ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ಆಟವಾಡಬೇಡಿ ಎಂದು ಸೂಚಿಸಿದ್ದಾರೆ. 

 ಬೆಂಗಳೂರು (ಮಾ.23): ಕೊರೋನಾ ಸೋಂಕು ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಆಟವಾಡಬಾರದು. ನಿಮ್ಮ (ಸರ್ಕಾರ) ಸ್ವಾರ್ಥಕ್ಕೆ ಜನರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮನಸ್ಸಿಗೆ ಬಂದಂತೆ ಮಾರ್ಗಸೂಚಿ ರೂಪಿಸುತ್ತಿದೆ. ಕೊರೋನಾ ಸೋಂಕು ನಿರ್ವಹಣೆ ವಿಷಯದಲ್ಲಿ ಸರ್ಕಾರ ಆಟವಾಡಬಾರದು ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಹಣ ಲೂಟಿ ಮಾಡುತ್ತಿದೆ. ಈಗಲಾದರೂ ಜನರಿಗೆ ಬುದ್ಧಿ ಇದ್ದರೆ ತಿಳಿದುಕೊಳ್ಳಲಿ. ಜನರ ತೆರಿಗೆ ಹಣವನ್ನು ಹೇಗೆಲ್ಲಾ ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಉಪ ಚುನಾವಣೆಯಲ್ಲಿ ಮತದಾರರು ಉತ್ತರ ಕೊಡಬೇಕು ಎಂದು ಹೇಳಿದರು.

ಚಿಕ್ಕೋಡಿ ಜಾತ್ರೆಯಲ್ಲಿ ಜನಸ್ತೋಮ.. ಮಾಸ್ಕ್, ಸಾಮಾಜಿಕ ಅಂತರ.. ಹಾಗಂದ್ರೆ ಏನು?

ಮಸ್ಕಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿಗೆ ಮತಹಾಕಿ ಎಂದು ಮುಖ್ಯಮಂತ್ರಿಗಳು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ಮಸ್ಕಿ ಶಾಸಕರು ತ್ಯಾಗ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಜನರಿಗಲ್ಲ ಅವರು ಶಾಸಕತ್ವ ತ್ಯಾಗ ಮಾಡಿದ್ದು, ಬಿಜೆಪಿ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದ್ದಾರೆ ಎಂದು ಟೀಕಿಸಿದರು.

ನಾನು ಅಧಿಕಾರದಲ್ಲಿದ್ದಾಗ ಮಸ್ಕಿ ಕ್ಷೇತ್ರಕ್ಕೆ 500 ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದೆ. ಆ ಹಣವನ್ನೇ ಖರ್ಚು ಮಾಡಿದ್ದರೆ ಸಾಕಿತ್ತು. 2008ರಲ್ಲಿ ಆಪರೇಷನ್‌ ಕಮಲದ ಮೂಲಕ 20 ಶಾಸಕರನ್ನು ಯಡಿಯೂರಪ್ಪನವರು ಬಿಜೆಪಿಗೆ ಸೇರಿಸಿಕೊಂಡಿದ್ದರು. ಆಗಲೂ ಉಪ ಚುನಾವಣೆಯಲ್ಲಿ ಆ ಕ್ಷೇತ್ರಗಳನ್ನು ದತ್ತು ಪಡೆಯವುದಾಗಿ ಹೇಳಿದ್ದರು. ಆ ಮೇಲೆ ಏನಾಯ್ತು? ಶಿರಾ ಕ್ಷೇತ್ರದ ಉಪ ಚುನಾವಣೆ ವೇಳೆ ಮಗದೂರು ಕೆರೆ ಮುಂದಿಟ್ಟು ರಾಜಕೀಯ ಮಾಡಿದರು. ಚುನಾವಣೆ ಮುಗಿದ ಬಳಿಕ ಕೆರೆ ಬತ್ತಿ ಹೋಗಿದೆ ಎಂದು ದೂರಿದರು.