ಈ ಹಿಂದೆಯೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು ಇದೀಗಲೂ ಪಕ್ಷದ ಅಭ್ಯರ್ಥಿ ಸೋಲಲು ಕಾರಣರಾಗಿದ್ದಾರೆಂದು ಇಬ್ಬರು ಮುಖಂಡರ ಉಚ್ಛಾಟನೆ ಮಾಡಲಾಗಿದೆ. 

ಚನ್ನಪಟ್ಟಣ (ನ.13): ಜೆಡಿಎಸ್‌ಗೆ ತಾವೇ ನಿಷ್ಠಾವಂತರು. ಲಿಂಗೇಶ್‌ಕುಮಾರ್‌ ಮತ್ತು ರಾಜಣ್ಣ ಅನಿಷ್ಠಾವಂತರು. ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕಿರುವುದು. ತಾಲೂಕು ಜೆಡಿಎಸ್‌ ಅಧ್ಯಕ್ಷ ಜಯಮುತ್ತು ಅವರನ್ನಲ್ಲ ಎಂದು ಜೆಡಿಎಸ್‌ ಮುಖಂಡ ಸಿಂ.ಲಿಂ.ನಾಗರಾಜು ಟಾಂಗ್‌ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ತಾಲೂಕಿನ ಸಿಂಗರಾಜಪುರದಲ್ಲಿರುವ ತಮ್ಮ ನಿವಾಸದಲ್ಲಿ ಸಿಂಗರಾಜಪುರ ಪಿಎಸಿಎಸ್‌ ವ್ಯಾಪ್ತಿಯ ಮುಖಂಡರ ಜತೆಗೂಡಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಬಾರಿಯ ಪಿಎಸಿಎಸ್‌ ಚುನಾವಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಮಾತನಾಡಿಸದೆ, ಬೇರೆ ಪಕ್ಷದವರನ್ನು ಸೇರಿಸಿಕೊಂಡು ನಮ್ಮ ಪಕ್ಷದ ಕಾರ್ಯಕರ್ತರನ್ನು ಮೂಲೆಗುಂಪು ಮಾಡಲು ಲಿಂಗೇಶ್‌ ಕುಮಾರ್‌ ಮತ್ತು ಲಿಂಗರಾಜೇಗೌಡ(ರಾಜಣ್ಣ) ಪ್ರಯತ್ನಿಸಿದ್ದರು ಎಂದು ದೂರಿದರು.

ಶಿರಾ ಸೋಲಿನ ಹಿಂದೆ ಪರಮೇಶ್ವರ್ : ಗಂಭೀರ ಆರೋಪ ...

ಇವರಿಂದಾಗಿ ನಮ್ಮ ಭಾಗದಲ್ಲಿ ಪಕ್ಷಕ್ಕೆ ಧಕ್ಕೆಯಾಗುತ್ತಿರುವುದನ್ನು ತಿಳಿದು ನಾವು ತಾಲೂಕು ಜೆಡಿಎಸ್‌ ಅಧ್ಯಕ್ಷರಿಗೆ ಮನವಿ ಮಾಡಿಕೊಂಡಾಗ ಅವರು ಕಾರ್ಯಕರ್ತರನ್ನು ರಕ್ಷಣೆ ಮಾಡಲು ಚುನಾವಣೆಗೆ ಪ್ರವೇಶಿಸಿದರು. ತಾಲೂಕು ಜೆಡಿಎಸ್‌ ಅಧ್ಯಕ್ಷರು ಇಲ್ಲಿ ಪಕ್ಷ ವಿಭಜನೆ ಮಾಡಲು ಬರಲಿಲ್ಲ. ಪಕ್ಷದ ಕಾರ್ಯಕರ್ತರ ಹಿತಕಾಯಲು ಬಂದಿದ್ದಾರೆ. ನಿಜವಾದ ಪಕ್ಷವಿರೋಧಿಗಳು ಅವರಿಬ್ಬರೇ ಎಂದು ನೇರ ಆರೋಪ ಮಾಡಿದರು.

