ರೈತನೇನು ಭಿಕ್ಷಕ ಅಲ್ಲ. ಆದರೆ ಇಂದಿನ ಸರ್ಕಾರಗಳು ರೈತ ಪರ ಕೆಲಸ ಮಾಡುತ್ತಿಲ್ಲ. ನನ್ನ ಮಗ ಅನಿವಾರ್ಯವಾಗಿ ಆಗ ಸಿಎಂ ಆಗಿ ರೈತರಿಗಾಗಿ ಹಲವು ರೀತಿಯ ಕೆಲಸ ಮಾಡಿದ್ದಾಗಿ ಎಚ್ ಡಿ ದೇವೇಗೌಡ ಹೇಳಿದರು. 

ಚನ್ನಪಟ್ಟಣ [ಮಾ.07]:  ರೈತ ಬಿಕ್ಷುಕ ಅಲ್ಲ, ಇದೀ ಜಗತ್ತಿಗೆ ಅನ್ನ ಹಾಕುವ ಶಕ್ತಿ ಅವನಿಗೆ ಇದೆ. ಸರ್ಕಾರಗಳು ರೈತನ ಬದುಕಿಗೆ ಶಾಶ್ವತವಾಗಿ ನೆರವು ನೀಡುವ ಕೆಲಸವನ್ನು ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಕರೆ ನೀಡಿದರು.

Add Asianetnews Kannada as a Preferred SourcegooglePreferred

ಬಮೂಲ್‌ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ಸರ್ಕಾರಗಳು ರೈತಪರವಾಗಿ ಕೆಲಸ ಮಾಡುವುದನ್ನು ಬಿಟ್ಟು, ಧರ್ಮದ ಹೆಸರಿನಲ್ಲಿ ಜನರನ್ನು ಎತ್ತುಕಟ್ಟುವ ಕೆಲಸ ಮಾಡುತ್ತಿವೆ. ದೇಶಕ್ಕೆ ಅಪಾರ ಕೊಡುಗೆ ನೀಡಿದ ಗಾಂಧಿ, ಅಂಬೇಡ್ಕರ್‌ ಅವರನ್ನೇ ಅಲ್ಲಗಳೆಯುವ ಕೆಲಸ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಷಾದಿಸಿದರು.

ಜೆಡಿಎಸ್‌ ಉಳಿಸುವ ಹಠ ಚಲ ಇದೆ:

ದೇಶದ ಹಲವಾರು ಸಮಸ್ಯೆಗಳ ಬಗ್ಗೆ ಮಾತನಾಡದಲು ನನಗೆ ಇದೀಗ ಅಧಿಕಾರ ಇಲ್ಲ. ಆದರೂ, ಪ್ರಾದೇಶಿಕ ಪಕ್ಷವನ್ನು ಉಳಿಸುವ ಹಠ ಇದೆ. ಇದಕ್ಕಾಗಿ ನಾಡಿನಾದ್ಯಂತ ಸುತ್ತಾಡಿ ಪಕ್ಷವನ್ನು ಬಲಪಡಿಸುತ್ತೇನೆ. ಜನತೆ ನಮ್ಮ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸ ಇದೆ. ಮುಂದೆ ನಮ್ಮ ಪಕ್ಷ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಎಚ್‌ಡಿಡಿ ವಿಶ್ವಾಸ ವ್ಯಕ್ತಪಡಿಸಿದರು.

ಎಚ್‌ಡಿಕೆ ಉತ್ತಮ ಕೆಲಸ: 

ನನ್ನ ಮಗ ಸಿಎಂ ಆಗಬೇಕು ಎಂದು ನಾನು ಬಯಸಿರಲಿಲ್ಲ. ಖರ್ಗೆ ಮಾಡುವಂತೆ ಕಾಂಗ್ರೆಸ್‌ ನಾಯಕರಿಗೆ ಹೇಳಿದ್ದೆ. ಅನಿವಾರ್ಯ ಕಾರಣದಿಂದ ಮತ್ತೆ ಮುಖ್ಯಮಂತ್ರಿಯಾದ. 24 ಗಂಟೆಯಲ್ಲಿ ಸಾಲ ಮನ್ನಾ ಮಾಡುವಂತೆ ಇಂದು ಮುಖ್ಯಮಂತ್ರಿಯಾಗಿರುವವರು ಪಟ್ಟು ಹಿಡಿದರು. ಹಿಂದಿನ ಮುಖ್ಯಮಂತ್ರಿ ತಮ್ಮ ನೂರಾರು ಭಾಗ್ಯಗಳನ್ನು ನಿಲ್ಲಿಸದಂತೆ ಪಟ್ಟು ಹಿಡಿದರು. ಈ ಒತ್ತಡದ ನಡುವೆಯೂ ಕುಮಾರಸ್ವಾಮಿ ಸಾಲಮನ್ನಾ, ಬಡವರ ಬಂಧು ಯೋಜನೆಯನ್ನು ಜಾರಿಗೆ ತಂದು ಜನೋಪಯೋಗಿ ಕೆಲಸ ಮಾಡಿದ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಜೆಟ್‌ಗೂ ನನಗೂ ಸಂಬಂಧ ಇಲ್ಲ: ದೇವೇಗೌಡ...

