*  ಬಿಜೆಪಿಗೆ ತಕ್ಕಪಾಠ ಕಲಿಸಲು ಜನ ಸಿದ್ಧರಾಗಿರುವಾಗಲೇ ಈ ತೀರ್ಥ ಯಾತ್ರೆ ಹೊರಟಿದೆ*  ಜನಾಶೀರ್ವಾದ ಯಾತ್ರೆಯುದ್ದಕ್ಕೂ ಕೋವಿಡ್‌ ನಿಯಮ ಉಲ್ಲಂಘಣೆ*  ಕಲ್ಯಾಣಕ್ಕೆ ದೋಖಾ ಮಾಡಿದ ಡಬಲ್‌ ಇಂಜಿನ್‌ ಸರ್ಕಾರ 

ಕಲಬುರಗಿ(ಆ.19): ಮೋದಿ ಸಂಪುಟದ ಸಚಿವರ ಜನಾಶೀರ್ವಾದ ಯಾತ್ರೆಯನ್ನು ತೀರ್ಥಯಾತ್ರೆ ಎಂದು ಜೇವರ್ಗಿ ಶಾಸಕ ಡಾ.ಅಜಯ್‌ ಸಿಂಗ್‌ ಟೀಕಿಸಿದ್ದಾರೆ.

Add Asianetnews Kannada as a Preferred SourcegooglePreferred

ಜನ ಇವರನ್ನೆಲ್ಲ ಆಯ್ಕೆ ಮಾಡಿ ಕಳುಹಿಸಿ 2 ವರ್ಷಗಳೇ ಗತಿಸಿವೆ. ಈಗೇನು ಜನಾಶೀರ್ವಾದ ಪಡೆಯೋದಿದೆ? ಜನರ ಆಶೀರ್ವಾದದಿಂದ ಆಯ್ಕೆಯಾಗಿ ಹೋದವರು ಇವರೆಲ್ಲರೂ 2 ವರ್ಷದಲ್ಲಿ ಅದೇನು ಜನಪರ ಪ್ರಗತಿಪರ ಕೆಲಸಗಳನ್ನು ಮಾಡಿದ್ದೇವೆ ಎಂಬುದರ ಮಾಹಿತಿ ನೀಡುವ ಕಾಲವಿದು. ಈ ಕಾಲದಲ್ಲಿ ಆಶಿರ್ವಾದ ಮಾಡಿರೆಂದು ಬಂದರೆ ಇವರಿಗೆ ಏನನ್ನಬೇಕು? ಜನರ ಆಶೀರ್ವಾದ ತಮಗೆ ತೋಚಿದಂತೆ ಬಳಸುತ್ತಿರುವ ಬಿಜೆಪಿಗರಿಗೆ ರಾಜ್ಯದ ಜನತೆ ಕ್ಷಮಿಸೋದಿಲ್ಲವೆಂದು ಹೇಳಿದ್ದಾರೆ.

'ಮೋದಿ ಸರ್ಕಾರದಿಂದ ಮಲತಾಯಿ ಧೋರಣೆ, ಕರ್ನಾಟಕಕ್ಕೆ ಭಾರಿ ಅನ್ಯಾಯ'

ಜನಾಶೀರ್ವಾದ ಯಾತ್ರೆಯುದ್ದಕ್ಕೂ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಗಡಿ ಜಿಲ್ಲೆಗಳಾದ ಬೀದರ್‌, ಕಲಬುರಗಿಯಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದರೂ ರಾತ್ರಿ 10.30ರವರೆಗೂ ಸಭೆ ಮಾಡಿದ್ದಾರೆ. ಕೇಂದ್ರ ಸಚಿವರು, ಶಾಸಕರು ಇವರೆಲ್ಲರ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸಬೇಕು. ಕಲಬುರಗಿ, ಬೀದರ್‌ ಸೇರಿದಂತೆ 5 ಸ್ಥಾನಗಳಲ್ಲಿ ಬಿಜೆಪಿ ಗೆದ್ದರೂ ಇಲ್ಲಿಗೆ ಬರಬೇಕಾಗಿದ್ದಂತಹ ರೇಲ್ವೆ ವಿಭಾಗೀಯ ಕಚೇರಿ, ಸಿಪೆಟ್‌ ಕಚೇರಿ ಸೇರಿದಂತೆ 8ಕ್ಕೂ ಹೆಚ್ಚು ಪ್ರಗತಿಪರ ಯೋಜನೆಗಳು ತರಲಾಗಿಲ್ಲ. ಇಲ್ಲಿ ಮಂಜೂರಾದ ಯೋಜನೆಗಳು ಕೈಬಿಟ್ಟು ಹೋದರೂ ಇವರಿಗೆ ಪರಿವೇ ಇಲ್ಲದವರಂತೆ ಇದ್ದಾರೆ. ಇದೀಗ ಮತ್ತೆ ಜನಾಶೀರ್ವಾದ ಎಂದು ಬರುತ್ತಿದ್ದಾರೆ. ಇದು ಜನಾಶೀರ್ವಾದವಲ್ಲ, ಕೊನೆ ಮುಖ ತೋರಿಸಿ ತೀರ್ಥಯಾತ್ರೆಗೆ ಹೋಗುತ್ತಿದ್ದೇವೆ ಎಂದು ಹೇಳುವಂತಿದೆ ಲೇವಡಿ ಮಾಡಿದ್ದಾರೆ.

ಕೇಂದ್ರ ಸಚಿವರಾಗಿರುವ ಭಗವಂತ ಖೂಬಾ ಯಾತ್ರೆಯುದ್ದಕ್ಕೂ ಗುಡಿ ಗುಂಡಾರ ಸುತ್ತುತ್ತಿದ್ದಾರೆ. ಕಲ್ಯಾಣದ ಬಿಜೆಪಿ ಶಾಸಕರು ಇವರಿಗೆ ಸಾಥ್‌ ನೀಡುತ್ತಿದ್ದಾರೆ. ದಾರಿಯಲ್ಲೆಲ್ಲಾ ಮಠಗಳಿಗೆ - ಮಂದಿರಗಳಿಗೆ ಹೋಗಿ ಬರುತ್ತಿದ್ದಾರೆ. ಹೀಗಾಗಿ ಇದು ಅಕ್ಷರಶಃ ಬಿಜೆಪಿಯವರ ತೀರ್ಥಯಾತ್ರೆಯಂತೆಯೇ ಕಂಗೊಳಿಸುತ್ತಿದೆ. ಡಬಲ್‌ ಇಂಜಿನ್‌ ಸರ್ಕಾರ ಈಗಲೇ ಕಲ್ಯಾಣಕ್ಕೆ ದೋಖಾ ಮಾಡಿದೆ. ಬಿಜೆಪಿಗೆ ತಕ್ಕಪಾಠ ಕಲಿಸಲು ಜನ ಸಿದ್ಧರಾಗಿರುವಾಗಲೇ ಈ ತೀರ್ಥ ಯಾತ್ರೆ ಹೊರಟಿದೆ ಎಂದು ಡಾ.ಅಜಯ್‌ ಸಿಂಗ್‌ ಕುಟುಕಿದ್ದಾರೆ.