ತಾಲೂಕಿನ ಬುಡಕುಂಟಿ ಗ್ರಾಮದ 36 ಕುಟುಂಬಗಳಿಗೆ ಜೆಸ್ಕಾಂ ಅಧಿಕಾರಿಗಳು ಕ್ರಿಮಿನಲ್ ಪ್ರಕರಣ ಮತ್ತು ದಂಡ ವಿಧಿಸಿ ನೋಟಿಸ್ ಜಾರಿ ಮಾಡಿರುವುದು ಸ್ಥಳೀಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಐದು ತಿಂಗಳುಗಳಲ್ಲಿnವಿದ್ಯುತ್ ಬಿಲ್ ಬಾಕಿ ಇರುವ ಕುಟುಂಬಗಳ ಬಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳು ವಿದ್ಯುತ್ ದುರ್ಬಳಕೆ ಕಳ್ಳತನ ಪ್ರಕರಣದಡಿ ನೋಟಿಸ್ ನೀಡಿರುವುದನ್ನು ಗ್ರಾಮಸ್ಥರು ತೀವ್ರವಾಗಿ ಖಂಡಿಸಿದ್ದಾರೆ.

Add Asianetnews Kannada as a Preferred SourcegooglePreferred

5-10 ಸಾವಿರ ದಂಡ:
ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯಡಿ ವಿದ್ಯುತ್ ಪಡೆದುಕೊಂಡ ಫಲಾನುಭವಿಗಳಿಗ ₹ 5 ರಿಂದ 10 ಸಾವಿರ ದಂಡ ವಿಧಿಸಲಾಗಿದೆ. ಬಡವರಿಗೆ ನೀಡುವ ಭಾಗ್ಯಜ್ಯೋತಿ ಯೋಜನೆ ಬಿಲ್ ಬಾಕಿ ಇರುವ ಕುಟುಂಬದ ಸದಸ್ಯರ
ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳುವ ಕುರಿತು ನೋಟಿಸ್ ನೀಡಲಾಗಿದೆ. ದಂಡ ಕಟ್ಟಿ ರಾಜಿ ಸಂಧಾನ ಮಾಡಿಕೊಳ್ಳುವುದು ಮತ್ತು ಬಾಕಿ ಇರುವ ಬಿಲ್ ಪಾವತಿಸಲು ನೋಟಿಸ್ ನೀಡಿದ್ದಾರೆ.

ಅನಧಿಕೃತವಾಗಿ ವಿದ್ಯುತ್ ಬಳಕೆ ಮಾಡಿಕೊಂಡ ನಂತರ ವಿಧಿಸಿದ ದಂಡ ಪಾವತಿಸಲು ವಿಫಲವಾಗಿರುವ ಗ್ರಾಹಕರ ವಿರುದ್ಧ ಮೊಕದ್ದಮೆ ಹೂಡಲು ಜೆಸ್ಕಾಂ ಮುಂದಾಗಿದ್ದು,ಬಿಲ್ ಕಟ್ಟದವರು ಬಂಧನದ ಭೀತಿ ಎದುರಿಸಲಾರಂಭಿಸಿದ್ದಾರೆ. ದಿನದಿಂದ ದಿನಕ್ಕೆ ವಿದ್ಯುತ್ ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸೋರಿಕೆಗೆ ಕಾರಣವಾಗಿರುವುದು ಇಂಧನ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಒಂದು ಕಡೆ ವಿದ್ಯುತ್ ಬಿಲ್ ಬಾಕಿ, ಇನ್ನೊಂದಡೆ ಪರವಾನಿಗೆ ಇಲ್ಲದೆ ವಿದ್ಯುತ್ ಬಳಕೆ ಪ್ರಕರಣಗಳು ಇಂಧನ ಇಲಾಖೆಗೆ ನಷ್ಟಕ್ಕೆ ಕಾರಣವಾಗಿರುವದರಿಂದ ಜೆಸ್ಕಾಂ ಜಾಗೃತ ದಳವು ವಿದ್ಯುತ್ ಕಳ್ಳತನ ತಡೆ ಹಿಡಿಯಲು ದಿಟ್ಟ ಹೆಜ್ಜೆ ಆರಂಭಿಸಿದೆ.

ದಂಡ ಕಟ್ಟಿ ತಪ್ಪಿಸಿಕೊಳ್ಳಿ: ಜೆಸ್ಕಾಂ ಜಾಗೃತದಳವು ಪರವಾನಿಗೆ ಇಲ್ಲದೆ ವಿದ್ಯುತ್ ಬಳಕೆ ಮಾಡುತ್ತಿರುವುದನ್ನು ಗುರುತಿಸಿ ಸಂಪರ್ಕ ಕಡಿತ ಮಾಡಿ ದಂಡ ವಿಧಿಸಿದರೂ ಕೆಲವೊಬ್ಬರು ದಂಡ ಕಟ್ಟಲು ಮುಂದಾಗದೇ ಇರುವುದು ತಲೆ ನೋವಾಗಿ ಪರಿಣಮಿಸಿದೆ. ದಂಡ ಪಾವತಿಸಲು ಅಂತಿಮ ನೋಟಿಸ್ ಜಾರಿ ಮಾಡಿದೆ. ಬಿಬಿಸಿ ಮತ್ತು ಕಾಂಪೌಂಡಿಗ್ ಶುಲ್ಕವನ್ನು ಪಾವತಿಸಿ ಕ್ರಿಮಿನಲ್ ಮೊಕದ್ದಮೆ ತಪ್ಪಿಸಿಕೊಳ್ಳಲು ಇಚ್ಚಿಸಿದ್ದಲ್ಲಿ ಉಪವಿಭಾಗ ಕಚೇರಿ ಸಂರ್ಪಕಿಸಿ ಹಣ ಪಾವತಿ ಮಾಡಬೇಕು. ಇಲ್ಲವಾದರೆ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಜೆಸ್ಕಾಂ ಗುಪ್ತಚರ ಇಲಾಖೆ ನೋಟಿಸ್‌ನಲ್ಲಿ ತಿಳಿಸಿದೆ.