ತಾಯಿಯೊಂದಿಗೆ ಸಿಂಡಿಕೇಟ್ ಬ್ಯಾಂಕ್ ಎದುರು ಧರಣಿ ಕುಳಿತ ಸ್ಯಾಂಡಲ್ ವುಡ್ ನಟ
ಬ್ಯಾಂಕ್ ನಿಂದ ಸಾಲವನ್ನೇ ಪಡೆದುಕೊಳ್ಳದ ನಟ ಈಗ ಸಾಲ ತೀರಿಸಬೇಕಾಗಿ ಬಂದಿದೆ. ಬ್ಯಾಂಕ್ ನಿಂದ ಆದ ಅನ್ಯಾಯ ಖಂಡಿಸಿ ತಾಯಿಯೊಂದಿಗೆ ಪ್ರತಿಭಟನೆ ಕುಳಿತಿದ್ದಾರೆ.
ಶಿವಮೊಗ್ಗ(ಮೇ. 10) ಶಿವಮೊಗ್ಗ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ರಿಂದ ವಂಚನೆ ಆಗಿದೆಯೆಂದು ಆರೋಪಿಸಿ ನೊಂದ ನಟರೊಬ್ಬರು ತಮ್ಮ ತಾಯಿಯೊಂದಿಗೆ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದ್ದಾರೆ. ಕಿರುತೆರೆಯ ಹಲವಾರು ಧಾರಾವಾಹಿ ಗಳಲ್ಲಿ ನಟಿಸಿ , ಬೆಳ್ಳಿ ತೆರೆಯಲ್ಲೂ ನಟಿಸುತ್ತಿರುವ ಶಿವಮೊಗ್ಗದ ಸಂತೋಷ್ ನೊಂದ ನಟ. ಇನ್ನಷ್ಟೇ ತೆರೆ ಕಾಣ ಬೇಕಿರುವ ಪಂಟ್ರು ಸಿನಿಮಾದಲ್ಲಿಯೂ ಸಂತೋಷ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
2016 ರಲ್ಲಿ ದಿನಸಿ ಅಂಗಡಿ ಅಭಿವೃದ್ದಿಗಾಗಿ ಶಿವಮೊಗ್ಗದ ತುಂಗಾ ನಗರದ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಅಡಮಾನ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ಸಂತೋಷ್ ಎರಡು ಮನೆಗಳನ್ನು ಅಡವಿಟ್ಟಿದ್ದರು. ನಟನ ಖಾತೆಗೆ ಸಾಲದ ಮೊತ್ತ 12 ಲಕ್ಷ ಹಾಕಬೇಕಾದ ಬ್ಯಾಂಕ್ ಮ್ಯಾನೇಜರ್ ಪ್ರತಿಭಾ, ನಟನ ಖಾತೆಗೆ ಹಣ ಬಿಡುಗಡೆ ಮಾಡಿ ನಂತರ ಬೇರೆ ನಕಲಿ ಖಾತೆಗಳಿಗೆ ವರ್ಗಾಯಿಸಿ ಹಣ ದುರುಪಯೋಗ ಮಾಡಿದ್ದಾರೆ ಎಂದು ನಟ ಆರೋಪಿಸಿದ್ದಾರೆ.
ರಾಜ್ಯದಲ್ಲೇ ಮೊದಲು... ಶಿವಮೊಗ್ಗ ಹೋಟೆಲ್ನಲ್ಲಿ ಲೇಡಿ ರೋಬೋ ವೇಯ್ಟರ್!
