ಬಡವರ ಫೈವ್ ಸ್ಟಾರ್ ಎಂಬುದಾಗಿಯೇ ಕರೆಸಿಕೊಳ್ಳುವಂತ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಹತ್ವದ ಬದಲಾವಣೆಗೆ ಸರ್ಕಾರ ಮುಂದಾಗಿದೆ. ಈಗ ಕ್ಯಾಂಟೀನ್ ಮೆನು ಬದಲಾವಣೆ ಮಾಡುವ ಮೂಲಕ ಇಂದಿರಾ ಕ್ಯಾಂಟೀನ್‌ಗಳನ್ನು ಹೈಟೆಕ್ ಮಾಡಲು ಮುಂದಾಗಿದೆ. 

ಬೆಂಗಳೂರು (ಜು.13): ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ನಂತರ ಹಿಂದೆ ತಾವು ಆಡಳಿತದ ವೇಳೆ ಜಾರಿಗೊಳಿಸಿದ್ದಂತ ಇಂದಿರಾ ಕ್ಯಾಂಟೀನ್‌ಗಳನ್ನು ಪುನರಾರಂಭಿಸಲಾಗಿತ್ತು. ಬಡವರ ಫೈವ್ ಸ್ಟಾರ್ ಎಂಬುದಾಗಿಯೇ ಕರೆಸಿಕೊಳ್ಳುವಂತ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಹತ್ವದ ಬದಲಾವಣೆಗೆ ಸರ್ಕಾರ ಮುಂದಾಗಿದೆ. ಈಗ ಕ್ಯಾಂಟೀನ್ ಮೆನು ಬದಲಾವಣೆ ಮಾಡುವ ಮೂಲಕ ಇಂದಿರಾ ಕ್ಯಾಂಟೀನ್‌ಗಳನ್ನು ಹೈಟೆಕ್ ಮಾಡಲು ಮುಂದಾಗಿದೆ. ಇದಲ್ಲದೇ ಇಂದಿರಾ ಕ್ಯಾಂಟೀನ್‌ಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೂ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಒಂದು ವೇಳೆ ಇದು ಜಾರಿಯಾದ್ರೇ ಇಂದಿರಾ ಕ್ಯಾಂಟೀನ್‌ಗಳಲ್ಲಿ ನಂದಿನಿ ಐಸ್ ಕ್ರೀಂ, ಹಾಲು, ಮೊಸರು ಸೇರಿದಂತೆ ವಿವಿಧ ಉತ್ಪನ್ನಗಳು ಲಭ್ಯವಾಗುವಂತೆ ಆಗಲಿದೆ. 

ಆಹಾರದ ಮೆನು ಶೀಘ್ರವೇ ಬದಲಾವಣೆ: ಇಂದಿರಾ ಕ್ಯಾಂಟೀನ್ ತಪಾಸಣೆಯ ವೇಳೆ ಸಾರ್ವಜನಿಕರ ಬಳಿ ತಿಂಡಿಯ ಗುಣಮಟ್ಟ ವಿಚಾರಿಸಿದಾಗ ಪ್ರತಿನಿತ್ಯ ಅಕ್ಕಿಯಿಂದ ಮಾಡಿದಂತಹ ಆಹಾರ ಮಾತ್ರ ಲಭ್ಯವಾಗಲಿದೆ. ಅದನ್ನು ಬದಲಿಸಲು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀಡುವ ಆಹಾರದ ಮೆನು ಶೀಘ್ರವೇ ಬದಲಾಗಲಿದೆ. 

'ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲೂ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಿ'

ದಿನನಿತ್ಯ ಬೇರೆ-ಬೇರೆ ತಿಂಡಿ-ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಇಂದಿರಾ ಕ್ಯಾಂಟೀನ್‌ಗಳಿಗೆ ನಿಯೋಜಿಸಿರುವ ಮಾರ್ಷಲ್‌ಗಳನ್ನು ಬರೀ ಇಂದಿರಾ ಕ್ಯಾಂಟೀನ್ ನೋಡಿಕೊಳ್ಳುವುದು ಮಾತ್ರವಲ್ಲದೇ ಬೇರೆ-ಬೇರೆ ಜವಾಬ್ದಾರಿಗಳನ್ನು ಸಹ ನೀಡಬೇಕೆಂದು ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಯಿತು. ಜೊತೆಗೆ ಇಂದಿರಾ ಕ್ಯಾಂಟೀನ್/ಆಹಾರದ ಗುಣಮಟ್ಟ/ಹೆಚ್ಚು ಹಣ ಪಡೆಯುವ ವಿಚಾರವಾಗಿ ದೂರುಗಳಿದ್ದಲ್ಲಿ ಪಾಲಿಕೆಯ ಉಚಿತ ಸಹಾಯವಾಣಿ ಸಂಖ್ಯೆಯಾದ 1533 ಗೆ ಕರೆ ಮಾಡಿ ದೂರುಗಳನ್ನು ನೀಡಬಹುದು ಎಂದು ಹೇಳಿದರು.

