Asianet Suvarna News Asianet Suvarna News

Corruption Case: 60 ಬಿಡಿಎ ಅಧಿಕಾರಿಗಳ ತನಿಖೆಗೆ ಅಸ್ತು

*   ತನಿಖೆ ನಡೆಸಲು ಎಸಿಬಿಗೆ ನಗರಾಭಿವೃದ್ಧಿ ಇಲಾಖೆ ಸಮ್ಮತಿ
*   ಅಪಾರ ಕಡತಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ 
*   ಅಕ್ರಮ ನಡೆದಿರುವುದಕ್ಕೆ ಸಾಕ್ಷ್ಯ ಕಲೆ ಹಾಕಿದ ಎಸಿಬಿ ಅಧಿಕಾರಿಗಳು

Investigation Against 60 BDA Officers on Corruption Case in Bengaluru grg
Author
Bengaluru, First Published Feb 13, 2022, 5:28 AM IST

ಬೆಂಗಳೂರು(ಫೆ.13): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ(BDA) ನಡೆದಿರುವ ಕೋಟ್ಯಂತರ ರು. ಅವ್ಯವಹಾರ ಪ್ರಕರಣ ಸಂಬಂಧ 60 ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ತನಿಖೆ(Probe) ನಡೆಸಲು ನಗರಾಭಿವೃದ್ಧಿ ಇಲಾಖೆಯು ಭ್ರಷ್ಟಾಚಾರ ನಿಗ್ರಹ ದಳಕ್ಕೆ(ACB) ಅನುಮತಿ ನೀಡಿದೆ.

ಮೂಲೆ ನಿವೇಶನ ಅಕ್ರಮ ಪರಭಾರೆ, ನಕಲಿ ಫಲಾನುಭವಿಗಳು, ಬದಲಿ ನಿವೇಶನ(Site) ಸೇರಿದಂತೆ ಬೇರೆ ಬೇರೆ ವಿಧದಲ್ಲಿ ಖಾಸಗಿ ವ್ಯಕ್ತಿಗಳ ಜತೆ ಶಾಮೀಲಾಗಿ ಅಕ್ರಮ(Scam) ಎಸಗಿರುವ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಎಸಿಬಿ ಅಧಿಕಾರಿಗಳು ಬಿಡಿಎ ಕೇಂದ್ರ ಕಚೇರಿ ಮತ್ತು ನಗರದ ವಿವಿಧೆಡೆ ಇರುವ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಪಾರ ಕಡತಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಲಾಯಿತು. ಪರಿಶೀಲನೆ ವೇಳೆ ಕೋಟ್ಯಂತರ ರು. ಅಕ್ರಮ ಎಸಗಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಬಿಡಿಎ ಅಧಿಕಾರಿ, ಸಿಬ್ಬಂದಿ ವಿರುದ್ಧ ವಿಚಾರಣೆ ನಡೆಸಲು ಅನುಮತಿ ಕೋರಿ ಸಕ್ಷಮ ಪ್ರಾಧಿಕಾರವಾಗಿರುವ ನಗರಾಭಿವೃದ್ಧಿ ಇಲಾಖೆಗೆ(Department of Urban Development) ಪತ್ರ ಬರೆಯಲಾಗಿತ್ತು.

