Asianet Suvarna News Asianet Suvarna News

Bengaluru: ಜಯನಗರದ ರಸ್ತೆಗೆ ಖಳನಾಯಕ ಖ್ಯಾತಿಯ ವಜ್ರಮುನಿ ಹೆಸರು ನಾಮಕರಣ: ಇಂದು ಉದ್ಘಾಟನೆ

ಕಳೆದ 15 ವರ್ಷಗಳ ಹಿಂದೆ ಬೆಂಗಳೂರಿನ ಒಂದು ರಸ್ತೆಗೆ ಸ್ಯಾಂಡಲ್‌ವುಡ್‌ ಬೆಳ್ಳಿತಾರೆ ಖಳನಾಯಕ ವಜ್ರಮುನಿ ಅವರ ಹೆಸರನ್ನು ನಾಮಕರಣ ಂಆಡುವಂತೆ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದ್ದರೂ ರಸ್ತೆ ನಾಮಕರಣ ಆಗಿರಲಿಲ್ಲ. ಸತತ ಹೋರಾಟದ ಫಲದಿಂದ ಈಗ ಜಯನಗರದ 2ನೇ ಬ್ಲಾಕ್‌ನ ನೇ ಅಡ್ಡರಸ್ತೆಗೆ ನಟ ಭೈರವ ವಜ್ರಮುನಿ ರಸ್ತೆ ಎಂದು ನಾಮಕರಣ ಮಾಡಲಾಗಿದೆ. 

Jayanagar road  is named after the villain Vajramuni
Author
First Published Dec 4, 2022, 11:02 AM IST

ಬೆಂಗಳೂರು (ಡಿ.4): ಬಿಬಿಎಂಪಿ ವ್ಯಾಪ್ತಿಯಲ್ಲಿ ಜಯನಗರದ ಒಂದು ರಸ್ತೆಗೆ ಸ್ಯಾಂಡಲ್‌ವುಡ್‌ ಖಳನಾಯಕ ವಜ್ರಮುನಿ ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡಲು ಕಳೆದ 15 ವರ್ಷದಗಳ ಹಿಂದೆಯೇ ಪಾಲಿಕೆಯಿಂದ ಅನುಮತಿ ಸಿಕ್ಕಿತ್ತು. ವಿವಿಧ ಕಾರಣಗಳಿಂದ ರಸ್ತೆಗೆ ನಾಮಕರಣ ಮಾಡಲು ಸಾಧ್ಯವಾಗಿರಲಿಲ್ಲ. ಈಗ ವಜ್ರಮುನಿ ಅವರ ಹೆಸರನ್ನು ಜಯನಗರ 2ನೇ ಬ್ಲಾಕ್‌ನ 9ನೇ ಅಡ್ಡರಸ್ತೆಗೆ 'ನಟಭೈವರ ಶ್ರೀ ವಜ್ರಮುನಿ ರಸ್ತೆ' ಎಂದು ನಾಮಕರಣ ಮಾಡಿ ಫಲಕ ಅಳವಡಿಕೆ ಮಾಡಲಾಗಿದೆ. 

ರಾಜಧಾನಿಯ ಸದಾನಂದ ನಗರದಲ್ಲಿ 1944ನಲ್ಲಿ ಜನಿಸಿದ ವಜ್ರಮುನಿ ಅವರು ನಂತರ ಸಿನಿಮಾರಂಗದಲ್ಲಿ ಖಲನಾಯಕನಾಗಿ ನಟಿಸುತ್ತಾ ಪ್ರಸಿದ್ಧಿ ಪಡೆದಿದ್ದರು. ಸ್ಥಳೀಯ ಕಲಾ ಮತ್ತು ಸಾಂಸ್ಕೃತಿಕ ಸಂಘದಿಂದ 2007ರಲ್ಲಿ ಜಯನಗರದ ಒಂದು ರಸ್ತೆಗೆ ವಜ್ರಮುನಿ ಅವರ ಹೆರಸನ್ನು ನಾಮಕರಣ ಮಾಡುವಂತೆ ಅಂದಿನ ಬಿಬಿಎಂಪಿ ಮುಖ್ಯ ಆಡಳಿತಾಧಿಕಾರಿ ದಿಲೀಪ್‌ ರಾವ್‌ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಅದಕ್ಕೆ ಒಪ್ಪಿಗೆ ಕೊಟ್ಟಿದ್ದರು. ಆದರೆ, ಈವರೆಗೆ ರಸ್ತೆಗೆ ನಾಮಕರಣ ಮಾಡಲು ಸಾಧ್ಯ ವಾಗಿರಲಿಲ್ಲ. ವಜ್ರಮುನಿ ಅವರ ಅಭಿಮಾನಿಗಳು ಮತ್ತು ಬೆಂಬಲಿಗರ ನಿರಂತರ ಒತ್ತಡ ಮತ್ತು ಹೋರಾಟದಿಂದ ಅಂತಿಮವಾಗಿ 2022ರಲ್ಲಿ ಜಯನಗರದ 2ನೇ ಬ್ಲಾಕ್‌ನ ರಸ್ತೆಗೆ ನಾಮಕರಣ ಮಾಡುವ ಮೂಲಕ ಬಹುದಿನದ ಬೇಡಿಕೆಯನ್ನು ಪಾಲಿಕೆ ಈಡೇರಿಸಿದೆ. 

