'ಕೆಆರ್ಎಸ್ ಡ್ಯಾಂ ಬಗ್ಗೆ ಸರ್ಕಾರ ಸತ್ಯ ಹೇಳಲಿ'
* ಸಂಸದೆ ಸುಮಲತಾ ಹೇಳಿಕೆಯಲ್ಲಿ ಸತ್ಯಾಂಶವಿದೆ
* ಗಣಿಗಾರಿಕೆಯಿಂದ ಕೆಆರ್ಎಸ್ ಅಣೆಕಟ್ಟೆಗೆ ಅಪಾಯ
* ಕೆಆರ್ಎಸ್ ವಿಚಾರ ಯಾರು ಕೂಡ ರಾಜಕೀಯಕ್ಕೆ ಬಳಸಿಕೊಳ್ಳಬಾರದು
ಮಂಡ್ಯ(ಜು.04): ಕೃಷ್ಣರಾಜಸಾಗರ ಅಣೆಕಟ್ಟು ಸುರಕ್ಷತೆ ವಿಚಾರದಲ್ಲಿ ಸರ್ಕಾರ ಜನರಿಗೆ ಸತ್ಯವನ್ನು ಹೇಳಬೇಕು. ಒಮ್ಮೆ ಅಣೆಕಟ್ಟೆಗೆ ಅಪಾಯವಿದ್ದರೆ ಸುರಕ್ಷತೆಗೆ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಆರ್ಎಸ್ ವಿಚಾರವನ್ನು ಯಾರು ಕೂಡ ರಾಜಕೀಯಕ್ಕೆ ಬಳಸಿಕೊಳ್ಳಬಾರದು. ನಾನು ಯಾರ ಪರವೂ ಇಲ್ಲ. ಕೆಆರ್ಎಸ್ ಬಿರುಕು ಬಿಟ್ಟಿದೆ ಎನ್ನುವ ಸಂಸದೆ ಸುಮಲತಾ ಹೇಳಿಕೆಯಲ್ಲಿ ಸತ್ಯಾಂಶವಿದೆ. ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ’ ಎಂದರು.
ನನ್ನ ಬಗೆಗಿನ ಅಪಪ್ರಚಾರಕ್ಕೆ ಕಿವಿಗೊಡಬೇಡಿ : ಸುಮಲತಾ
ಜೊತೆಗೆ ಗಣಿಗಾರಿಕೆಯಿಂದ ಕೆಆರ್ಎಸ್ ಅಣೆಕಟ್ಟೆಗೆ ಅಪಾಯವಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿ ನೀಡಿದೆ. ಅದರನ್ನು ಸರ್ಕಾರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಜನರಿಗೆ ವಾಸ್ತವಾಂಶವನ್ನು ತಿಳಿಸಬೇಕು. ಇದರಿಂದ ಅವರಲ್ಲಿರುವ ಆತಂಕ ದೂರವಾಗುತ್ತದೆ. ಒಮ್ಮೆ ಗಣಿಗಾರಿಕೆಯಿಂದ ಅಪಾಯವಿರುವುದು ಕಂಡು ಬಂದರೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸರಕಾರವನ್ನು ಆಗ್ರಹಿಸಿದರು.