BDA Scam: ನಕಲಿ ದಾಖಲೆ, ಲಂಚಾವತಾರ, 3 ತಿಂಗಳಲ್ಲಿ 100 ಕ್ಕೂ ಹೆಚ್ಚು ದೂರುಗಳು ದಾಖಲು

ನಗರಾಭಿವೃದ್ಧಿ ಇಲಾಖೆಯು ಅಧಿಕಾರಿ, ಸಿಬ್ಬಂದಿ ವಿರುದ್ಧ ವಿಚಾರಣೆ ನಡೆಸಲು ಇದೀಗ ಅನುಮತಿ ನೀಡಿದೆ. ಪರಿಣಾಮ 60 ಅಧಿಕಾರಿ, ಸಿಬ್ಬಂದಿ ಸಂಕಷ್ಟ ಎದುರಾಗಿದೆ. ಕೋಟ್ಯಂತರ ರು. ಅಕ್ರಮ ನಡೆದಿರುವುದಕ್ಕೆ ಎಸಿಬಿ ಅಧಿಕಾರಿಗಳು ಸಾಕ್ಷ್ಯವನ್ನು ಕಲೆ ಹಾಕಿದ್ದಾರೆ ಎಂದು ಹೇಳಲಾಗಿದೆ. ತನಿಖೆ ವೇಳೆ ನಿವೇಶನಗಳ ನಕಲಿ ದಾಖಲೆ ಸೃಷ್ಟಿಸಿ ಅಪಾರ ಪ್ರಮಾಣದಲ್ಲಿ ಭ್ರಷ್ಟಾಚಾರ(Corruption) ಎಸಗಿರುವುದು ಗೊತ್ತಾಗಿದೆ ಎಂದು ಹೇಳಲಾಗಿದೆ.

ಬಿಡಿಎಯಲ್ಲಿ 1500 ಕೋಟಿ ಅಕ್ರಮ ಪತ್ತೆ!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ(Bengaluru Development Authority) ನಡೆದಿರುವುದು 200-300 ಕೋಟಿ ರು. ಮೌಲ್ಯದ ಭೂ ಹಗರಣವಲ್ಲ. ಅದು ಬರೋಬ್ಬರಿ 1500 ಕೋಟಿ ರು.ಗಳಿಗೂ ಮಿಗಿಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖೆಯಲ್ಲಿ ಪುರಾವೆ ಪತ್ತೆಯಾಗಿರುವ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

ಮೂಲೆ ನಿವೇಶನ ಅಕ್ರಮ ಪರಭಾರೆ, ನಕಲಿ ಫಲಾನುಭವಿಗಳು, ಬದಲಿ ನಿವೇಶನ, ಹಸಿರು ವಲಯದಲ್ಲಿ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌(Real Estate) ಕಂಪನಿಗಳಿಗೆ ವಿಲ್ಲಾ ನಿರ್ಮಾಣಕ್ಕೆ ಅವಕಾಶ ಹೀಗೆ ನಾನಾ ವಿಧದಲ್ಲಿ ಖಾಸಗಿ ವ್ಯಕ್ತಿಗಳ ಜತೆ ಸೇರಿ ಬಿಡಿಎ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಎಸಿಬಿ ಹೇಳಿದೆ.

60 ಮಂದಿ ಭಾಗಿ:

ಮೂರು ತಿಂಗಳ ಹಿಂದೆ ಅಕ್ರಮ ಭೂ ವ್ಯವಹಾರಗಳ ದೂರುಗಳ ಹಿನ್ನೆಲೆಯಲ್ಲಿ ನಗರದ ಅರಮನೆ ರಸ್ತೆಯಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಕೇಂದ್ರ ಹಾಗೂ ನಗರದ ವಿವಿಧೆಡೆ ಇರುವ ವಲಯ ಕಚೇರಿಗಳ ಮೇಲೆ ದಾಳಿ ಎಸಿಬಿ ದಾಳಿ ನಡೆಸಿತು. ಆ ದಾಳಿ ವೇಳೆ ಅಪಾರ ಪ್ರಮಾಣದ ಕಡತಗಳನ್ನು ವಶಕ್ಕೆ ಪಡೆದಿದ್ದ ಎಸಿಬಿ, ಬಿಡಿಎ ಭೂ ಹಗರಣ ಶೋಧನೆ ಆರಂಭಿಸಿತು. ಇದುವರೆಗೆ ತನಿಖೆಯಲ್ಲಿ 1500 ಕೋಟಿ ರು. ಅಧಿಕ ಮೌಲ್ಯದ ಅಕ್ರಮ ನಡೆದಿರುವುದಕ್ಕೆ ಸಾಕ್ಷ್ಯಗಳು ಪತ್ತೆಯಾಗಿವೆ. ಅಲ್ಲದೆ ಈ ಹಗರಣದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಸೇರಿ 60 ಮಂದಿ ಪಾಲ್ಗೊಂಡಿದ್ದಾರೆ ಎಂದು ಎಸಿಬಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಕೆಂಪೇಗೌಡ ಲೇಔಟ್‌ ಕಾಮಗಾರಿ ಪರಿಶೀಲನೆಗೆ 3ನೇ ಸಂಸ್ಥೆ ನೇಮಕ!