ವಜ್ರಮುನಿಗಿಂಥ ಸಿದ್ದರಾಮಯ್ಯ ದೊಡ್ಡ ಖಳನಾಯಕ: ಕಟೀಲ್‌ ವಾಗ್ದಾಳಿ

ಇಂದು ರಸ್ತೆಯ ಉದ್ಘಾಟನೆ: ವಜ್ರಮುನಿ ಅವರ ಕುಟುಂಬ ಸದಸ್ಯರೊಂದಿಗೆ ಕಂದಾಯ ಸಚಿವ ಆರ್. ಅಶೋಕ್‌ ಮತ್ತು ಶಾಸಕ ಉದಯ ಬಿ. ಗರುಡಾಚಾರ್‍‌ ನೇತೃತ್ವದಲ್ಲಿ ರಸ್ತೆಗೆ ನಾಮಕರಣ ಫಲಕದ ಉದ್ಘಾಟನೆ ಮಾಡಲಾಗುತ್ತದೆ. ಈ ಬಗ್ಗೆ ಮಾತನಾಡಿರುವ  ಮಾಜಿ ಮೇಯರ್‍‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಮಾತನಾಡಿ, ವಜ್ರಮುನಿ ಅವರ ಜೀವನವನ್ನು ನೋಡಿದಾಗ ಸಿನಿಮಾದಲ್ಲಿ ಎಷ್ಟು ಭಯಂಕರವಾಗಿ ನಟನೆ ಮಾಡುತ್ತಿದ್ದರೋ, ನಿಜ ಜೀವನದಲ್ಲಿ ಅಷ್ಟೇ ಸೌಮ್ಯ ಸ್ವಭಾವದ ವ್ಯಕ್ತಿಯಾಗಿ ಜೀವನ ಮಾಡುತ್ತಿದ್ದರು. ಎಂದಿಗೂ ಸಾಮಾಜಿಕ ಉನ್ನತಿಗೆ ಶ್ರಮಿಸುತ್ತಿದ್ದರು. ಈ ರಸ್ತೆಗೆ ವಜ್ರಮುನಿ ಅವರ ಹೆಸರನ್ನು ನಾಮಕರಣ ಮಾಡುವ ಉದ್ದೇಶ ಈಡೇರುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಮಾಹಿತಿ ನೀಡಿದರು.

17 ವರ್ಷದ ನಂತರ ರಸ್ತೆಗೆ ನಾಮಕರಣ: ನಮ್ಮ ತಂದೆ ನಿಧನವಾಗಿ 17 ವರ್ಷಗಳು ಕಳೆದಿವೆ. ಈಗ ಬೆಂಗಳೂರಿನ ಒಂದು ರಸ್ತೆಗೆ ನಮ್ಮ ತಂದೆಯ ಹೆಸರು ನಾಮಕರಣ ಮಾಡುತ್ತಿರುವುದಕ್ಕೆ ಸಂತಸ ಆಗುತ್ತಿದೆ. ನಿರಂತರವಾಗಿ ಕಲೆ ಮತ್ತು ಸಾಂಸ್ಕೃತಿಕ ಸಂಘದಿಂದ ಬಿಬಿಎಂಪಿ ಮೇಲೆ ಒತ್ತಡ ಹೇರುತ್ತಾ ಬರಲಾಗುತ್ತಿತ್ತು. ಈಗ ಬಹದಿನಗಳ ಕನಸು ನನಸಾಗುತ್ತಿದೆ. ನಮ್ಮ ತಂದೆಯ ನಟನೆಯ ಜೊತೆಗೆ ಹಲವು ಸಮಾಜಿಕ ಅಭಿವೃದ್ಧಿಯ ಕಾರ್ಯಗಳಲ್ಲಿಯೂ ಭಾಗಿಯಾಗುತ್ತಿದ್ದರು. ಅವರು ನಿಜ ಜೀವನದಲ್ಲಿ ಪಾಲಿಸುತ್ತಿದ್ದ ಆದರ್ಶಗಳು ಹಾಗೂ ಸಿನಿಮಾದಲ್ಲಿ ನಟನೆ ವೇಳೆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದ ಬಗ್ಗೆ ಮಾಹಿತಿ ಹಂಚಿಕೊಂಡದರು. ಈಗ ಅವರ ನೆನಪುಗಳನ್ನು ಮೆಲುಕು ಹಾಕಲು ಮತ್ತು ಆದರ್ಶಗಳನ್ನು ಪಾಲಿಸಲು ರಸ್ತೆಯ ನಾಮಕರಣದಿಂದ ಸಹಾಯಕವಾಗಲಿದೆ ಎಂದು ವಜ್ರಮುನಿ ಅವರ ಪುತ್ರ ವಿ. ಜಗದೀಶ್‌ ಹೇಳಿದರು.

