ಪ್ರತಾಪ್ ಸಿಂಹ ವಿರುದ್ಧ ಕೆಂಡಾಮಂಡಲವಾದ ಮುಖಂಡ
ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಮುಖಂಡರೋರ್ವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು (ಅ.25): ಮೈಸೂರು ನಗರಕ್ಕೆ ಸಂಸದ ಪ್ರತಾಪ ಸಿಂಹ ಅವರ ಕೊಡುಗೆ ಏನು ಎಂಬುದನ್ನು ಬಿಜೆಪಿಯವರು ತಿಳಿಸಿ, ನಂತರ ಮೇಯರ್ ಅವರನ್ನು ಟೀಕಿಸಲಿ ಎಂದು ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ ತಿರುಗೇಟು ನೀಡಿದ್ದಾರೆ.
ಪ್ರತಿ ಬಾರಿಯು ರೈಲು ಬಿಡಿಸಿದೆ, ರಸ್ತೆ ಮಾಡಿದೆ ಎಂದು ಹೇಳುತ್ತಾರೆ. ಅಧಿಕಾರಿಗಳು ಮಾಡಿದ ಉತ್ತಮ ಕೆಲಸಗಳನ್ನು ತಮ್ಮ ಅಕೌಂಟ್ಗೆ ಹಾಕಿಕೊಳ್ಳುತ್ತಾರೆ. ಮೈಸೂರಿನಲ್ಲಿ ಶಾಶ್ವತವಾದ ಯಾವ ಕೆಲಸ ಮಾಡಿಸಿದ್ದಾರೆ. ಧರ್ಮ, ಜಾತಿಯ ಹೆಸರೇಳಿಕೊಂಡು ಕಂಡವರ ಮಕ್ಕಳನ್ನು ಜೈಲಿಗೆ ಕಳುಹಿಸಿ, ಚುನಾವಣೆ ಗೆದ್ದಿದ್ದಾರೆ ಹೊರತು, ಇವರೊಬ್ಬ ಪೇಪರ್ ಸಿಂಹ ಅಷ್ಟೇ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ತರಲಾಗದವರು, ತಮ್ಮ ಶಾಸಕರಿಂದ ಕೆ.ಆರ್. ಕ್ಷೇತ್ರದ ಕಸದ ಸಮಸ್ಯೆ ಬಗೆಹರಿಸದವರು, ಜ್ಯುಬಿಲಿಯಂಟ್ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳಲಾಗದವರು, ಕೇಂದ್ರದಿಂದ ನೆರೆ ಪರಿಹಾರ ಮತ್ತು ಜಿಎಸ್ಟಿ ಪಾಲಿನ ಹಣ ಕೇಳಲು ಧ್ವನಿ ಇಲ್ಲದವರು ಪಾಲಿಕೆ ಬಗ್ಗೆ ಮಾತನಾಡಲು ಹಾಗೂ ಮೇಯರ್ ಟೀಕಿಸುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ, ಬಿಜೆಪಿ ಶಾಸಕಿ ಪತಿ ಉಚ್ಛಾಟನೆ..!
ಎರಡು ಬಾರಿ ಸಂಸದರಾಗಿ ಇವರು ನೆರೆ ಜಿಲ್ಲೆಯ ಸಂಸದರು ವಿರೋಧ ಪಕ್ಷದಲ್ಲಿದ್ದುಕೊಂಡು ಮಾಡಿದ ಕೆಲಸವನ್ನು ಇವರು ಅಧಿಕಾರದಲ್ಲಿದ್ದುಕೊಂಡು ಮಾಡಲು ಆಗಿಲ್ಲ ಎಂದರೆ ಅವರ ಸಾಮರ್ಥ್ಯ, ಆಸಕ್ತಿ ತಿಳಿಯುತ್ತದೆ. ಇವರು ಬ್ರಿಟಿಷರಂತೆ ಬಿಸಿಲು ಹೆಚ್ಚಾದಾಗ ಕೊಡಗು, ಮಳೆ ಬಂದಾಗ ಮೈಸೂರು ಸೇರಿಕೊಳ್ಳುತ್ತಾರೆ. ಇವರಿಗೆ ಕ್ಷೇತ್ರದ ಬಗ್ಗೆ ಏನು ಕಾಳಜಿ ಇದೆ. ಬಿಜೆಪಿಯವರದ್ದು ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತಾಗಿದೆ.
ಬಿಜೆಪಿ ನಗರಾಧ್ಯಕ್ಷರು ಹಲವು ವರ್ಷದಿಂದ ಪಕ್ಷದಲ್ಲಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ದೊರಕಿಲ್ಲ. ವರಿಷ್ಠರು ಅವರನ್ನು ಯಾವುದಾದರೂ ನಿಗಮ, ಮಂಡಳಿಗೆ ನೇಮಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ನಗರ ಪಾಲಿಕೆ ಚುನಾವಣೆಯಲ್ಲಿ ನಿಂತುಗೆದ್ದು ನಗರ ಪಾಲಿಕೆ ಪರಿಮಿತಿ ಮತ್ತು ಮೇಯರ್ ಇತಿಮಿತಿ ತಿಳಿದು ಮಾತನಾಡಲಿ. ಸುಮ್ಮನೆ ವರಿಷ್ಠರನ್ನು ಮನವೊಲಿಸುವ ದೃಷ್ಟಿಯಿಂದ ಮೇಯರ್ ಟೀಕಿಸುವ ಯತ್ನ ಮಾಡಬಾರದು. ಬಿಜೆಪಿಯವರು ಅಲ್ಪಸಂಖ್ಯಾತರಿಗೆ ಯಾವ ಸ್ಥಾನಮಾನ ನೀಡಿದ್ದಾರೆ. ಓರ್ವ ಅಲ್ಪಸಂಖ್ಯಾತ ಮಹಿಳೆ ನಗರದ ಪ್ರಥಮ ಪ್ರಜೆ ಬಗ್ಗೆ ಇವರು ಹೊಂದಿರುವ ಗೌರವ ಇದೇನಾ ಎಂದು ಪ್ರಶ್ನಿಸಿದ್ದಾರೆ.