ಸಿಎಂ ವಿರುದ್ಧ ಜೋಗದ ಸಿಬ್ಬಂದಿಯೋರ್ವರು ಹಗುರವಾಗಿ ಮಾತನಾಡಿದ್ದು, ಈ ವಿಚಾರವೀಗ ವೈರಲ್ ಆಗಿದೆ. 


ಶಿವಮೊಗ್ಗ (ನ.08) : ಜೋಗ ವೀಕ್ಷಣೆಗೆ ಗೇಟ್‌ನಿಂದ ಹೊರ ಭಾಗದಲ್ಲಿ ನಿಲ್ಲಿಸಿರುವ ವಾಹನಗಳಿಗೆ ಕೂಡ ಅಲ್ಲಿನ ಸಿಬ್ಬಂದಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪದ ಜೊತೆಗೆ ‘ಸಿಎಂ ಯಡಿಯೂರಪ್ಪ ಅವರೇ ಲೂಟಿ ಮಾಡ್ತಿದ್ದಾರೆ, ನಮ್ಮನ್ನೇನು ಕೇಳ್ತೀರಿ ಎಂದು ಸಿಬ್ಬಂದಿ ಲಘುವಾಗಿ ಮಾತನಾಡುತ್ತ, ಪ್ರವಾಸಿಗರಿಗೆ ಧಮಕಿ ಹಾಕಿದ ವೀಡಿಯೋವೊಂದು ಸಖತ್‌ ವೈರಲ್‌ ಆಗಿದೆ.

Add Asianetnews Kannada as a Preferred SourcegooglePreferred

ಶುಕ್ರವಾರ ಬೆಂಗಳೂರಿನಿಂದ ಬಂದ ಪ್ರವಾಸಿ ಕಾರಿನ ಚಾಲಕರೊಬ್ಬರು ತಮ್ಮ ಕಾರು ಗೇಟ್‌ನಿಂದ ಹೊರಭಾಗದಲ್ಲಿ ನಿಲ್ಲಿಸಿದ್ದರೂ, ತಮ್ಮಿಂದ ಶುಲ್ಕ ವಸೂಲಿ ಮಾಡುತ್ತಿರುವ ಕುರಿತು ಪ್ರಶ್ನಿಸಿದ್ದಾರೆ. 

ಜೋಗ ಜಲಪಾತದ ಯೋಜನೆಯೊಂದನ್ನು ರದ್ದು ಮಾಡಿದ ಸರ್ಕಾರ ..

ಇದಕ್ಕೆ ಸೊಪ್ಪು ಹಾಕದ ಸಿಬ್ಬಂದಿ ನಮ್ಮನ್ನೇನು ಕೇಳ್ತೀರಿ, ಮೇಲಿನವರನ್ನು ಕೇಳಿ ಎಂದು ಜೋರು ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಪ್ರವಾಸಿಗರನ್ನು ಅಲ್ಲಿನ ಸಿಬ್ಬಂದಿ ದಬಾಯಿಸಿದ್ದಾರೆ. ಎಲ್ಲಿ ನಿಲ್ಲಿಸಿದರೂ ನೀವು ಹಣ ಕೊಡಲೇಬೇಕು. ಇಷ್ಟಇದ್ದರೆ ಬನ್ನಿ, ಇಲ್ಲಾಂದ್ರೆ ಹೋಗ್ರಿ ಎಂದು ದಬಾಯಿಸಿದ್ದಾರೆ.

ಕೊನೆಗೆ ಒಬ್ಬ ಸಿಬ್ಬಂದಿ ‘ಯಡಿಯೂರಪ್ಪ ಅವರೇ ಲೂಟಿ ಹೊಡೆಯುತ್ತಿದ್ದಾರೆ, ಇಲ್ಲಿ ನಮ್ಮನ್ನೇನು ಕೇಳ್ತೀರಿ’ ಎಂದಿದ್ದಾರೆ. ಇದನ್ನೆಲ್ಲಾ ಆ ಪ್ರವಾಸಿಗರು ಇದನ್ನು ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್‌ ಆಗಿದೆ.