ನಂತರ ನಟ ಸಂತೋಷನಿಗೆ ಸಾಲದ ತಿಂಗಳ ಕಂತು ಕಟ್ಟುವಂತೆ ಒತ್ತಡ ಹೇರಲಾಗಿತ್ತು. ಖುದ್ದು ಮ್ಯಾನೇಜರ್ ಪ್ರತಿಭಾ ಈ ಹಣವನ್ನು ತಾವು ಅನಿವಾರ್ಯ ಪರಿಸ್ಥಿತಿ ಕಾರಣ ಬಳಸಿಕೊಂಡಿದ್ದು ಮರಳಿಸುವುದಾಗಿ ಸಂತೋಷ ಬಳಿ ಸಮಯ ಪಡೆದಿದಿದ್ದರು.. ಆದರೆ ಪ್ರತಿಭಾರವರು ಹಣವನ್ನು ಮರು ಪಾವತಿ ಮಾಡದೇ ಹೋದಾಗ ಬ್ಯಾಂಕ್ ಸಾಲ ಸಂತೋಷ ತೀರಿಸ ಬೇಕಾದ ಪರಿಸ್ಥಿತಿ ಬಂದೊದಗಿದೆ. ಇದರಿಂದ ಸಿಟ್ಟಿಗೆದ್ದ ಸಂತೋಷ ಬ್ಯಾಂಕ್ ನಿಂದ ಬಿಡಿಗಾಸು ಹಣ ಪಡೆಯದೆ ಸಾಲ ಹೇಗೆ ತೀರಿಸಲಿ ಎಂದು ಗ್ರಾಹಕರ ನ್ಯಾಯಾಲಯದ ಮೆಟ್ಟಲು ಸಹ ಏರಿದ್ದರು.
ನಟನಿಗೆ ಸಾಲದ ಮೊತ್ತ,ಬಡ್ಡಿ ಸೇರಿ ಇದೇ ಏಪ್ರಿಲ್ 18 ರ ಒಳಗೆ ಹಣ ಪಾವತಿಸುವಂತೆ ನ್ಯಾಯಾಲಯವೇ ಆದೇಶ ನೀಡಿದೆ. ನ್ಯಾಯಾಲದ ಆದೇಶಕ್ಕೆ ಕ್ಯಾರೆ ಎನ್ನದ ಸಿಂಡಿಕೇಟ್ ಆಡಳಿತ ವಿರುದ್ಧ ಮೇಲ್ಮನವಿ ಸಲ್ಲಿಸಿ ಹೈಕೋರ್ಟ್ ಮೆಟ್ಟಲೇರಲು ಸಿದ್ದತೆ ನಡೆಸಿದ್ದಾರೆ. ಇದರಿಂದನೊಂದ ಸಂತೋಷ್ ತಾಯಿ ದಾಕ್ಷಾಣಮ್ಮ ನವರ ಜೊತೆಗೆ ಶಿವಮೊಗ್ಗದ ಗೋಪಾಲ ಗೌಡ ಬಡಾವಣೆಯ ಸಿಂಡಿಕೇಟ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದ್ದಾರೆ.
ಪಂಟ್ರು, ಮಲ್ಲಿಕಾರ್ಜುನ ಬಂಡೆ ಸಿನಿಮಾದಲ್ಲಿ ಸಂತೋಷ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯ ಧಾರವಾಹಿಗಳಾದ ಕೃಷ್ಣ ರುಕ್ಮಣಿ, ಆಕಾಶದೀಪ, ಅಮ್ಮ ನಿನಗಾಗಿ, ಚುಕ್ಕಿ, ಭಾಗ್ಯವಂತರು,ಜೋಕಾಲಿ ಯಲ್ಲಿ ನಟಿಸಿದ್ದಾರೆ. ತಮ್ಮ ಸಿನಿಮಾ ಬದುಕನ್ನು ರೂಪಿಸಿ ಕೊಳ್ಳಲು ಕಸರತ್ತು ಮಾಡುತ್ತಿರುವಾಗಲೇ ಬ್ಯಾಂಕ್ ವ್ಯವಹಾರದಲ್ಲಿ ಮೋಸ ಹೋಗಿ ಹೋರಾಟ ನಡೆಸ ಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಸಂತೋಷ್ ನೊಂದು ನುಡಿಯುತ್ತಾರೆ.