ನಿರಂತರ ಪಕ್ಷ ವಿರೋಧಿ ಚಟುವಟಿಕೆ: ಲಿಂಗೇಶ್‌ ಕುಮಾರ್‌ ಮತ್ತು ಲಿಂಗರಾಜೇಗೌಡ (ರಾಜಣ್ಣ) ನಿರಂತರವಾಗಿ ಪಕ್ಷ ವಿರೋಧಿ ರಾಜಕಾರಣ ನಡೆಸಿಕೊಂಡು ಬರುತ್ತಿದ್ದಾರೆ. 2004ರಿಂದ ನಿರಂತರವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದು, ಜೆಡಿಎಸ್‌ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ. ಇವರ ಕಾರಣದಿಂದಾಗಿ ನಿಷ್ಠಾವಂತ ಕಾರ್ಯಕರ್ತರು ಸಾಕಷ್ಟುಸಮಸ್ಯೆ ಎದುರಿಸುವಂತಾಗಿದ್ದು, ಈ ಕೂಡಲೇ ಇವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದರು.

ತಮ್ಮ ಸ್ವಾರ್ಥ, ಅಧಿಕಾರ ಲಾಲಸೆಯಿಂದಾಗಿ ಇವರು ಪಕ್ಷಕ್ಕೆ ಹಾನಿ ಮಾಡುತಿದ್ದಾರೆ. 2004ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಎಂ.ಸಿ.ಅಶ್ವತ್ಥ್, 2011ರಲ್ಲಿ ಸ್ಪರ್ಧಿಸಿದ್ದ ನಾನು ಮತ್ತು 2013ರಲ್ಲಿ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿಯವರ ಸೋಲಿಗೆ ಯಾರು ಕಾರಣ ಎಂಬುದು ಎಲ್ಲರಿಗೂ ಗೊತ್ತಿಲ್ಲ. ಹೀಗೆ ಉದ್ದಕ್ಕೂ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಾ ಬಂದಿರುವವರಿಗೆ ಪಕ್ಷದಲ್ಲಿ ಉಳಿಯುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.

ಪುಟ್ಟಣ್ಣ ಪರ ಕೆಲಸ: ಇತ್ತೀಚಿಗೆ ನಡೆದ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್‌ ಚುನಾವಣೆಯಲ್ಲೂ ಸಹ ಪಕ್ಷದ ಅಧಿಕೃತ ಅಭ್ಯರ್ಥಿ ಎ.ಪಿ.ರಂಗನಾಥ್‌ ಪರ ಕೆಲಸ ಮಾಡದ ಲಿಂಗೇಶ್‌ಕುಮಾರ್‌, ಬಿಜೆಪಿ ಅಭ್ಯರ್ಥಿ ಪುಟ್ಟಣ ಪರ ಕೆಲಸ ಮಾಡಿರುವುದು ಅವರ ಪಕ್ಷ ವಿರೋಧಿ ಧೋರಣೆಗೆ ಉತ್ತಮ ಉದಾಹರಣೆ. ಇಂಥವರನ್ನು ಪಕ್ಷ ಎಷ್ಟುದಿನ ಸಹಿಸಿಕೊಂಡಿರುವ ಸಾಧ್ಯ. ಆಗಾಗಿ ಶೀಘ್ರದಲ್ಲೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿ ಎಲ್ಲ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಎಚ್‌.ಸಿ.ಜಯಮುತ್ತು ಪಕ್ಷದ ಸಂಘಟನೆಗಾಗಿ ಸಾಕಷ್ಟುಶ್ರಮಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದಾರೆ. ಇಂಥವರು ವಿರುದ್ಧ ಲಿಂಗೇಶ್‌ಕುಮಾರ್‌ ಮತ್ತವರ ಬಣ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಪಕ್ಷಕ್ಕಾಗಿ ದುಡಿಯುತ್ತಿರುವ ಜಯಮುತ್ತು ರಾಜೀನಾಮೆ ಕೇಳಲು ಲಿಂಗೇಶ್‌ ಕುಮಾರ್‌ ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಎಸಿಎಸ್‌ನಲ್ಲಿ ದಬ್ಬಾಳಿಕೆ: ಸಿಂಗರಾಜಪುರ ಪಿಎಸಿಎಸ್‌ ನಿರ್ದೇಶಕ ಭಾನುಪ್ರಕಾಶ್‌ ಮಾತನಾಡಿ, ಲಿಂಗೇಶ್‌ಕುಮಾರ್‌ ಕಳೆದ 10 ವರ್ಷಗಳಿಂದ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿ ತಾವು ಪ್ರತಿನಿಧಿಸುತ್ತಿರುವ ಸಂಘಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಲಿಂಗೇಶ್‌ಕುಮಾರ್‌ ಮತ್ತು ಲಿಂಗರಾಜೇಗೌಡರ ಹಿಡಿತದಲ್ಲಿ ಕಳೆದ 37 ವರ್ಷಗಳಿಂದ ಈ ಸಂಘ ಇದ್ದು, ಇದುವರೆಗೆ ರಸಗೊಬ್ಬರ ಮಾರಾಟ ಮಾಡುವ ಅನುಮತಿ ಪಡೆದಿದೆ. ಇವರು ಹಿಂದಿನಿಂದ ದಬ್ಬಾಳಿಕೆ ಮತ್ತು ದೌರ್ಜನ್ಯ ನಡೆಸಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರನ್ನು ನಿರ್ಲಕ್ಷಿಸಿದ ಲಿಂಗೇಶ್‌ಕುಮಾರ್‌ ಸಿಂಗರಾಜಪುರ ಪಿಎಸಿಎಸ್‌ನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರನ್ನು ಸೇರಿಸಿಕೊಂಡು ಚುನಾವಣೆ ನಡೆಸಿದ್ದಾರೆ. ಲಿಂಗೇಶ್‌ಕುಮಾರ್‌ ಬಣದಿಂದ ಗೆದ್ದಿರುವವರಲ್ಲಿ 5 ಮಂದಿ ಕಾಂಗ್ರೆಸ್‌ ಮತ್ತು ಬಿಜೆಪಿ ಬೆಂಬಲಿಗರು ಎಂದು ಆರೋಪಿಸಿದರು.