ಒಂದು ಊರಿನಲ್ಲಿ 185 ಕೋಟಿ ಗುಳುಂ:

ಕೆಂಗೇರಿ ಹೋಬಳಿ ಭೀಮನಕುಪ್ಪೆಯಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣ ಸಂಬಂಧ 262 ಎಕರೆ ಭೂ ಸ್ವಾಧೀನದಲ್ಲಿ ಬಿಡಿಎ ಕೆಲ ಅಧಿಕಾರಿಗಳು ದೊಡ್ಡ ಪ್ರಮಾಣದ ಅಕ್ರಮ ನಡೆದಿಸಿರುವುದು ಪತ್ತೆಯಾಗಿದೆ. ಈ ಗ್ರಾಮದ ಸರ್ಕಾರಿ ಭೂಮಿಯನ್ನೇ ಖಾಸಗಿ ಜಮೀನು ಎಂದು ತೋರಿಸಿ ಸರ್ಕಾರದಿಂದ 185 ಕೋಟಿ ರು. ಭೂ ಪರಿಹಾರವನ್ನು ಅಧಿಕಾರಿಗಳು ಪಡೆದಿದ್ದಾರೆ. ಇದಕ್ಕಾಗಿ ಭಾರಿ ಕರಾಮತ್ತು ನಡೆಸಿ 71 ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲೆ(Fake Docouments) ಸೃಷ್ಟಿಸಿದ್ದಾರೆ.

ಅರ್ಕಾವತಿ ಬಡಾವಣೆ ಭೂ ಸ್ವಾಧೀನದ(Land Acquisition) ಬಗ್ಗೆ ಪರಿಶೀಲಿಸಿದಾಗ 71 ಜನರ ಹೆಸರಿನಲ್ಲಿ ನಕಲಿ ದಾಖಲೆಗಳು ಸಿಕ್ಕಿವೆ. ಈ ಸಂಬಂಧ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದೇ ರೀತಿ ಕೆಂಗೇರಿ ಹೋಬಳಿ ಮತ್ತೊಂದು ಕನ್ನಹಳ್ಳಿ ಗ್ರಾಮದಲ್ಲಿ ಸಹ 15 ಕೋಟಿ ರು. ಮೌಲ್ಯದ ಭೂ ಅಕ್ರಮ ನಡೆದಿದೆ. ನಗರ ಹೊರವಲಯದ ಅರೆ ಗ್ರಾಮೀಣ ಪ್ರದೇಶದಲ್ಲಿ ಕೆಂಪೇಗೌಡ, ಅರ್ಕಾವತಿ ಹಾಗೂ ಶಿವರಾಮ ಕಾರಂತ ಬಡಾವಣೆಗಳ ಅಭಿವೃದ್ಧಿ ಯೋಜನೆಯಲ್ಲಿ ಕೋಟ್ಯಂತರ ರು. ಭೂ ಪರಿಹಾರ ಹೆಸರಿನಲ್ಲಿ ಅನ್ಯರ ಪಾಲಾಗಿರುವ ಬಗ್ಗೆ ಅನುಮಾನವಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
 

Follow Us:
Download App:
  • android
  • ios