ಹಾರ ತುರಾಯಿ ಹಾಕಿಸಿಕೊಳ್ಳಲಿಲ್ಲ: ನಾನು ಇಗ್ಗಲೂರಿಗೆ ಭೇಟಿ ನೀಡುವ ವಿಚಾರ ಯಾರಿಗೂ ಗೊತ್ತಿರಲಿಲ್ಲ. ವರದೇಗೌಡರಿಗೂ ಹೇಳದೆ ಅಲ್ಲಿಗೆ ಹೋಗಿದ್ದೆ. ಇಗ್ಗಲೂರಿನಲ್ಲಿ ಬ್ಯಾರೇಜ್‌ ನಿರ್ಮಿಸಬೇಕು ಎಂದು ಹೋಗಿದ್ದೆನೇ ಹೊರತು, ಹಾರ ತುರಾಯಿ ಹಾಕಿಸಿಕೊಳ್ಳಲು ಅಲ್ಲ. ಜನತೆ ಇದನ್ನು ಅರ್ಥಮಾಡಿಕೊಳ್ಳ ಬೇಕು. ಇಂದು ಇಗ್ಗಲೂರು ಬ್ಯಾರೇಜ್‌ಗೆ ಶಾಶ್ವತವಾಗಿ ನೀರು ತುಂಬಿಸುವ ಯೋಜನೆ ನಡೆಯುತ್ತಿದೆ. ನಿಜಕ್ಕೂ ನನಗೆ ಈ ಕೆಲಸ ಮಾಡಿದ್ದಕ್ಕೆ ಸಂತಸವಾಗುತ್ತದೆ ಎಂದರು.

ಕುರಿಯನ್‌ ಅಣಕವಾಡಿದ್ದರು: ನಾನು ಪ್ರಧಾನಿಯಾಗಿದ್ದಾಗ ಗುಜರಾತ್‌ನ ಆನಂದ್‌ ಡೇರಿಗೆ(ಅಮೂಲ್‌) ಭೇಟಿ ನೀಡಿದ್ದೆ. ಇಂತಹುದೇ ವ್ಯವಸ್ಥೆಯನ್ನು ನಮ್ಮ ರಾಜ್ಯದಲ್ಲೂ ಜಾರಿಗೆ ತರಬೇಕೆಂದು ಬಯಸಿ ಕುರಿಯನ್‌ ಅವರನ್ನು ಕೇಳಿದಾಗ ಅವರು ಇಡೀ ದೇಶಕ್ಕೆ ಒಂದೇ ತಾಜ್‌ಮಹಲ್‌. ಅದೇ ರೀತಿ ಗುಜರಾತ್‌ನಲ್ಲಿ ಮಾತ್ರ ಅಮೂಲ್‌ ಎಂದು ಹೇಳಿದ್ದರು. ನನ್ನ ಮನಸ್ಸಿಗೆ ತುಂಬಾ ಬೇಸರವಾಯಿತು. ಕೊನೆಗೆ ಅವರೇ ವಿಮಾನ ಹತ್ತುವಾಗ ಬಂದು ನಿಮ್ಮ ರಾಜ್ಯಕ್ಕೂ ಮಾಡಿಕೊಡುತ್ತೇನೆ ಎಂದು ಒಪ್ಪಿಕೊಂಡರು ಎಂದು ಕೆಎಂಎಫ್‌ ಸ್ಥಾಪನೆಗೆ ಕಾರಣವಾದ ಘಟನೆಯನ್ನು ಮೆಲುಕು ಹಾಕಿದರು.