ನಾವು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್‌ ಚಿಹ್ನೆ ಇಟ್ಟುಕೊಂಡು ಪ್ರಚಾರ ಮಾಡಿದೆವು. ಆದರೆ, ಅವರ ಬಣದವರು ಕೇವಲ ತಮ್ಮ ಭಾವಚಿತ್ರ ಹಾಕಿಕೊಂಡು ಪಾಂಪ್ಲೆಟ್‌ ಮುದ್ರಿಸಿ ಪ್ರಚಾರ ಮಾಡಿತು. ಇದರಿಂದಲೇ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತರು ಯಾರು ಎಂದು ತಿಳಿಯುತ್ತದೆ ಎಂದು ಸ್ಪಷ್ಟಪಡಿಸಿದರು.

ಸಿಂಗರಾಜಪುರ ಪಿಎಸಿಎಸ್‌ನ ನಿರ್ದೇಶಕರನ್ನು ಕಡೆಗಣಿಸಲಾಗುತ್ತಿತ್ತು. ಅವರ ಮಾತಿಗೆ ಮನ್ನಣೆ ನೀಡುತ್ತಿರಲಿಲ್ಲ. ಹೆಸರಿಗೆ ಮಾತ್ರ ಅವರು ನಿರ್ದೇಶಕರಾಗಿದ್ದರು. ಎಲ್ಲ ತೀರ್ಮಾನಗಳು ಲಿಂಗೇಶ್‌ ಕುಮಾರ್‌ ಮತ್ತು ರಾಜಣ್ಣ ತೆಗೆದುಕೊಳ್ಳುತ್ತಿದ್ದರು. ಇದರಿಂದ ಬೇಸತ್ತು ನಿರ್ದೇಶಕರು ರಾಜೀನಾಮೆ ನೀಡಿದರೆ ಹೊರತು ಯಾವುದೇ ಆಮಿಷಕ್ಕೆ ಬಲಿಯಾಗಿ ರಾಜೀನಾಮೆ ನೀಡಿಲ್ಲ. ಲಿಂಗೇಶ್‌ ಮತ್ತವರ ಬಣ ರಾಜೀನಾಮೆ ನೀಡಿದ ನಿರ್ದೇಶಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ತಿಳಿಸಿದರು.

ಜೆಡಿಎಸ್‌ ಮುಖಂಡರಾದ ಅರಳಾಳುಸಂದ್ರ ಶಿವಪ್ಪ, ಉಜ್ಜನಹಳ್ಳಿ ಪುಟ್ಟಚಂದ್ರು, ಭೂಹಳ್ಳಿ ವೆಂಕಟಪ್ಪ, ಮಳೂರುಪಟ್ಟಣ ರವಿ,ಸಿಂಗರಾಜಿಪುರ ಸುನೀಲ್‌, ಪಿಎಸಿಎಸ್‌ ನಿರ್ದೇಶಕರಾದ ರಾಜೇಶ್‌, ರಾಧಾ, ಗ್ರಾಪಂ ಮಾಜಿ ಸದಸ್ಯ ಉಜ್ಜನಹಳ್ಳಿ ಪ್ರಭು ಇನ್ನೂ ಮುಂತಾದವರು ಉಪಸ್ಥಿತರಿದ್ದರು.