ಬಳಕೆ ಮತ್ತು ಕುಡಿಯುವ ಉದ್ದೇಶಕ್ಕೆ ನೀರಿಲ್ಲದೆ ಜನರು ಕಂಗಾಲಾಗುವಂತೆ ಮಾಡಿದೆ. ಮೂರು ದಿನಗಳಿಗೆ ಒಮ್ಮೆ ನೀರು ಬಿಟ್ಟರೂ ಅದು ಯಾವುದೋ ಸಮಯಕ್ಕೆ ನೀರು ಬಿಡಲಾಗುತ್ತಿದೆ. ಹೀಗಾಗಿ ಕೂಲಿಯನ್ನು ನಂಬಿ ಬದುಕು ನಡೆಸುತ್ತಿರುವ ಜನರು ಕೂಲಿ ಕೆಲಸವನ್ನು ಬಿಟ್ಟು ನೀರಿಗಾಗಿ ಕಾದು ಕುಳಿತುಕೊಳ್ಳಬೇಕಾಗಿದೆ. ಹಾಗೆ ಕಾದು ಕುಳಿತುಕೊಂಡರೂ ನೀರು ಬರುವುದಿಲ್ಲ. ಬದಲಾಗಿ ರಾತ್ರಿ ಬಿಡುತ್ತಾರೆ. ಇದರಿಂದ ನೀರು ಸಂಗ್ರಹಿಸಿಕೊಳ್ಳಲು ತೀವ್ರ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಸ್ಥಳೀಯರಾದ ದೀಪಿಕಾ ಕುಮಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಮೂರು ದಿನಗಳಿಗೋ ನಾಲ್ಕು ದಿನಗಳಿಗೋ ನೀರು ಬಿಡುವುದರಿಂದ ಟ್ಯಾಂಕ್, ಡ್ರಮ್‌ಗಳಲ್ಲಿ ನೀರು ಸಂಗ್ರಹಿಸಿ ಇಟ್ಟುಕೊಳ್ಳಬೇಕಾಗಿದೆ. ಆದರೆ, ಆ ನೀರು ಎರಡು ದಿನಗಳು ಬಂದರೆ ಅದೇ ಹೆಚ್ಚು, ಮೂರನೇ ದಿನದಿಂದ ನಿತ್ಯ ಕರ್ಮಗಳಿಗೂ ನೀರು ಇರುವುದಿಲ್ಲ. ಈ ಪರಿಸ್ಥಿತಿ ನಮಗೆ ಏಕೆ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ. ಇನ್ನೊಂದು ವಾರ ಕಳೆದಲ್ಲಿ ಗ್ರಾಮಕ್ಕೆ ಸಂಪೂರ್ಣ ನೀರೇ ಸಿಗುವುದಿಲ್ಲ ಎನ್ನುವ ಪರಿಸ್ಥಿತಿ ಇದೆ. ಕುಡಿಯುವ ನೀರಿಗಾಗಿ ಶಾಶ್ವತ ಯೋಜನೆ ರೂಪಿಸಲು ಸಾಧ್ಯವಿದೆ. ಆದರೆ ಯಾವುದೇ ಜನ ಪ್ರತಿನಿಧಿ ಇದರ ಬಗ್ಗೆ ಇದುವರೆಗೆ ಗಮನಹರಿಸಿಲ್ಲ. 

ಮಂಡ್ಯ ಚುನಾವಣಾ ಪ್ರಚಾರಕ್ಕೆ ಯಶ್- ದರ್ಶನ್ ಬರದಿದ್ದರೂ ಬೇಜಾರ್ ಮಾಡ್ಕೊಳ್ಳಲ್ಲ: ಸಂಸದೆ ಸುಮಲತಾ ಅಂಬರೀಶ್

ಹಾರಂಗಿಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬಹುದಿತ್ತು. ಕಾವೇರಿ ನದಿಯಿಂದ ಕುಡಿಯುವ ನೀರು ಪೂರೈಸುವುದರಿಂದ ಬೇಸಿಗೆ ಶುರುವಾಯಿತ್ತೆಂದರೆ ಪ್ರತೀ ವರ್ಷವೂ ನೀರಿನ ಸಮಸ್ಯೆ ಎದುರಾಗುತಿತ್ತು. ಆದರೆ ಈ ಬಾರಿ ಬರಗಾಲದಿಂದಾಗಿ ಕಾವೇರಿ ನದಿ ಬಹುತೇಕ ಖಾಲಿಯಾಗಿದ್ದು, ಕಾವೇರಿ ನದಿಯಿಂದ ಗ್ರಾಮಕ್ಕೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸ್ಥಳೀಯರಾದ ಕೃಷ್ಣ ಅವರ ಅಸಮಾಧಾನ. ಮಾರ್ಚ್‌ ತಿಂಗಳ ಆರಂಭದಲ್ಲಿಯೇ ಕುಡಿಯುವ ನೀರಿಗೆ ಪರದಾಡಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳು ಬೋರ್ ಕೊರೆಸಿ ಗ್ರಾಮದ ಜನರಿಗೆ ಕುಡಿಯುವ ನೀರು ಪೂರೈಸಲಿ ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.

Follow Us:
Download App:
  • android
  • ios