ಮುತ್ತೈದೆಯರಿಗೆ ಮಡಿಲು ತುಂಬುವ ಶ್ರೇಷ್ಠ ಕಾರ್ಯಕ್ರಮ ಮಾಡುವ ಮೂಲಕ ಶ್ರೀಸಿದ್ದಿವಿನಾಯಕ ಸೇವಾಮಂಡಳಿ ಕರ್ನಾಟಕದ ಸಂಸ್ಕೃತಿ ಪರಂಪರೆ ಉಳಿಸಿಕೊಂಡು ಬಂದಿದೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.

 ತುಮಕೂರು : ಮುತ್ತೈದೆಯರಿಗೆ ಮಡಿಲು ತುಂಬುವ ಶ್ರೇಷ್ಠ ಕಾರ್ಯಕ್ರಮ ಮಾಡುವ ಮೂಲಕ ಶ್ರೀಸಿದ್ದಿವಿನಾಯಕ ಸೇವಾಮಂಡಳಿ ಕರ್ನಾಟಕದ ಸಂಸ್ಕೃತಿ ಪರಂಪರೆ ಉಳಿಸಿಕೊಂಡು ಬಂದಿದೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.

Add Asianetnews Kannada as a Preferred SourcegooglePreferred

ವಿನಾಯಕನಗರದಲ್ಲಿರುವ ಸಿದ್ದಿ ವಿನಾಯಕ ಸೇವಾ ಮಂಡಳಿಯಲ್ಲಿ ಮುತ್ತೈದೆಯರಿಗೆ ಮಡಿಲು ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹೆಣ್ಣು ಮಕ್ಕಳಿಗೆ ಮಡಿಲು ತುಂಬುವ ಸಂಸ್ಕೃತಿಯನ್ನು ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿ ಈ ಬಾರಿ 50 ಮುತ್ತೈದೆಯರಿಗೆ ಸಿದ್ದಿವಿನಾಯಕನ ಸನ್ನಿಧಿಯಲ್ಲಿ ಸಾಮೂಹಿಕವಾಗಿ ಮಡಿಲು ತುಂಬಿ ಸಂಸ್ಕೃತಿ, ಸಂಸ್ಕಾರ ಮೆರೆದಿದ್ದಾರೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಪತ್ನಿಯೊಡನೆ ಭಾಗವಹಿಸುವುದು ತುಂಬಾ ಸಂತೋಷವಾಗಿದೆ. ಇಂತಹ ಸಂದರ್ಭವನ್ನು ಕಲ್ಪಿಸಿಕೊಟ್ಟಂತಹ ಸೇವಾ ಮಂಡಳಿಯವರಿಗೆ ನಾವು ಋಣಿಯಾಗುತ್ತೇವೆ. ಇತ್ತೀಚೆಗೆ ಹೆಣ್ಣುಮಕ್ಕಳು ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಇದಲ್ಲದೆ ಬ್ಯಾಂಕುಗಳಲ್ಲೂ, ಬಸ್ ನಿಲ್ದಾಣಗಳಲ್ಲೂ ಹೆಣ್ಣುಮಕ್ಕಳೇ ಹೆಚ್ಚಾಗಿ ಕಾಣುತ್ತಿದ್ದಾರೆ. ಈ ಕಾರ್ಯಕ್ರಮದಲ್ಲೂ ಸಹ ಹೆಣ್ಣುಮಕ್ಕಳದ್ದೇ ಮೇಲುಗೈ ಕಾಣುತ್ತಿದೆ. ಹೆಣ್ಣು ಮಕ್ಕಳಿಗೆ ಗೌರವ ಕೊಡುವ ಸಂಪ್ರದಾಯವನ್ನು ನಾವು ರೂಢಿಸಿಕೊಂಡು ಹೋಗಬೇಕಾದ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದರು.

ಶ್ರೀಸಿದ್ದಿವಿನಾಯಕ ಸೇವಾ ಮಂಡಳಿ ಉಪಾಧ್ಯಕ್ಷ ಹೆಚ್.ಆರ್.ನಾಗೇಶ್ ಮಾತನಾಡಿ, ಸಿದ್ದಿವಿನಾಯಕ ಸೇವಾ ಮಂಡಳಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮ 47 ವರ್ಷಗಳನ್ನು ಪೂರೈಸುತ್ತಿದೆ. ಇನ್ನೆರಡು ವರ್ಷ ಕಳೆದರೆ 50 ವರ್ಷಕ್ಕೆ ತಲುಪಲಿದ್ದೇವೆ ಎಂದರು.

