ಹನಗೋಡು ಹೋಬಳಿಯ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಮನೆಗಳ ಕಾಮಗಾರಿಯನ್ನು ಶಾಸಕ ಎಚ್‌.ಪಿ. ಮಂಜುನಾಥ್‌ ಹಾಗೂ ಜಿಪಂ ಸಿಇಒ ಪೂರ್ಣಿಮಾ ಪರಿಶೀಲಿಸಿದರು.

ಹುಣಸೂರು (ನ.6): ಹನಗೋಡು ಹೋಬಳಿಯ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ನಾಲ್ಕನೇ ಬ್ಲಾಕ್‌ನಲ್ಲಿ ನಿರ್ಮಾಣ ಮಾಡುತ್ತಿರುವ ಮನೆಗಳ ಕಾಮಗಾರಿಯನ್ನು ಶಾಸಕ ಎಚ್‌.ಪಿ. ಮಂಜುನಾಥ್‌ ಹಾಗೂ ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಇಒ ಪೂರ್ಣಿಮಾ ಅವರು ಗಿರಿಜನ ಆಶ್ರಮ ಶಾಲಾ ಆವರಣದಲ್ಲಿ ಪಂಚಾಯಿತಿ ಪಿಡಿಒಗಳು ಹಾಗೂ ವಸತಿ ಫಲಾನುಭವಿಗಳ ಸಭೆಯಲ್ಲಿ ಮಾತನಾಡಿ, ಸಕಾಲದಲ್ಲಿ ವಸತಿ ಫಲಾನುಭವಿಗಳ ಮನೆಗಳ ಕಾಮಗಾರಿ ಮುಗಿದ ತಕ್ಷಣವೇ ಜಿಪಿಎಸ್‌ ಮಾಡಿಕೊಡಬೇಕೆಂದು ಗ್ರಾಪಂ ಪಿಡಿಒಗಳಿಗೆ ಸೂಚಿಸಿದರು. ಅಲ್ಲದೇ ಈ ಮನೆ ನಿರ್ಮಾಣ ಯೋಜನೆಯು ವಿಶಿಷ್ಟರೀತಿಯಲ್ಲಿ ಕಾರ್ಯರೂಪ ಗೊಳ್ಳುತ್ತಿರುವುದರಿಂದ ಮನೆ ನಿರ್ಮಾಣ ಲೈಸನ್ಸ್‌ ಶುಲ್ಕವನ್ನು ನೂರು ಮಾತ್ರ ಪಡೆಯಿರಿ, ಜೊತೆಗೆ ಶೌಚಾಲಯ ನಿರ್ಮಾಣದ ಗುಂಡಿಯ ಸಾಮಗ್ರಿಗಳ ಖರೀದಿಗೆ ಶೇ. 25 ರ ಅನುದಾನವನ್ನು ನೀಡಬೇಕೆಂದು ಸೂಚಿಸಿ ಬ್ಯಾಂಕ್‌ ಅಧಿಕಾರಿಗಳು ಸಹ ವಸತಿ ಯೋಜನೆಯ ಹಣವನ್ನು ಬೇರೆ ಯಾವುದೇ ಸಾಲ ಸೌಲಭ್ಯ ಜಮಾ ಮಾಡಿಕೊಳ್ಳದೆ ಫಲಾನುಭವಿಗಳ ಮನೆ ನಿರ್ಮಾಣ ಕಾರ್ಯಕ್ಕೆ ಸಹಕರಿಸಬೇಕೆಂದು ಸ್ಥಳದಲ್ಲಿದ್ದ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ದಿನೇಶ್‌ ಅವರಿಗೆ ಸಲಹೆ ನೀಡಿದರು.

