ಅಟ್ಟಾಡಿಸಿ ಹೊಡೆಸುತ್ತೇನೆ : ಅಧಿಕಾರಿಗಳಿಗೆ ಅವಾಜ್ ಹಾಕಿದ ಎಚ್.ಡಿ.ರೇವಣ್ಣ
ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡರಾದ ಎಚ್ ಡಿ ರೇವಣ್ಣ ಅವಾಜ್ ಹಾಕಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗಾದ್ರೆ ರೇವಣ್ಣ ಈ ರೀತಿ ಅವಜಾ ಹಾಕಿದ್ದು ಯಾರಿಗೆ..?
ಹಾಸನ (ಆ.18): ತಮ್ಮ ಭೂಮಿ ಸೈಟುಗಳ ನೋಂದಣಿ ವರ್ಗಾವಣೆಗಾಗಿ ಬರುವ ಬಡವರಿಂದ ಹಣ ಸುಲಿಗೆ ಮಾಡುತ್ತಿದ್ದೀರಾ. ಏಜೆಂಟರನ್ನು ಇಟ್ಟುಕೊಂಡು ತಿಂಗಳಿಗೆ ಮಾಮೂಲಿ ಫಿಕ್ಸ್ ಮಾಡಿಕೊಂಡಿದ್ದೀರಾ. ನಾನು ಇನ್ನೊಮ್ಮೆ ಬಂದಾಗ ಏಜೆಂಟರೇನಾದರೂ ಕಂಡುಬಂದರೆ ಜನರಿಂದಲೇ ಅಟ್ಟಾಡಿಸಿಕೊಂಡು ಹೊಡೆಸುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ನಗರದಲ್ಲಿರುವ ಉಪ ನೊಂದಣಾಕಾರಿ ಕಚೇರಿ ಸಿಬ್ಬಂದಿಗೆ ಬಿಸಿ ಮುಟ್ಟಿಸಿದರು.
ನಗರದ ಕುವೆಂಪು ನಗರದ ಮಿನಿ ವಿಧಾನಸೌಧದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸೋಮವಾರ ದಿಢೀರ್ ಭೇಟಿ ನೀಡಿದ ರೇವಣ್ಣ, ಯಾರಾದರೂ ಜಮೀನು ವಿಚಾರದಲ್ಲಿ ಇಲ್ಲಿಗೆ ಬಂದರೆ ಹತ್ತು ಲಕ್ಷಕ್ಕೆ 10 ಸಾವಿರ, 20 ಲಕ್ಷಕ್ಕೆ 20 ಸಾವಿರ ಹಾಗೂ 30 ಲಕ್ಷಕ್ಕೆ 30 ಸಾವಿರ ರು. ಹೀಗೆ 10 ಪರ್ಸೆಂಟ್ ಫಿಕ್ಸ್ ಮಾಡಿಕೊಂಡಿದ್ದೀರಾ..? ಜನರ ಕೆಲಸ ಮಾಡದೆ ಇಲ್ಲಿನ ಅಧಿಕಾರಿಗಳು ಏಜೆಂಟರನ್ನು ಇಟ್ಟುಕೊಂಡು ಕಮಿಷನ್ ವ್ಯವಹಾರ ಮಾಡುತ್ತಿದ್ದೀರಾ? ಎಂದು ಅಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜನ ಸಂಕಷ್ಟದಲ್ಲಿದ್ದರೂ ದೇವರ ಕಾರ್ಯ: ರಾಮಮಂದಿರ ಶಿಲಾನ್ಯಾಸದ ಬಗ್ಗೆ ಎಚ್.ಡಿ.ರೇವಣ್ಣ..
