Asianet Suvarna News Asianet Suvarna News

Kodagu: ಕೃಷ್ಣಾಷ್ಟಮಿಯಲ್ಲಿ ಕೃಷ್ಣ ರಾಧೆಯರಾಗಿ ಕಣ್ಮನ ಸೆಳೆದ ಪುಟಾಣಿಗಳು!

ಕೃಷ್ಣನ ತುಂಟಾಟ ಒಂದಾ ಎರಡಾ, ಬೆಣ್ಣೆ ಕದಿಯೋದು, ಮೊಸರು ಕುಡಿಕೆ ಒಡೆಯುವುದು ಹೀಗೆ ಹಲವಾರು. ಕೃಷ್ಣನ ಇಂತಹ ತುಂಟಾಟಗಳನ್ನು ನೋಡುವುದು ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಅಷ್ಟಕ್ಕೂ ಇದಕ್ಕೆಲ್ಲಾ ಸಾಕ್ಷಿಯಾಗಿದ್ದು ಮಡಿಕೇರಿ ನಗರದ ಗೌಳಿ ಬೀದಿಯಲ್ಲಿರುವ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ. 
 

kanchi kamakshi temple celebrates krishna janmashtami with little krishna in kodagu gvd
Author
First Published Sep 11, 2023, 9:03 PM IST

ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಸೆ.11): ಕೃಷ್ಣನ ತುಂಟಾಟ ಒಂದಾ ಎರಡಾ, ಬೆಣ್ಣೆ ಕದಿಯೋದು, ಮೊಸರು ಕುಡಿಕೆ ಒಡೆಯುವುದು ಹೀಗೆ ಹಲವಾರು. ಕೃಷ್ಣನ ಇಂತಹ ತುಂಟಾಟಗಳನ್ನು ನೋಡುವುದು ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಅಷ್ಟಕ್ಕೂ ಇದಕ್ಕೆಲ್ಲಾ ಸಾಕ್ಷಿಯಾಗಿದ್ದು ಮಡಿಕೇರಿ ನಗರದ ಗೌಳಿ ಬೀದಿಯಲ್ಲಿರುವ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ. ದೇವಾಲಯದಲ್ಲಿ ವಿಶೇಷವಾಗಿ ಕೃಷ್ಣಾಷ್ಟಮಿಯು ಆರನೇ ದಿನ ನಡೆಯಿತು. ಕೃಷ್ಣಾಷ್ಟಮಿ ಅಂಗವಾಗಿ ಕಂಚಿ ಕಾಮಾಕ್ಷಿ ದೇವರನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಪುಟಾಣಿಗಳಿಗೆ ಕೃಷ್ಣ ರಾಧೆಯರ ಛದ್ಮವೇಷ ಸ್ಪರ್ಧೆ ನಡೆಯಿತು. 

ಹಾಲುಗೆನ್ನೆಯ ಕಂದಮ್ಮಗಳಿಗೆ ತಾಯಂದಿರು ಕೃಷ್ಣನ ವೇಷ ಧರಿಸಿ ಸಂಭ್ರಮಿಸಿದರು. ಕೆಲವು ಪುಟಾಣಿಗಳು ಕೈಯಲ್ಲಿ ಹಿಡಿದ ಕೊಳಲನ್ನು ಬಾಯಿಗೆ ಹಾಕುತ್ತಿದ್ದ ಕ್ಷಣಗಳೇ ಎಲ್ಲರಿಗೆ ಖುಷಿ ನೀಡುತ್ತಿದ್ದದ್ದು ಸುಳ್ಳಲ್ಲ. ಇದು ಪುಟಾಣಿಗಳು ಕೃಷ್ಣ ಜನ್ಮಾಷ್ಟಮಿಯಲ್ಲಿ ಮಿಂಚಿದ ಪರಿಯಾದರೆ ದೊಡ್ಡ ಮಕ್ಕಳದು, ಯುವಕರದು ಮತ್ತೊಂದು ರೀತಿಯ ರೋಚಕ ಕ್ಷಣಗಳು. ಅನಾದಿ ಕಾಲದಿಂದಲೂ ಮೊಸರು ಕುಡಿಕೆ ಒಡೆಯುವ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿರುವ ಮಡಿಕೇರಿ ನಗರದ ಕಂಚಿ ಕಾಮಾಕ್ಷಿ ದೇವಾಲಯ ಸಮಿತಿ ಕೃಷ್ಣಾಷ್ಟಮಿಯ  6ನೇ ದಿನವಾದ  ಗೌಳಿ ಬೀದಿಯಲ್ಲಿ ಆಯೋಜಿಸಿತ್ತು. 