ವಜ್ರಮುನಿ ಟೈಟಲ್’ಗೆ ಹೆಂಡತಿ, ಮಗನ ವಿರೋಧ

ವಜ್ರಮುನಿ ಅವರ ಸಿನಿಮಾ ಜೀವನ: ಸ್ಯಾಂಡಲ್‌ವುಡ್‌ನ ಬೆಳ್ಳಿ ತೆರೆಯಲ್ಲಿ ಸತತ 30 ವರ್ಷಗಳ ಕಾಲ ನಟನಾ ಸೇವೆ ಮಾಡಿದ್ದಾರೆ. ಅವರ ತಂದೆ ಆರ್. ವಜ್ರಪ್ಪ ಅವರು ರಾಜಕೀಯ ಹಿನ್ನೆಲೆವುಳ್ಳವರು ಆಗಿದ್ದು, ನಾಲ್ಕು ಬಾರಿ ಕಾರ್ಪೋರೇಟರ್‍‌ ಆಗಿದ್ದರು. ಇನ್ನು ಅವರ ಚಿಕ್ಕಪ್ಪ ದಯಾನಂದ ಸಾಗರ್‍ ಅವರು ರಾಜಕಾರಣಿ ಮತ್ತು ಶಿಕ್ಷಣ ತಜ್ಞ ‌ಆಗಿದ್ದರು. ಆದರೂ, ವಜ್ರಮುನಿ ಅವರು ರಾಜಕೀಯ ಮತ್ತು ಶಿಕ್ಷಣದಲ್ಲಿ ಗುರುತಿಸಿಕೊಳ್ಳದೇ ನಟನಾ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದರು. ರಂಗ ಕಲಾವಿದರಾಗಿ ವಜ್ರಮುನಿ ಕಣಗಾಲ್ ಪ್ರಭಾಕರಶಾಸ್ರಿ ಅವರ 'ಪ್ರಚಂಡ ರಾವಣ' ಪಾತ್ರದ ಮೂಲಕ ಹೆಚ್ಚು ಜನಮನ್ನಣೆ ಗಳಿಸಿದ್ದರು. ಸ್ಯಾಂಡ್‌ವುಡ್‌ನ ಬೆಳ್ಳಿ ತಾರೆಗಳಾದ ಡಾ. ರಾಜ್‌ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಮತ್ತು ಶಂಕರ್‍‌ನಾಗ್‌ ಸೇರಿ ಅನೇಕ ನಾಯಕರ ಚಿತ್ರಗಳಲ್ಲಿ ಪ್ರಬಲ ಖಳನಾಯಕನಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಅವರ ವಿಶಿಷ್ಠ ನಗು, ನಡವಳಿಕೆ ಹಾಗೂ ಭಯ ಪಡಿಸುವ ನೋಟದ ಬಗ್ಗೆ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

ಕನ್ನಡದ ಪ್ರಮುಖ ಚಿತ್ರಗಳಾದ ಬಬ್ರುವಾಹನ, ಬಂಗಾರದ ಮನುಷ್ಯ, ಬಂಗಾರದ ಪಂಜರ, ಸಂಪತ್ತಿಗೆ ಸವಾಲ್, ಗಿರಿಕನ್ಯೆ, ಬಹದ್ದೂರ್‍‌ ಗಂಡು, ಶಂಕರ್‍‌ ಗುರು ಸೇರಿ ಅನೇಕ ಬ್ಲಾಕ್‌ ಬಸ್ಟರ್‍‌ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.  ಅವರು ತಮ್ಮ 61ನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣದಿಂದಾಗಿ 2006ರಲ್ಲಿ ಸಾವನ್ನಪ್ಪಿದರು. 

Follow Us:
Download App:
  • android
  • ios