ಶಾಸಕ ಎಚ್‌.ಪಿ. ಮಂಜುನಾಥ್‌ ಮಾತನಾಡಿ, ಹುಣಸೂರು ತಾಲೂಕಿನಲ್ಲಿ ಪ. ವರ್ಗಗಳ ಕಲ್ಯಾಣ ಇಲಾಖೆಯಿಂದ 28 ಹಾಡಿಗಳ 530 ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗುತ್ತಿದ್ದು, ಪ. ವರ್ಗಗಳ ಕಲ್ಯಾಣ ಇಲಾಖೆ ಮತ್ತು ರಾಜೀವಗಾಂಧಿ ವಸತಿ ನಿಗಮದ ವತಿಯಿಂದ ಪ್ರತಿ ಮನೆಗೆ 3.75 ಲಕ್ಷ ರು. ನೀಡುತ್ತಿದ್ದು, ರವಿಶಂಕರ್‌ ಗುರೂಜಿಯವರ ಹಾರ್ಚ್‌ ಆಫ್‌ ಲೀವಿಂಗ್‌ನ ವರಾಹ ಗ್ರೂಪ್‌ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಮನೆ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ನಾಗಾಪುರ 4ನೇ ಘಟಕದಲ್ಲಿ ಪ್ರಾಯೋಗಿಕವಾಗಿ ನಾಲ್ಕು ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಮನೆಗಳು ಒಪ್ಪಿಗೆ ಆದಲ್ಲಿ ಮಾತ್ರ ಎಲ್ಲ ಮನೆಗಳನ್ನು ಫಲಾನುಭವಿಗಳು ಕಂಪನಿಯವರೊಂದಿಗೆ ಒಡಂಬಡಿಕೆ ಮಾಡಿಕೊಂಡು ನಿರ್ಮಾಣ ಮಾಡಲಾಗುತ್ತದೆ ಎಂದರು.

ಜಮೀನು ವಿವಾದ: ಬುಡಕಟ್ಟು ಮಹಿಳೆಗೆ ಬೆಂಕಿ ಹಚ್ಚಿ ಚಿತ್ರೀಕರಿಸಿದ ದುರುಳರು: ವಿಡಿಯೋ ವೈರಲ್

ಈ ಯೋಜನೆಯಡಿ ನಾಲ್ಕು ಹಂತದಲ್ಲಿ ಅನುದಾನ ಬಿಡುಗಡೆಯಾಗಲಿದ್ದು, ಗಿರಿಜನರು ತಾವೇ ಮುಂದೆ ನಿಂತು ಮನೆ ನಿರ್ಮಾಣಕ್ಕೆ ಮುಂದಾದಲ್ಲಿ ಅಧಿಕಾರಿಗಳು ಸಹಕಾರ ನೀಡಲಿದ್ದಾರೆಂದರು. ಈ ವಿಶಿಷ್ಟಯೋಜನೆಯು ಕಾರ್ಯಗತಗೊಳ್ಳಲು ಜಿಪಂ, ತಾಲೂಕು ಆಡಳಿತ, ಗ್ರಾಪಂ, ಬ್ಯಾಂಕ್‌ಗಳು, ಫಲಾನುಭವಿಗಳು ಒಟ್ಟಾಗಿ ಸೇರಿ ಕಾರ್ಯಪ್ರವೃತ್ತರಾದಾಗ ಮಾತ್ರ ಈ ಯೋಜನೆ ಕಾರ್ಯಗತವಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲರೂ ಸಕಾಲದಲ್ಲಿ ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದು ಸಲಹೆ ನೀಡಿದರು.

ಅರಣ್ಯ ಒತ್ತುವರಿ ಆರೋಪ: ಪಿಎಂ ಆವಾಸ್‌ ಯೋಜನೆಯಲ್ಲಿ ಮಂಜೂರಾದ ಮನೆ ನೆಲಸಮ: ಬುಡಕಟ್ಟು ವ್ಯಕ್ತಿ ನೇಣಿಗೆ ಶರಣು

ತಾಪಂ ಇಒ ಬಿ.ಕೆ. ಮನು, ಎಸ್ಟಿವರ್ಗಗಳ ತಾಲೂಕು ಅಭಿವೃದ್ಧಿ ಅಧಿಕಾರಿ ಬಸವರಾಜು, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ದಿನೇಶ್‌, ಜಿಪಂ ಎಇಇ ನರಸಿಂಹಯ್ಯ, ವಸತಿ ನಿಗಮದ ನ್ಯೂಡಲ್‌ ಅಧಿಕಾರಿ ಲೋಕೇಶ್‌ ಗುರುಪುರ ಗ್ರಾಪಂ ಅಧ್ಯಕ್ಷೆ ರಾಧನಾಗನಾಯಕ, ಕಿರಂಗೂರು ಗ್ರಾಪಂ ಅಧ್ಯಕ್ಷೆ ನಿರ್ವಾಣಿ, ಮಾಜಿ ಅಧ್ಯಕ್ಷ ಪ್ರಶಾಂತ್‌, ಆದಿವಾಸಿ ಮುಖಂಡರಾದ ಜೆ.ಟಿ. ರಾಜಪ್ಪ, ಚಂದ್ರು, ಶಿವಣ್ಣ, ವಸಂತ, ರಾಘು ಇದ್ದರು.