ರಾಜ್ಯದ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರ ಧರ್ಮಪತ್ನಿ ಆಗಮಿಸಿ ಗಣೇಶೋತ್ಸವದಲ್ಲಿ ಆಶೀರ್ವಾದ ಪಡೆದಿದ್ದರು. ಕಳೆದ ವರ್ಷ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಧರ್ಮಪತ್ನಿಯವರು ಸಹ ಬಂದು ಆಶೀರ್ವಾದ ಪಡೆದಿದ್ದರು. ಈ ವೇದಿಕೆಯಲ್ಲಿ ಅನೇಕ ಮಂದಿ ಚಲನಚಿತ್ರ ನಟರು, ರಾಜಕೀಯ ಗಣ್ಯಮಾನ್ಯರು, ಉದ್ಯಮಿಗಳು ಗಣೇಶೋತ್ಸವದ ಆಶೀರ್ವಾದ ಪಡೆದು ಉತ್ತಮ ಸ್ಥಾನಗಳಲ್ಲಿದ್ದಾರೆ ಎಂದರು.

15ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ಸಿದ್ಧಗಂಗಾ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

18ರಂದು ನಡೆಯಲಿರುವ ಗಣೇಶೋತ್ಸವದ ಮೆರವಣಿಗೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.

ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಟಿ.ಹೆಚ್.ಪ್ರಸನ್ನಕುಮಾರ್ ಮಾತನಾಡಿ, ಸಾಮೂಹಿಕ ಮಡಿಲು ತುಂಬುವ ಕಾರ್ಯಕ್ರಮದಲ್ಲಿ 50 ಮಂದಿ ಮುತ್ತೈದೆಯರಿಗೆ ಅರಿಶಿನ ಕುಂಕುಮ, ಬಳೆ, ಸೀರೆ, ಸೇರಿದಂತೆ 1500 ರು. ಗಳ 25 ವಸ್ತುಗಳನ್ನೊಳಗೊಂಡ ಕಿಟ್‌ನೊಂದಿಗೆ ಮಡಿಲು ತುಂಬುವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದರು.

ಸಮಿತಿಯ ಅಧ್ಯಕ್ಷರಾದ ಜಿ.ಹೆಚ್.ಪರಮಶಿವಯ್ಯ ಅನಾರೋಗ್ಯದ ಅನುಪಸ್ಥಿತಿಯಲ್ಲಿ ಅವರ ಶ್ರೀಮತಿ ಮಡಿಲು ತುಂಬುವ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ ಎಂದು ಹೇಳಿದರು. ಮುಂದಿನ ವರ್ಷದಿಂದ 5 ತಿಂಗಳಿನಿಂದ 8 ತಿಂಗಳ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಕಲ್ಪನ ಹಾಲಪ್ಪ ಮಾತನಾಡಿ, ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಇಂತಹ ಕಾರ್ಯಕ್ರಮಗಳಲ್ಲಿ ನಾವು ಕಾಣಬಹುದು. ಸಿದ್ದಿ ವಿನಾಯಕ ಸೇವಾ ಮಂಡಳಿಯವರು ಮುತ್ತೈದೆಯರಿಗೆ ಹಮ್ಮಿಕೊಂಡಿರುವ ಮಡಿಲು ತುಂಬುವ ಕಾರ್ಯಕ್ರಮ ತುಂಬಾ ಪವಿತ್ರವಾದುದು ಎಂದರು.

ಕಾರ್ಯಕ್ರಮದಲ್ಲಿ ಸಿದ್ದಿವಿನಾಯಕ ಸೇವಾ ಮಂಡಲಿ ಉಪಾಧ್ಯಕ್ಷ ಹೆಚ್.ಆರ್.ನಾಗೇಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಟಿ.ಹೆಚ್.ಪ್ರಸನ್ನಕುಮಾರ್, ಕಾರ್ಯದರ್ಶಿ ರಾಘವೇಂದ್ರ ರಾವ್, ಜಂಟಿ ಕಾರ್ಯದರ್ಶಿ ಜಗಜ್ಯೋತಿ ಸಿದ್ದರಾಮಯ್ಯ, ಖಜಾಂಚಿ ಪ್ರಭು, ಕಲ್ಪನ ಹಾಲಪ್ಪ, ನಿರ್ದೇಶಕರಾದ ಎಂ.ಲಿಂಗಪ್ಪ, ಜಿ.ಎಸ್.ಸಿದ್ದರಾಜು, ಕೆ.ನರಸಿಂಹಮೂರ್ತಿ, ಟಿ.ಆರ್ ನಟರಾಜು, ಟಿ.ಹೆಚ್.ಮಹೇಶ್, ಜಿ.ಸಿ.ವಿರುಪಾಕ್ಷ, ಡಾ.ಎಸ್.ವಿ.ವೆಂಕಟೇಶ್, ಹೇಮರಾಜು ಸಿಂಚ, ಎ.ಎಸ್.ವಿಜಯಕುಮಾರ್, ಟಿ.ಆರ್.ವೆಂಕಟೇಶ್‌ಬಾಬು, ಟಿ.ಕೆ.ಪದ್ಮರಾಜ್, ಎಂ.ಎನ್.ಉಮಾಶಂಕರ್, ಆರ್.ಎಲ್.ರಮೇಶ್‌ಬಾಬು, ಡಾ.ಅನುಸೂಯ ರುದ್ರಪ್ರಸಾದ್, ರೇಣುಕಾ ಪರಮೇಶ್, ಇಂದ್ರಾಣಿ ಉಪಸ್ಥಿತರಿದ್ದರು.