ತಾಲೂಕಿನಲ್ಲಿ ಹೊರಗಿನವರು ಬಂದು ರಾಜಕಾರಣ ಮಾಡಬಾರದು ಎಂದು ಯಾವ ನಿಯಮ ಇದೆ  ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಮತ್ತು ಮೋಸದ ರಾಜಕಾರಣ ಸಾಮಾನ್ಯವಾಗಿದೆ ಎಂದ ಸಾರಾ

ಕೆ.ಆರ್‌. ನಗರ (ಸೆ.02): ತಾಲೂಕಿನಲ್ಲಿ ಹೊರಗಿನವರು ಬಂದು ರಾಜಕಾರಣ ಮಾಡಬಾರದು ಎಂದು ಯಾವ ನಿಯಮ ಇದೆ ಎಂದು ಶಾಸಕ ಸಾ.ರಾ. ಮಹೇಶ್‌ (Sa Ra Mahesh) ಪ್ರಶ್ನೆ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಮೂರು ದಿನಗಳ ಹಿಂದೆ ಕೆ.ಆರ್‌. ನಗರ ಎಪಿಎಂಸಿ (APMC) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರ (GT Devegowda) ಪುತ್ರ ಎಂಡಿಸಿಸಿ (MDCC) ಬ್ಯಾಂಕ್‌ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡರ (GT Harish gowda) ಛಾಯೆ ಕಾಣುತ್ತಿದ್ದು, ಈ ಮೂಲಕ ಅವರು ತಾಲೂಕಿನಲ್ಲಿ ರಾಜಕಾರಣ ಮಾಡಲು ವೇದಿಕೆ ಸಿದ್ದಪಡಿಸಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. 

ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಮತ್ತು ಮೋಸದ ರಾಜಕಾರಣ ಸಾಮಾನ್ಯವಾಗಿದ್ದು, ಇಂತಹ ಸಂಗತಿಗಳನ್ನು ನಾನು ಎಂದೂ ಗಂಭೀರವಾಗಿ ಪರಿಗಣಿಸಿಲ್ಲ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷದ್ರೋಹಿಗಳಿಗೆ ಮತ್ತು ವಿಶ್ವಾಸಘಾತುಕರಿಗೆ ಸಕಾಲದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಶಿಷ್ಯೆಗಾಗಿ ಸರ್ವೆಗೆ ಮುಂದಾದ IAS ಅಧಿಕಾರಿ : ಸಾ.ರಾ ರಾಜಕೀಯ ನಿವೃತ್ತಿ ಸವಾಲ್

ಪಕ್ಷದ ಬೆಂಬಲದಿಂದ ಗೆದ್ದು ಆಮಿಷಕ್ಕೆ ಒಳಗಾಗಿ ಪಕ್ಷಾಂತರ ಮಾಡಿರುವವರು ಭವಿಷ್ಯದಲ್ಲಿ ತಕ್ಕ ಪಾಠ ಕಲಿಯಲಿದ್ದು, ಅವರಿಗೆ ಕಾಲವೇ ಉತ್ತರ ನೀಡಲಿದೆ. ದ್ರೋಹಿಗಳು ಮತ್ತು ಘಾತುಕರ ಸಂಕಷ್ಟವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಜೆಡಿಎಸ್‌ಗೆ (JDS) ನೀಡಿದ್ದಾನೆ ಎಂದು ಅವರು ಮಾರ್ಮಿಕವಾಗಿ ನುಡಿದರು.

ಪಕ್ಷ ಬಿಡಲು ಸವಾಲು ಹಾಕಿದ್ದರು

ಎರಡು ದಿನಗಳ ಹಿಂದೆ ನಡೆದ ತಾಲೂಕು ಎಪಿಎಂಸಿ (APMC) ಅಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್‌ಗೆ (JDS) ದ್ರೋಹ ಮಾಡಿ ಬೇರೆ ಪಕ್ಷದವರಿಗೆ ಮತ ಹಾಕಿದ ನಿರ್ದೇಶಕರಿಗೆ ಮುಂದಿನ ದಿನಗಳಲ್ಲಿ ಮತದಾರರು ತಕ್ಕಪಾಠ ಕಳಿಸಲಿದ್ದಾರೆ ಎಂದು ಶಾಸಕ ಸಾ.ರಾ ಮಹೇಶ್‌ (Sa Ra Mahesh) ಎಚ್ಚರಿಕೆ ನೀಡಿದ್ದರು.

ಜೆಡಿಎಸ್‌ ಬೆಂಬಲದಿಂದ ಗೆದ್ದು 2 ಲಕ್ಷದ ಆಸೆಗೆ ಬೇರೆ ಪಕ್ಷಕ್ಕೆ ಮತ ಹಾಕಿರುವವರು ತಾಕತ್ತಿದ್ದರೆ ಪಕ್ಷ ನೀಡಿರುವ ಅಧಿಕಾರವನ್ನು ತ್ಯಜಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಲಿ ಎಂದು ಸವಾಲು ಹಾಕಿದರು. 

ಧಾರ್ಮಿಕ ಭಾವನೆಗಳ ಜೊತೆ ಆಟ ಆಡಬಾರದು : ಸಾರಾ ಮಹೇಶ್

ಪಕ್ಷದಿಂದ ಎಲ್ಲ ಅಧಿಕಾರ ಅನುಭವಿಸಿ, ಹೊರ ಹೋಗಿರುವವರ ಹಿಂದೆ ಜೆಡಿಎಸ್‌ ಕಾರ್ಯಕರ್ತರ ಶ್ರಮ, ಪ್ರಧಾನ ಪಾತ್ರ ವಹಿಸಿದ್ದು, ಈಗ ಪಕ್ಷ ದ್ರೋಹಿಗಳು ಈ ಕೆಲಸ ಮಾಡುತ್ತಿರುವುದು ಸಂಕಟ ತಂದಿದೆ ಎಂದರು. ಜೆಡಿಎಸ್‌ ಮುಖಂಡರನ್ನು ಹುಟ್ಟುಹಾಕುವ ಕಾರ್ಖಾನೆಯಾಗಿದ್ದು, ನಮ್ಮ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ನಮಗೆ ಬೆನ್ನೆಲುಬಾಗಿರುವುದರಿಂದ ಈಗ ಜೊಳ್ಳುಗಳು ಗಾಳಿಯಲ್ಲಿ ತೂರಿ ಹೋಗಿವೆ ಎಂದು ಟೀಕಿಸಿದ್ದು, ಇದೀಗ ಇದೇ ಅಸಮಾಧಾನ ಮುಂದುವರಿದಿದೆ.