ಬೆಳಗಾವಿ ಬೈಎಲೆಕ್ಷನ್: 'ಜಾರಕಿಹೊಳಿ ಬ್ರದರ್ಸ್ ಪ್ರಚಾರಕ್ಕೆ ಬಂದೇ ಬರ್ತಾರೆ'
ಎಸ್ಐಟಿಯಿಂದ ಸಿಡಿ ಪ್ರಕರಣ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ನೋಡೋಣ| ಯಾವುದೇ ರೀತಿಯ ಮುಜುಗರ ಬಂದರೂ ಸಹಿಸಿಕೊಳ್ಳುವ ಶಕ್ತಿ ಮಾಜಿ ಸಚಿವರಿಗೆ ದೇವರು ಕೊಟ್ಟಿದ್ದಾನೆ| ಸದ್ಯಕ್ಕೆ ಉಪಚುನಾವಣೆ ಮಾಡೋಣ. ಅದರ ಬಗ್ಗೆ ಚರ್ಚೆ ಬೇಡ: ಉಮೇಶ ಕತ್ತಿ|
ಬೆಳಗಾವಿ(ಮಾ.31): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕೆ ಬಂದೇ ಬರುತ್ತಾರೆ ಎಂದು ಆಹಾರ ಮತ್ತು ನಾಗರಿಕ ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಬರುತ್ತಾರೆ. ಅಲ್ಲದೆ, ಅವರ ಸಹೋದರ ಭೀಮಶಿ ಜಾರಕಿಹೊಳಿ ಸಹ ಪ್ರಚಾರಕ್ಕೆ ಬಂದರೂ ಬರಬಹುದು ಎಂದರು.
CD ಕೇಸ್ ಟೆನ್ಷನ್ ನಡುವೆ ಗೋಕಾಕ್ಗೆ ಸಾಹುಕಾರ್..!
ಇದೇ ವೇಳೆ ಮಾತನಾಡುವ ಭರದಲ್ಲಿ ಸಚಿವ ಉಮೇಶ ಕತ್ತಿ ಅವರು, ಬಾಯಿ ತಪ್ಪಿ ಸತೀಶ್ ಜಾರಕಿಹೊಳಿ ಪ್ರಚಾರಕ್ಕೆ ಬರ್ತಾರೆ ಎಂದರು. ಸಿಡಿ ಪ್ರಕರಣ ಎಸ್ಐಟಿಯಿಂದ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ನೋಡೋಣ. ಯಾವುದೇ ರೀತಿಯ ಮುಜುಗರ ಬಂದರೂ ಸಹಿಸಿಕೊಳ್ಳುವ ಶಕ್ತಿ ಮಾಜಿ ಸಚಿವರಿಗೆ ದೇವರು ಕೊಟ್ಟಿದ್ದಾನೆ. ಈಗ ಸದ್ಯಕ್ಕೆ ಉಪಚುನಾವಣೆ ಮಾಡೋಣ. ಅದರ ಬಗ್ಗೆ ಚರ್ಚೆ ಬೇಡ ಎಂದರು.
ಸಿಡಿ ಪ್ರಕರಣ ಉಪಚುನಾವಣೆಯಲ್ಲಿ ಬಿಜೆಪಿಗೆ ಮೈನಸ್ ಆಗುತ್ತೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕತ್ತಿ, ಸಿದ್ದರಾಮಯ್ಯ ವಿಪಕ್ಷ ನಾಯಕರು, ಕಾಂಗ್ರೆಸ್ ಪಕ್ಷದ ಹಿರಿಯರು ಅವರಿಗೆ ಮಾತನಾಡಲು ಬೇರೆ ವಿಷಯ ಇಲ್ಲ. ಹೀಗಾಗಿ ಮಾತನಾಡುತ್ತಾರೆ ಎಂದರು.