ಬಿಜೆಪಿಯತ್ತ ಗುಬ್ಬಿ ಶ್ರೀನಿವಾಸ್ ಒಲವು : ಪಕ್ಷ ತೊರೆಯುವ ಸೂಚನೆಯಾ?
ಜಿಟಿ ದೇವೇಗೌಡ ಬಳಿಕ ಇದೀಗ ಮತ್ತೋರ್ವ ಜೆಡಿಎಸ್ ಶಾಸಕ ಬಿಜೆಪಿ ಹಾಡಿ ಹೊಗಳಿದ್ದಾರೆ. ಅಲ್ಲದೇ ಪಕ್ಷ ಸೇರುವ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.
ತುಮಕೂರು [ಸೆ.13] : ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬಳಿಕ ಇದೀಗ ಇನ್ನೋರ್ವ ಶಾಸಕ ಬಿಜೆಪಿ ಹಾಡಿ ಹೊಗಳಿದ್ದಾರೆ.
ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ ರಾಜ್ಯ ಸರ್ಕಾರದ ಪರವಾಗಿ ಮಾತನಾಡಿದ್ದು, ನೂರಕ್ಕೆ ನೂರರಷ್ಟು ರಾಜ್ಯ ಸರ್ಕಾರ ಪೂರ್ಣಾವಧಿ ಪೂರೈಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ತುಮಕೂರಲ್ಲಿ ಇಂದು ಮಾತನಾಡಿರುವ ಗುಬ್ಬಿ ಶ್ರೀನಿವಾಸ್ ನಮ್ಮ ಪಕ್ಷದಲ್ಲಿ ನಡೆಯುವಂತೆ ಅತೃಪ್ತರು ಕಿತ್ತಾಡುವುದು, ರಾಜೀನಾಮೆ ನೀಡುವುದು ಯಾವುದು ಬಿಜೆಪಿಯಲ್ಲಿ ನಡೆಯಲ್ಲ. ಅಲ್ಲಿ ಬಿಗಿಯಾದ ಹೈ ಕಮಾಂಡ್ ಇರುವುದರಿಂದ ಕಟ್ಟುನಿಟ್ಟಾಗಿ ಕಾರ್ಯಗಳು ನಡೆಯಲಿವೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನು ಇದೇ ವೇಳೆ ತಮ್ಮ ಪಕ್ಷದ ವಿರುದ್ಧವೂ ಅಸಮಾಧಾನ ಹೊರಹಾಕಿದ್ದು, ನಾಯಕರ ನಡವಳಿಕೆಯಿಂದ ನನಗೆ ಬೇಜಾರಾಗಿದೆ. ನನಗೆ ಅನುದಾನ ಯಾಕೆ ಕೊಟ್ಟಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ಗೊತ್ತು. ಮುಂದಿನ ದಿನಗಳಲ್ಲಿ ಎಲ್ಲಾ ಹೇಳುತ್ತೇನೆ ಎಂದರು. ಇದರಿಂದ ಶ್ರೀನಿವಾಸ್ ಕೂಡ ಬಿಜೆಪಿಯತ್ತ ಮುಖ ಮಾಡುತ್ತಾರಾ ಎನ್ನುವ ಅನುಮಾನ ವ್ಯಕ್ತವಾಗಿದೆ.
ಇನ್ನು ತಾವು ಮಾಜಿ ಸಿಎಂ ಕುಮಾರಸ್ವಾಮಿಗೆ ಆಪ್ತ ಅಲ್ಲ ಎಂದು ಹೇಳಿದ ಶ್ರೀನಿವಾಸ್, ನನಗೆ ಒಳ್ಳೆ ಸಚಿವ ಸ್ಥಾನಗಳನ್ನೇ ನೀಡಿದ್ದರು ಎಂದು ವ್ಯಂಗ್ಯದ ದಾಟಿಯಲ್ಲಿ ಹೇಳಿದರು.
ಇನ್ನು ಶ್ರೀನಿವಾಸ್ 7 ಜನರೊಂದಿಗೆ ಬಿಜೆಪಿಗೆ ಹೋಗುತ್ತೇನೆ ಎನ್ನುವ ವದಂತಿ ಇದ್ದು, ಇದೆಲ್ಲಾ ಕೇವಲ ವದಂತಿ. ನಾನು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಸದ್ಯದ ವಿಧಾನಸಭೆ ಅವಧಿ ಮುಕ್ತಾಯವಾಗುವವರೆಗೂ ಇದೇ ಪಕ್ಷದಲ್ಲಿ ಮುಂದುವರಿಯುತ್ತೇನೆ ಎಂದರು.