ಇಂದಿರಾ ಕ್ಯಾಂಟೀನ್‌ಗಳ ಮೇಲೆ ಬಿಬಿಎಂಪಿ ಅಧಿಕಾರಿಗಳಿಂದ ನಿಗಾ: ಗರದ ಇಂದಿರಾ ಕ್ಯಾಂಟೀನ್‌ಗಳ ಅವ್ಯವಸ್ಥೆ ಸರಿಪಡಿಸುವ ಉದ್ದೇಶದಿಂದ ಒಂದೊಂದು ಕ್ಯಾಂಟೀನ್‌ಗೆ ಒಬ್ಬೊಬ್ಬ ಅಧಿಕಾರಿ ನೇಮಕ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿಗಳು ಭಾನುವಾರ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಅದರಂತೆ ನಗರದ ಪ್ರತಿ ಇಂದಿರಾ ಕ್ಯಾಂಟೀನ್‌ಗೆ ನಿರ್ದಿಷ್ಟವಾಗಿ ಒಬ್ಬೊಬ್ಬ ಅಧಿಕಾರಿಯನ್ನು ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

ನಿಯೋಜಿತ ಅಧಿಕಾರಿಯು ಕಡ್ಡಾಯವಾಗಿ ಪ್ರತಿ ದಿನ ಆಹಾರ ಪೂರೈಕೆ ಆಗುವ ಸಮಯಕ್ಕೆ ಸರಿಯಾಗಿ ಕ್ಯಾಂಟೀನ್‌ಗೆ ಭೇಟಿ ನೀಡಬೇಕು. ಆಹಾರ ಸೇವನೆ ಮಾಡಿ ಗುಣಮಟ್ಟಪರಿಶೀಲಿಸಬೇಕು. ಕೆಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣ ಪಡೆಯುತ್ತಿರುವುದು ಉಪ ಮುಖ್ಯಮಂತ್ರಿಗಳ ಪರಿಶೀಲನೆ ವೇಳೆ ತಿಳಿದು ಬಂದಿದೆ. ಈ ಬಗ್ಗೆ ನಿಗಾ ವಹಿಸಬೇಕು. ಇದಲ್ಲದೇ, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಪ್ರತಿಯೊಂದನ್ನು ಪರಿಶೀಲಿಸಿ ದೈನಂದಿನ ವರದಿ ತಯಾರಿಸಿ ಸಲ್ಲಿಸಬೇಕು ಎಂದು ತಿಳಿಸಿದರು.

ಹೋಟೆಲ್‌ ಊಟ ಮೀರಿಸಿದ ಇಂದಿರಾ ಕ್ಯಾಂಟೀನ್‌: ತರಹೇವಾರಿ ಊಟದ ಮೆನು ಬಿಡುಗಡೆ

ಪ್ರತ್ಯೇಕ ತಂತ್ರಾಂಶ ರಚನೆ: ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡುವ ಅಧಿಕಾರಿಗಳು ದೈನಂದಿನ ವರದಿ ಸಲ್ಲಿಸಲು ಪ್ರತ್ಯೇಕ ತಂತ್ರಾಂಶವೊಂದನ್ನು ರಚಿಸಲಾಗುವುದು. ಈ ತಂತ್ರಾಂಶದ ಮೂಲಕ ವರದಿ ಸಲ್ಲಿಸಬೇಕಾಗುತ್ತದೆ. ಪ್ರತ್ಯೇಕ ತಂತ್ರಾಂಶ ಸಿದ್ಧಗೊಳ್ಳುವವರೆಗೆ ಕೈಪಿಡಿ ಮೂಲಕ ಸಲ್ಲಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.