ರೇವಣ್ಣ ಅವರು ಕಚೇರಿ ಒಳಗೆ ಬರುತ್ತಿದ್ದಂತೆ ಸಬ್ ರಿಜಿಸ್ಟ್ರಾರ್ ಅಧಿಕಾರಿ ಮಧು ಮತ್ತು ಹೆಚ್ಚುವರಿ ಅಧಿಕಾರಿ ರಮೇಶ್ ಕಕ್ಕಾಬಿಕ್ಕಿಯಾದರು. ಸಾರ್ವಜನಿಕರ ಎದುರೇ ಅಧಿಕಾರಿಗಳನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ರೇವಣ್ಣ ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದ ಅಧಿಕಾರಿಗಳು ಮೌನವಾಗಿದ್ದರು. ಇನ್ನು ಮುಂದೆ ನಾನು ಇಲ್ಲಿಗೆ ಬಂದಾಗ ಏಜೆಂಟರೇನಾದರೂ ನನ್ನ ಕಣ್ಣಿಗೆ ಏನಾದರೂ ಕಾಣಿಸಿದರೆ ಇಲ್ಲಿರುವ ಜನರಿಂದಲೇ ಓಡಾಡಿಸಿ ಹೊಡೆಯಲು ಹೇಳುತ್ತೇನೆ ಎಂದರು.
ಒಂದೊಂದು ನಿವೇಶನದ ನೋಂದಣಿ ವರ್ಗಾವಣೆಗೂ ಬಡ ಜನರಿಂದ ಪಡೆಯುವ ಹಣವನ್ನು ಶಾಸಕರಿಗೆ ಕೊಡುತ್ತಿದ್ದೀರಾ. ಇಲ್ಲಿನ ನೋಂದಣಿ ಕಚೇರಿಗೆ ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎರಡು ಹೋಬಳಿಗಳು ಬರುತ್ತವೆ. ಈ ಹೋಬಳಿಗಳ ಜನರ ನೋಂದಣಿ ಕೆಲಸಗಳು ಆಗುತ್ತಿಲ್ಲ. ಈ ಕ್ಷೇತ್ರದ ಜನರಿಂದ ವಸೂಲಿ ಮಾಡುತ್ತಿರುವ ಹಣವನ್ನು ನನಗೇನಾದರೂ ಕೊಟ್ಟಿದ್ದೀರಾ. ನನಗೆ ಯಾವತ್ತು ಹಣ ಕೊಟ್ಟಿಲ್ಲ ಎಂದರೆ ಯಾವ ಶಾಸಕರಿಗೆ ಹಣ ಕೊಡುತ್ತಿದ್ದೀರಾ ಎಂದರು.
ಜನ ದಂಗೆ ಏಳ್ತಾರೆ' ಬಿಎಸ್ವೈಗೆ ರೇವಣ್ಣ ವಾರದ ಡೆಡ್ ಲೈನ್!..
ಪ್ರತಿ ತಿಂಗಳು ನಾಲ್ಕು ಲಕ್ಷ ಕೊಡಬೇಕು ಅಂತಾ ಹಣ ವಸೂಲಿ ಮಾಡುತ್ತಿದ್ದೀರ. ಸರ್ಕಾರಕ್ಕೆ ಕೊಡಲು ವಸೂಲಿ ಮಾಡುತ್ತಿದ್ದೀರ? ಇಂದು ಎಷ್ಟುಕಲೆಕ್ಷನ್ ಮಾಡಿದ್ದೀರಿ, ನಿಮ್ಮ ಟ್ರಾಯರ್ಗಳನ್ನು ತೆಗೆಯಿರಿ. ಸೀನಿಯಾರಿಟಿ ಮೇಲೆ ನೊಂದಣಿ ಮಾಡುತ್ತಿದ್ದರೋ ಇಲ್ಲಾ ಹೆಚ್ಚು ಹಣ ಕೊಟ್ಟವರ ಕೆಲಸ ಮಾಡುತ್ತಿದ್ದೀರೋ ಎಂದು ತರಾಟೆಗೆ ತೆಗೆದುಕೊಂಡರು.
ಇದೆ ವೇಳೆ ಜೆಡಿಎಸ್ ಮುಖಂಡರಾದ ಗಿರೀಶ್ ಚನ್ನವೀರಪ್ಪ, ನಗರಸಭೆ ಸದಸ್ಯ ವಾಸು, ರವಿಶಂಕರ್ ಇತರರು ಉಪಸ್ಥಿತರಿದ್ದರು.