ಕಲ್ಗುಡಿ ಬ್ರಾಂಡ್ 'ಗನ್' ಕೊಡಗಿನ ಮಾರುಕಟ್ಟೆಗೆ ಎಂಟ್ರಿ: ಈ ಗನ್‌ನ ಸ್ಪೆಷಾಲಿಟಿ ಏನು?

ಬೆಳಗ್ಗೆ ಪೂಜಾ ಕೈಂಕರ್ಯ ನೆರವೇರಿಸಿದ ದೇವಾಲಯ ಸಮಿತಿ ಸಂಜೆ ಮೊಸರು ಕುಡಿಕೆ ಒಡೆಯುವ ಕಾರ್ಯಕಮ ಆಯೋಜಿಸಲಾಗಿತ್ತು. ಮೊದಲಿಗೆ ಕೃಷ್ಣಾಷ್ಟಮಿಯಂದು ತೊಟ್ಟಿಲೇರಿಸಿದ್ದ ಕೃಷ್ಣನನ್ನು ಸುಮಾರು 50 ಅಡಿ ಎತ್ತರದ ಕಮಾನಿನಲ್ಲಿ ತೂಗಿಸಿ ನೀರೆರಚಲಾಯಿತು. ನಂತರ ಹುರಿಗೆ ಕಟ್ಟಿದ ಮೊಸರು, ಬೆಣ್ಣೆ, ತುಪ್ಪ ತುಂಬಿದ ಮಡಿಕೆಯನ್ನು ಒಡೆಯುವ ಸಾಂಪ್ರದಾಯಿಕ ಸ್ಪರ್ಧೆ  ಶುರುವಾಯಿತು. ದೇವಾಲಯದ ಸಮೀಪದಲ್ಲೇ ವಾಸವಿರುವ ಯುವಕರಿಬ್ಬರು ಮೊಸರು ಕುಡಿಕೆ ಒಡೆಯುವುದಕ್ಕಾಗಿ ಒಂದು ವಾರದಿಂದಲೇ ತಯಾರಿ ನಡೆಸಿದ್ದರು. ಕೃಷ್ಣಾಷ್ಟಮಿ ಅಂಗವಾಗಿ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೊಸರು ಕುಡಿಕೆ ಒಡೆಯಲು ಅಣಿಯಾದರು. 

