ಜೂಜು ಪತ್ತೆ ಹಚ್ಚದ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್ ತಲೆ ದಂಡ
ಮಹದೇವಪುರದ ಹೋಟೆಲ್ನಲ್ಲಿ ಆಂಧ್ರದವರಿಂದ ಜೂಜು| ಬೆಂಗಳೂರು ಇನ್ ಹೋಟೆಲ್ನಲ್ಲಿ ಜೂಜು ಅಡ್ಡೆ ಮೇಲೆ ಸಿಸಿಬಿ ದಾಳಿ| ಈ ಅಡ್ಡೆ ಬಗ್ಗೆ ಮಾಹಿತಿ ಸಂಗ್ರಹಿಸದೆ ಸ್ಥಳೀಯ ಠಾಣೆ ಪೊಲೀಸರು ನಿರ್ಲಕ್ಷ್ಯಿಸಿದ್ದಾರೆ ಎಂದು ಸಿಸಿಬಿ ಡಿಸಿಪಿ ನೀಡಿದ ವರದಿ ಆಧರಿಸಿ ಅಮಾನತುಗೊಳಿಸಿದ ಆಯುಕ್ತರು|
ಬೆಂಗಳೂರು(ಅ.13): ತಮ್ಮ ವ್ಯಾಪ್ತಿಯಲ್ಲಿ ಹೊರ ರಾಜ್ಯಗಳಿಂದ ಜನರು ಬಂದು ಜೂಜು ಅಡ್ಡೆ ನಡೆಸುತ್ತಿದ್ದರೂ ಪತ್ತೆ ಹಚ್ಚದೆ ಕರ್ತವ್ಯ ಲೋಪವೆಸಗಿದ ಆರೋಪದ ಮೇರೆಗೆ ಮಹದೇವಪುರ ಠಾಣೆ ಇನ್ಸ್ಪೆಕ್ಟರ್ ಹಾಗೂ ಹೆಡ್ ಕಾನ್ಸ್ಟೇಬಲ್ ಅವರನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೋಮವಾರ ಅಮಾನತುಗೊಳಿಸಿದ್ದಾರೆ.
ಇನ್ಸ್ಪೆಕ್ಟರ್ ಅಶ್ವತ್ಥ್ ನಾರಾಯಣಸ್ವಾಮಿ ಹಾಗೂ ಹೆಡ್ ಕಾನ್ಸ್ಟೇಬಲ್ ಜಯಕಿರಣ್ ತಲೆದಂಡವಾಗಿದ್ದು, ಮಹದೇವಪುರ ಠಾಣಾ ವ್ಯಾಪ್ತಿಯ ಬೆಂಗಳೂರು ಇನ್ ಹೋಟೆಲ್ನಲ್ಲಿ ಜೂಜು ಅಡ್ಡೆ ಮೇಲೆ ಭಾನುವಾರ ಸಿಸಿಬಿ ದಾಳಿ ನಡೆಸಿ 95.4 ಲಕ್ಷ ಜಪ್ತಿ ಮಾಡಿತ್ತು. ಈ ಅಡ್ಡೆ ಬಗ್ಗೆ ಮಾಹಿತಿ ಸಂಗ್ರಹಿಸದೆ ಸ್ಥಳೀಯ ಠಾಣೆ ಪೊಲೀಸರು ನಿರ್ಲಕ್ಷ್ಯಿಸಿದ್ದಾರೆ ಎಂದು ಸಿಸಿಬಿ ಡಿಸಿಪಿ ನೀಡಿದ ವರದಿ ಆಧರಿಸಿ ಆಯುಕ್ತರು ಅಮಾನತುಗೊಳಿಸಿದ್ದಾರೆ.
ಹುಬ್ಬಳ್ಳಿ- ಧಾರವಾಡ: IPS ಅಧಿಕಾರಿಗಳ ಕಿತ್ತಾಟಕ್ಕೆ ಸಾರ್ವಜನಿಕರ ಆಕ್ರೋಶ
ಮಾರತ್ತಹಳ್ಳಿಯ ಬೆಂಗಳೂರು ಇನ್ ಹೋಟೆಲ್ನ ವಿಶಾಲ ಕೊಠಡಿಯಲ್ಲಿ 60ರಿಂದ 70 ಜನರು ಜೂಜಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿ ಸಿಸಿಬಿ ಜೂಜಾಟದಲ್ಲಿ ತೊಡಗಿದ್ದ 80 ಜನರನ್ನು ವಶಕ್ಕೆ ಪಡೆದಿತ್ತು. ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಲು ಆರೋಪಿಗಳನ್ನು ಮಹದೇವಪುರ ಠಾಣಾಧಿಕಾರಿಗಳ ಸುಪರ್ದಿಗೆ ಸಿಸಿಬಿ ನೀಡಿತ್ತು. ಆದರೆ ಇನ್ಸ್ಪೆಕ್ಟರ್ ಅಶ್ವತ್ಥ್ ನಾರಾಯಣಸ್ವಾಮಿ ಹಾಗೂ ಸ್ಪೆಷಲ್ ಬ್ರ್ಯಾಂಚ್ ಕರ್ತವ್ಯನಿರ್ವಹಿಸುವ ಹೆಡ್ ಕಾನ್ಸ್ಟೇಬಲ್ ಜಯಕಿರಣ್, ಈ ರೀತಿ ಜೂಜಾಟ ಮಾಹಿತಿ ಸಂಗ್ರಹಿಸದೆ ತೀವ್ರ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆಯುಕ್ತರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.