ಅವರ ದೇಹಕ್ಕೆ ಎಣ್ಣೆ, ಅರಿಸಿಣ ಮೆತ್ತಲಾಗಿತ್ತು. ಸುಮಾರು 50 ಅಡಿ ಎತ್ತರದ ಕಮಾನಿನಲ್ಲಿ ನೇತು ಹಾಕಿದ್ದ ಮೊಸರು ಕುಡಿಕೆಯನ್ನು ಒಡೆಯಲು ಯುವಕರು ಹರಸಾಹಸಪಟ್ಟರು. ಮೊಸರು ಕುಡಿಕೆ ಒಡೆಯಲು ಯುವಕರು ಪ್ರಯತ್ನಿಸುತ್ತಿದ್ದರೆ, ಅವರಿಗೆ ಸುತ್ತಲೂ ನೆರೆದಿದ್ದ ಬಾಲಕರು ಮತ್ತು ಇತರೆ ಯುವಕರು ನಿರಂತರವಾಗಿ ರಭಸದಿಂದ ನೀರೆರಚಿ ತಡೆಯುಂಟು ಮಾಡುತ್ತಿದ್ದರು. ಸನಿಹದಲ್ಲಿಯೇ ಇದ್ದ ಬಾವಿಯಿಂದ ನೀರು ಸೇದಿ ನೀರು ಪೂರೈಸುತ್ತಿದ್ದ ಇತರ ಯುವಕರು, ಮೊಸರು ಕುಡಿಕೆ ಒಡೆಯಲು ಪ್ರಯತ್ನಿಸುತ್ತಿದ್ದ ಯುವಕರ ಪ್ರಯತ್ನವನ್ನು ಸುಮಾರು ಒಂದು ಗಂಟೆ ಕಾಲ ವಿಫಲಗೊಳಿಸಿದರು. ಒಂದೆಡೆ ಯುವಕರು ಎರಚುವ ನೀರಿನ ರಭಸದೊಂದಿಗೆ ಮಳೆಯನ್ನು ಸಹಿಸಿಕೊಂಡ ಯುವಕರು ಕೊನೆಗೂ ಮೊಸರು ಮತ್ತು ತುಪ್ಪದ ಮಡಿಕೆಗಳನ್ನು ಒಡೆಯುವಲ್ಲಿ ಸಫಲರಾದರು. 

ಕಾಂಗ್ರೆಸ್ ಶಾಸಕರೇ ಬಿಜೆಪಿಗೆ ಬರಲಿದ್ದಾರೆ: ಮಾಜಿ ಶಾಸಕ ಅಪ್ಪಚ್ಚು ರಂಜನ್ ಬಾಂಬ್!

ಹೀಗೆ ಮಾಡುವುದರಿಂದ ಕೃಷ್ಣನಿಗೆ ಖುಷಿಯಾಗುತ್ತದೆ ಎಂಬ ನಂಬಿಕೆ ಇವರಲ್ಲಿದೆ. ಯದುವಂಶಕ್ಕೆ ಸೇರಿದ ಕುಟುಂಬದವರು ಈ ಸಂಪ್ರದಾಯವನ್ನು ಆಯೋಜಿಸಿದ್ದು ವಿಶೇಷವಾಗಿತ್ತು. ಯುವಕರ ಈ ಮೊಸರು ಕುಡಿಕೆ ಒಡೆಯುವ ರೋಚಕ ಕ್ಷಣಗಳನ್ನು ಸಾಕಷ್ಟು ಜನರು ಕಣ್ತುಂಬಿಕೊಂಡರು. ದಶಕಗಳಿಂದ ಇಲ್ಲಿ ಮಡಿಕೆ ಒಡೆಯುವ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹೀಗೆ ಕೃಷ್ಣ ರಾಧೆಯರ ಛದ್ಮವೇಷದಲ್ಲಿ ಭಾಗವಹಿಸಿ ಎಲ್ಲರ ಕಣ್ಮನ ತಣಿಸಿದ ಪುಟಾಣಿಗಳಿಗೆ ದೇವಾಲಯ ಸಮಿತಿಯಿಂದ ಬಹುಮಾನ ನೀಡಲಾಯಿತು. ಒಟ್ಟಿನಲ್ಲಿ ಕೃಷ್ಣಾಷ್ಟಮಿಯ ಅಂಗವಾಗಿ ಸಾಂಪ್ರದಾಯಿಕ ಸ್ಪರ್ಧೆಗಳಲ್ಲಿ ಪುಟಾಣಿಗಳು, ಯುವಕರು ಮತ್ತು ವಯಸ್ಕರು ಭಾಗವಹಿಸಿ ಕೃಷ್ಣನ ಕೃಪೆಗೆ ಪಾತ್ರರಾಗಿದ್ದು ಮಾತ್ರ ವಿಶೇಷವಾಗಿತ್ತು.

Follow Us:
Download App:
  • android
  • ios